ವರದಿ : ನಾಗರಾಜ್ ಎನ್
ಸಂಡೂರು: ಸಂಡೂರು ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಪ್ರಪ್ರಥಮ ಬಾರಿಗೆ ನಗರದಲ್ಲಿಯೇ ಸ್ಕಂದಪುರ ಲೇಔಟ್ನೊಳಗಿನ ಒಳಾಂಗಣ ಕ್ರೀಡಾಂಗಣದಲ್ಲಿ, ಸಂಡೂರು ತಾಲೂಕು ಆಹ್ವಾನಿತ ಸರ್ಕಾರಿ ನೌಕರರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಷಣ್ಮುಖ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ, “ಸಂಡೂರಿನಲ್ಲಿ ಕ್ರೀಡಾ ಮನೋಭಾವನೆ ಹೊಂದಿರುವ ಎಲ್ಲರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಸಂಡೂರು ಸ್ಪೋರ್ಟ್ಸ್ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.
ಅವರ ಮಾತಿನಲ್ಲಿಂದು, ಮೊಬೈಲ್ ಗಳ ಆಕರ್ಷಣೆಗೆ ಮಕ್ಕಳಿಗೆ ಆಟ ಪಾಠಗಳತ್ತ ಒಲವು ಕಡಿಮೆಯಾದ ಸ್ಥಿತಿಯನ್ನು ಖಂಡಿಸಿ, ಮಕ್ಕಳಿಗೆ ಪಾಠದ ಜೊತೆಗೆ ಆಟದ ಕಡೆಗೂ ಪ್ರೋತ್ಸಾಹ ನೀಡುವ ಸಲುವಾಗಿ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಹಾಗೂ ಸರ್ಕಾರಿ ನೌಕರರ ರಿಗೆ ಬೇಸಿಗೆ ಶಿಬಿರದ ಮೂಲಕ ಶಟಲ್ ಬ್ಯಾಡ್ಮಿಂಟನ್ ತರಬೇತಿಯನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದ ಈ.ತುಕಾರಾಮ್ ಅವರು, “ಸಂಡೂರಿನಲ್ಲಿ ಪ್ರಥಮ ಬಾರಿಗೆ ರಚನೆಯಾಗಿರುವ ಸಂಡೂರು ಸ್ಪೋರ್ಟ್ಸ್ ಟ್ರಸ್ಟ್ ಗೆ ಹಾರ್ದಿಕ ಅಭಿನಂದನೆಗಳು. ಸಮಾಜಕ್ಕಾಗಿ ಒಳ್ಳೆಯದನ್ನು ಮಾಡುವ ಹಂಬಲವೇ ನಮ್ಮ ಉದ್ದೇಶ” ಎಂದು ಹೇಳಿದರು.
ಅವರು ತಮ್ಮ ಬಾಲ್ಯದ ಆಟಪಾಠದ ಅನುಭವವನ್ನು ಹಂಚಿಕೊಳ್ಳುತ್ತಾ, “ಆಟಪಾಠದಿಂದ ಕಲಿತು ಬೆಳೆದ ಸ್ಪೂರ್ತಿಯೇ ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ” ಎಂದು ಹೇಳಿದರು.
ನಗರ ಹಾಗೂ ಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿಯ ಕುರಿತು ಮಾತನಾಡಿ, “ರಸ್ತೆಗಳಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದೆ. 2050ರ ತನಕ ನೀರಿನ ಕೊರತೆ ಬಾರದಂತೆ ನೀತಿ ರೂಪಿಸಿ ಕಾರ್ಯಗತಗೊಳಿಸಲಾಗಿದೆ” ಎಂದು ವಿವರಿಸಿದರು.
ಅಲ್ಲದೆ, “ಅಭಿವೃದ್ಧಿ ವಿಚಾರದಲ್ಲಿ ವೈಜ್ಞಾನಿಕವಾಗಿ ಚರ್ಚೆ ಮಾಡಿದರೆ ಒಳಿತು, ರಾಜೀಯಾಗೋ ಪ್ರಶ್ನೆ ಇಲ್ಲ” ಎಂದು ಅವರು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
“ನಂಜುಡಪ್ಪ ವರದಿ ಆಧಾರವಾಗಿ ಎಲ್ಲಾ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ತಾಲ್ಲೂಕನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಆಕರ್ಷಕ ಸ್ಥಳಗಳಿಗೆ ನೀಲಿ ನಕ್ಷೆ ರೂಪಿಸಲಾಗಿದೆ. ಸ್ಕಂದಪುರದಲ್ಲಿನ ಪಾರ್ಕನ್ನು ಅಭಿವೃದ್ಧಿಪಡಿಸಲು ಸಂಪೂರ್ಣ ಸಹಕಾರ ನೀಡುತ್ತೇನೆ ಹಾಗೂ ಪಟ್ಟಣದಲ್ಲಿ ಇರುವ ಎಲ್ಲಾ ಪಾರ್ಕುಗಳಿಗಾಗಿ 2 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದೇನೆ” ಎಂದು ಘೋಷಿಸಿದರು. ಸ್ಕಂದಪುರದ ಪಾರ್ಕ್ ನ ಮೇಲ್ವಿಚಾರಣೆಯನ್ನು ಸಂಡೂರು ಸ್ಪೋರ್ಟ್ಸ್ ಟ್ರಸ್ಟ್ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಂತರ ಮಾತನಾಡಿದ ತಹಸೀಲ್ದಾರ್ ಅನಿಲ್ ಕುಮಾರ್ ಜೆ., “ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳು ಆಟಗಳತ್ತ ಒಲವು ತೋರುವ ಪ್ರಮಾಣ ಕಡಿಮೆಯಾಗಿದೆ. ಮಕ್ಕಳು ಶಿಕ್ಷಣದ ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತರಾಗಿರಬೇಕು. ಯೋಗ, ಆಟಗಳು ಮಕ್ಕಳ ಅಭಿವೃದ್ಧಿಗೆ ಅತ್ಯಂತ ಅಗತ್ಯ” ಎಂದು ತಿಳಿಸಿದರು.
ಪುರಸಭೆಯ ಅಧ್ಯಕ್ಷ ಸಿರಾಜ್ ಹುಸೇನ್ ಅವರು, “ಸಮಾಜಿಕ ಸೇವೆ ಮಾಡಲು ರಾಜಕೀಯದಲ್ಲಿರುವುದು ಅಥವಾ ಪತ್ರಕರ್ತನಾಗಿರುವುದು ಒಂದು ಉತ್ತಮ ಮಾರ್ಗ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟ್ರಸ್ಟ್ ಅಧ್ಯಕ್ಷ ಎಸ್. ಬೊಮ್ಮಯ್ಯ ಮಾತನಾಡಿ, ಟ್ರಸ್ಟ್ ನ ಉದ್ದೇಶ ಹಾಗೂ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಿಕಾ ಮಲ್ಲಿಕಾರ್ಜುನ (ಎಸ್.ಆರ್.ಎಸ್ ಶಾಲೆ ಶಿಕ್ಷಕಿ) ನೆರವೇರಿಸಿದರು.
ಪ್ರಾರ್ಥನೆಗಾಗಿ ಅಶ್ವಿನಿ ಶಶಿಧರ ಹಾಗೂ ಶಶಿಧರ ಪಲ್ಲವಿ ಅವರು ಭಾಗವಹಿಸಿದರು. ಸ್ವಾಗತ ಭಾಷಣವನ್ನು ಅಂಬರೀಶ್ (ಹಿಂದಿ ಶಿಕ್ಷಕರು) ನೀಡಿದರು.
ವೇದಿಕೆಯಲ್ಲಿ ಸಂಸದ ಇರೆಗಾರ್ ತುಕಾರಾಮ್, ತಹಸೀಲ್ದಾರ್ ಅನಿಲ್ ಕುಮಾರ್ ಜೆ., ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷ ಲತಾ ಉಜ್ಜಪ್ಪ, ಆಶಾಲತಾ ಸೋಮಪ್ಪ ಹಾಗೂ ಟ್ರಸ್ಟ್ ಅಧ್ಯಕ್ಷ ಎಸ್. ಬೊಮ್ಮಯ್ಯ ಉಪಸ್ಥಿತರಿದ್ದರು.
ಸಮಾರಂಭ ಸ್ಕಂದಪುರ ಲೇಔಟ್ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.