ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು : ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಕೂಲಿಕಾರರ ಕುಟುಂಬಗಳಿಗೆ ವಾರ್ಷಿಕ 100 ದಿನಗಳ ಕಾಲ ನಿರಂತರವಾಗಿ ಕೆಲಸ ಒದಗಿಸುವ ಮೂಲಕ ವಲಸೆ ಪ್ರವೃತ್ತಿಯನ್ನು ತಗ್ಗಿಸಬಹುದು ಎಂದು ತಾಪಂ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಹೆಚ್.ವಿಜಯಕುಮಾರ್ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ವಿಜಯನಗರ, ತಾಲ್ಲೂಕು ಪಂಚಾಯಿತಿ ಕೊಟ್ಟೂರು ಹಾಗೂ ಕೆ. ಅಯ್ಯನಹಳ್ಳಿ ಗ್ರಾಪಂನ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದುಡಿಯೋಣ ಬಾ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಳಗೊಳ್ಳದ ಕುಟುಂಬಗಳನ್ನು ಗುರುತಿಸಿ ಅಕುಶಲ ಕೆಲಸಕ್ಕಾಗಿ ನೋಂದಾಯಿಸುವುದು. ನೋಂದಾಯಿತ ಕೂಲಿಕಾರರಿಗೆ ನಿರಂತರ ಕೆಲಸವನ್ನು ಒದಗಿಸಿ ವಲಸೆ, ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಪ್ಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಜೊತೆಗೆ ದುರ್ಬಲ ವರ್ಗದ ಕುಟುಂಬಗಳ ವಿಶೇಷ ಚೇತನರು, ಮಹಿಳಾ ಪ್ರಾಧಾನ್ಯ ಕುಟುಂಬಗಳು, ಲಿಂಗತ್ವ ಅಲ್ಪಸಂಖ್ಯಾತರ ಭಾಗವಹಿಸುವಿಕೆ ಹೆಚ್ಚಳದ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಅಭಿಯಾನದ ಭಾಗವಾಗಿ ಗ್ರಾಪಂ ಮಟ್ಟದಲ್ಲಿ ಇರುವಂತಹ ಸಿಬ್ಬಂದಿಗಳು ಕೆಲಸಕ್ಕಾಗಿ ಕೂಲಿಕಾರರಿಂದ ಬೇಡಿಕೆ ಸಂಗ್ರಹಿಸುವುದು. ಮನೆ ಭೇಟಿ ಹಾಗೂ ವಿಶೇಷ ರೋಜಗಾರ್ ದಿನಾಚರಣೆ ನಡೆಸುವ ಮೂಲಕ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸುವುದು. ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ಸಕಾಲದಲ್ಲಿ ಕೆಲಸ ಒದಗಿಸುವುದು. ವಿಶೇಷವಾಗಿ ಮಹಿಳೆಯರಿಗೆ ಕೆಲಸ ಒದಗಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಹಿಳಾ ಭಾಗವಹಿಸುವಿಕೆ ಹೆಚ್ಚಳಕ್ಕೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು.
ಇದೇ ವೇಳೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಯಿತು. ಆಶಕರ್ಯಕರ್ತೆಯರು, ಆರೋಗ್ಯ ಸಹಾಯಕರು ತಪಾಸಣೆ ನಡೆಸಿದರು.
ಗ್ರಾಪಂ ಅಧ್ಯಕ್ಷರಾದ ಹೇಮಾಕ್ಷಿ ರೇಣುಕಪ್ಪ ಅವರು ಉದ್ಘಾಟಿಸಿದರು. ಸದಸ್ಯರಾದ ಕೆ.ಕೊಟ್ರೇಶ್, ಸಿದ್ದಲಿಂಗಸ್ವಾಮಿ, ಪಿಡಿಓ ರಾಘವೇಂದ್ರ ಅಣಜಿ, ಐಇಸಿ ಸಂಯೋಜಕರಾದ ಪ್ರಭಕುಮಾರ್, ಗ್ರಾಪಂ ಸಿಬ್ಬಂದಿ ಕೊಟ್ರೇಶ್, ಜಿಕೆಎಂ, ಬಿಎಫ್ ಟಿ, ಗ್ರಾಮಸ್ಥರು, ಮೇಟಿಗಳು, ಕೂಲಿಕಾರರು ಇದ್ದರು.
■ಗ್ರಾಮೀಣ ಭಾಗದ ಜನರು ಕೆಲಸವನ್ನು ಹುಡುಕಿಕೊಂಡು ನಗರ, ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಗ್ರಾಮದ ವ್ಯಾಪ್ತಿಯಲ್ಲಿಯೇ ನರೇಗಾ ಯೋಜನೆಯಡಿ 100 ದಿನಗಳ ಕಾಲ ಕೆಲಸ ಒದಗಿಲಾಗುತ್ತದೆ. ಈ ಹಿನ್ನೆಲೆಯಲ್ಲಿ ದುಡಿಯೋಣ ಬಾ ಅಭಿಯಾನದ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ.
- ಡಾ.ಬಿ.ಆನಂದ್ ಕುಮಾರ್,
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಕೊಟ್ಟೂರು