ಸಂಡೂರು: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಬಳ್ಳಾರಿ ಇವರ ನೇತೃತ್ವದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ದಿನಾಂಕ 24-03-2025ರಂದು ಜಿಲ್ಲಾ ಆರೋಗ್ಯ ಭವನ, ಬಳ್ಳಾರಿಯಲ್ಲಿ ಆಯೋಜಿಸಲಾಗಿತ್ತು.
ಈ ದಿನದ ವಿಶೇಷತೆಯು ಕ್ಷಯರೋಗಕ್ಕೆ ಕಾರಣವಾಗುವ ಮೈಕೋಬ್ಯಾಕ್ಟಿರಿಯಂ ಟ್ಯೂಬರ್ಕುಲೈ ಎಂಬ ರೋಗಾಣುವನ್ನು ಜರ್ಮನ್ ವೈಜ್ಞಾನಿಕರಾದ ರಾಬರ್ಟ್ ಹೆನ್ರಿ ಹೆರ್ಮನ್ ಕಾಕ್ ಅವರು ದಿನಾಂಕ 24 ಮಾರ್ಚ್ 1882ರಂದು ಕಂಡುಹಿಡಿದ ಸ್ಮರಣಾರ್ಥ ಆಚರಿಸಲ್ಪಡುವ ವಿಶ್ವ ಕ್ಷಯರೋಗ ದಿನವಾಗಿದೆ.
ಈ ಕಾರ್ಯಕ್ರಮದ ವೇಳೆ, 2024ನೇ ಸಾಲಿನಲ್ಲಿ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಗ್ರಾಮೀಣ ಭಾಗದಲ್ಲಿ ಕ್ಷಯರೋಗ ನಿವಾರಣೆಯಲ್ಲಿ ಶ್ರೇಷ್ಠ ಸೇವೆಯನ್ನು ಸಲ್ಲಿಸಿದಕ್ಕಾಗಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಾದ (THO) ಡಾ.ಭರತ್ ಕುಮಾರ್ ಅವರಿಗೆ ಈ ವರ್ಷದ “BEST RURAL MEDICAL OFFICER” ಪ್ರಶಸ್ತಿ ಲಭಿಸಿದೆ.

ಡಾ. ಭರತ್ ಕುಮಾರ್ ಅವರು ತಮ್ಮ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ನಿರಂತರ ಶ್ರಮಿಸಿದ್ದಾರೆ. ಕ್ಷಯರೋಗ ನಿರ್ಮೂಲನೆ ಹಾಗೂ ಅರಿವು ಮೂಡಿಸುವ ಕಾರ್ಯಗಳಲ್ಲಿ ಅವರ ಪಾತ್ರ ಅತ್ಯಂತ ಶ್ಲಾಘನೀಯವಾಗಿದ್ದು, ಸಾರ್ವಜನಿಕರಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಿ, ಯಶಸ್ವಿ ಚಿಕಿತ್ಸೆಗೆ ನಾಂದಿ ಹಾಡುವಲ್ಲಿ ಮುಂಚೂಣಿಯಲ್ಲಿದ್ದರು.

ಕಾರ್ಯಕ್ರಮದಲ್ಲಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಭರತ್ ಕುಮಾರ್ ಅವರಿಗೆ ಗೌರವ ಪತ್ರ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಮತ್ತು ಗಣ್ಯರು ಅವರ ಸಾಧನೆಗೆ ಶ್ಲಾಘನೆ ಸಲ್ಲಿಸಿದರು.
ಡಾ. ಭರತ್ ಕುಮಾರ್ ಅವರು ಮಾತನಾಡಿ, “ಈ ಗೌರವ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಆರೋಗ್ಯ ಸೇವೆಗಾಗಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದ್ದು, ಇನ್ನಷ್ಟು ಜನತೆಗೆ ಆರೋಗ್ಯ ಸೌಲಭ್ಯಗಳನ್ನು ತಲುಪಿಸುವ ಶ್ರಮ ಮುಂದುವರಿಸುತ್ತೇನೆ” ಎಂದು ಭಾವೋದ್ರಿಕ್ತರಾಗಿ ಹೇಳಿದರು.
ಈ ಕಾರ್ಯಕ್ರಮವು ಜಿಲ್ಲೆಯ ಆರೋಗ್ಯ ಸೇವೆಗೆ ಪ್ರೇರಣೆಯಾಗಿದೆ ಎಂದು ಹಿರಿಯ ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟರು.