ತೋರಣಗಲ್ಲು, ಏಪ್ರಿಲ್ 26 – ಸಂಡೂರು ತಾಲೂಕಿನ ತೋರಣಗಲ್ಲು ಓಪಿ ಜೆ ಕೇಂದ್ರದಲ್ಲಿ ಇಂದು ಜೆಎಸ್ಡಬ್ಲ್ಯೂ ಫೌಂಡೇಶನ್ ಮತ್ತು ಕೃಷಿ ವಿಜ್ಞಾನ ಕೇಂದ್ರ (ಹಗರಿ) ಸಹಯೋಗದಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡ ಆಯ್ದ ರೈತರಿಗೆ ಉಚಿತ ಕುರಿಗಳ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಜೆಎಸ್ಡಬ್ಲ್ಯೂ ಸ್ಟೀಲ್ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಉದ್ಘಾಟಿಸಿ, ರೈತರಿಗೆ ಕುರಿಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ರೈತರು ಕೃಷಿ ಅವಲಂಬಿತ ಉಪಕಸುಬಾದ ಕುರಿ ಸಾಕಾಣಿಕೆಯನ್ನು ತಾವು ಕೈಗೊಂಡರೆ ಆದಾಯ ಹೆಚ್ಚಿಸಿಕೊಳ್ಳಬಹುದು ಮತ್ತು ಕೃಷಿ ಭೂಮಿಗೆ ಉತ್ತಮ ಜೈವಿಕ ಗೊಬ್ಬರವೂ ದೊರೆಯುತ್ತದೆ,” ಎಂದು ಹೇಳಿದರು.

ಜೆಎಸ್ಡಬ್ಲ್ಯೂ ಫೌಂಡೇಶನ್ನ ಸಿಎಸ್ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, “ಸಮಗ್ರ ಕೃಷಿಯ ಭಾಗವಾಗಿ ಈಗಾಗಲೇ 50 ರೈತರಿಗೆ ಬೆಂಬಲ ನೀಡಲಾಗುತ್ತಿದ್ದು, 25 ರೈತರಿಗೆ ಕೋಳಿ ಸಾಕಾಣಿಕೆಗೆ ಕೋಳಿಗಳನ್ನು ವಿತರಿಸಲಾಗಿದೆ. ಇದೀಗ 5 ಕುಟುಂಬಗಳಿಗೆ ಪ್ರಾಯೋಗಿಕವಾಗಿ 25 ಕುರಿಗಳನ್ನು ಉಚಿತವಾಗಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 200ಕ್ಕೂ ಹೆಚ್ಚು ರೈತರಿಗೆ ಸಂಡೂರು ಭಾಗದಲ್ಲಿ ಸಮಗ್ರ ಕೃಷಿ ಉತ್ತೇಜನ ನೀಡಲು ಯೋಜನೆ ಹಾಕಲಾಗಿದೆ,” ಎಂದು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರ (ಹಗರಿ) ಮುಖ್ಯಸ್ಥ ಡಾ. ಗೋವಿಂದಪ್ಪ ಮಾತನಾಡಿ, “ಸ್ಥಳೀಯವಾಗಿ ಸಾಕಾಣಿಕೆ ಮಾಡಲು ಸೂಕ್ತವಾಗಿರುವ ಬಳ್ಳಾರಿ ಭಾಗದ ವಾತಾವರಣಕ್ಕೆ ಹೊಂದಿಕೆಯಾಗುವ ಕೆಂಗುರಿ ತಳಿಯ ಕುರಿಗಳನ್ನು ನೀಡಲಾಗಿದೆ. ರೈತರು ಈ ಕುರಿಗಳನ್ನು ಉತ್ತಮವಾಗಿ ಪೋಷಿಸಿ ಹೆಚ್ಚಿನ ಆದಾಯ ಗಳಿಸಬೇಕು,” ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜೆಎಸ್ಡಬ್ಲ್ಯೂ ಫೌಂಡೇಶನ್ ಕೃಷಿ ವಿಭಾಗದ ಸಂಯೋಜಕ ನಾಗನಗೌಡ, ಕೃಷಿ ವಿಜ್ಞಾನಿಗಳಾದ ಡಾ. ರವಿ ಮತ್ತು ಡಾ. ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ರೈತರ ಭಾಗಿ ತಾಳಿಕೆ ಕಂಡುಬಂದಿತು.