ವರದಿ : ಜಿ ಎಮ್ ಬಸಯ್ಯಸ್ವಾಮಿ
ಕುರುಗೋಡು ತಾಲೂಕಿನ ಶಿರಿಗೇರಿ ವ್ಯಾಪ್ತಿಯ ಸಮೀಪದ ದಾಸಪುರ ಗ್ರಾಮದಲ್ಲಿ ತೋಳದಾಳಿ ನಡೆದ ಪರಿಣಾಮ 12 ಕುರಿಗಳು ಸಾವನ್ನಪ್ಪಿ, ಹಲವಾರು ಕುರಿಗಳು ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಬಸವರಾಜ ಅವರಿಗೆ ಸೇರಿದ ಕುರಿಗಳ ಹಿಂಡಿನ ಮೇಲೆ ಬೆಳ್ಳಂ ವೇಳೆ ತೋಳ ದಾಳಿ ನಡೆಸಿದೆ. ಒಟ್ಟು 28 ಕುರಿಗಳಲ್ಲಿ ಕೇವಲ ನಾಲ್ಕು–ಐದು ಕುರಿಗಳು ಮಾತ್ರ ಸುರಕ್ಷಿತವಾಗಿ ಉಳಿದಿದ್ದು, 12 ಕುರಿಗಳು ಸಾವನ್ನಪ್ಪಿವೆ. ಉಳಿದ ಕುರಿಗಳು ಗಂಭೀರವಾಗಿ ಗಾಯಗೊಂಡಿವೆ ಎಂದು ಕುರಿಗಳ ಮಾಲೀಕ ಬಸವರಾಜ ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪಶುವೈದ್ಯಕೀಯ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ಕುಬೇರ ಹಾಗೂ ಕಿರಿಯ ಪಶುವೈದ್ಯಾಧಿಕಾರಿ ವಿಜಯಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಪೊಲೀಸ್ ಇಲಾಖೆಯ ಹೆಚ್ಪಿಸಿ ಶರಣಪ್ಪ ಹಾಗೂ ಸಿಬ್ಬಂದಿ ಕೂಡ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದರು.
ಈ ಘಟನೆ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ತೋಳದಾಳಿಯನ್ನು ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
