ಸಂಡೂರು, ಮೇ 12: “ಇಂದಿನ ವೇಗದ ಯುಗದಲ್ಲಿ ಒತ್ತಡದಿಂದ ಕೂಡಿದ ಬದುಕಿನಿಂದ ಹೊರಬರಲು ಕ್ರೀಡೆಗಿಂತ ಉತ್ತಮ ಪರಿಹಾರವಿಲ್ಲ” ಎಂದು ಪಿಎಸ್ಐ ವೀರೇಶ್ ಮಾಳಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಡೂರು ಯೂತ್ಸ್ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಒಂದು ತಿಂಗಳ ಉಚಿತ ವಾಲಿಬಾಲ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. “ಆಟಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕವಾಗಿ ಸದೃಢತೆಯ ಜೊತೆಗೆ ಮಾನಸಿಕ ಆಳತೆ ಕೂಡ ವೃದ್ಧಿಸುತ್ತದೆ. ಕ್ರೀಡೆ ಜನರಲ್ಲಿ ಶಿಸ್ತು, ಸಹಕಾರ, ಸಹನಶೀಲತೆ, ತಂಡದ ಮನೋಭಾವನೆ ಬೆಳೆಸುತ್ತವೆ. ಎಲ್ಲರೂ ದಿನಚರಿಯಲ್ಲಿ ಕ್ರಿಯಾಶೀಲತೆಯೊಂದಿಗೆ ಇರುವುದು ಆರೋಗ್ಯಕರ ಜೀವನಕ್ಕೆ ಅಗತ್ಯ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, “ವಿದ್ಯಾರ್ಥಿಗಳಿಗೆ ಉಚಿತವಾಗಿ ವಾಲಿಬಾಲ್ ತರಬೇತಿಯನ್ನು ನೀಡಿರುವುದು ಪ್ರಶಂಸನೀಯ. ಇದರಿಂದ ಕ್ರೀಡಾ ಆಸಕ್ತಿಯು ಉತ್ಸಾಹಿತವಾಗಲಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ” ಎಂಬ ಆಶಯ ವ್ಯಕ್ತಪಡಿಸಿದರು.

40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸಮಾರೋಪದ ಅಂಗವಾಗಿ ಸ್ಥಳೀಯ ಪೊಲೀಸ್ ತಂಡ ಹಾಗೂ ಯುವಕರ ತಂಡದ ನಡುವೆ ವಾಲಿಬಾಲ್ ಪಂದ್ಯಾವಳಿ ಕೂಡ ಜರುಗಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕುಮಾರ್, ಮುಖ್ಯ ಶಿಕ್ಷಕ ದೇವರಮನೆ ನಾಗಪ್ಪ, ಹಟ್ಟಿ ಕುಮಾರಸ್ವಾಮಿ, ಎಂಎಂಎಲ್ ಮೆನೇಜರ್ ರಾಕೇಶ್ ಜಿ, ವಿಎಸ್ಎಲ್ ಅಂಜನಪ್ಪ, ತರಬೇತುದಾರರಾದ ನಾಗರಾಜ್ ಪಿಕೆ, ನಿಖಿಲ್ ಮಂಗಳೂರು, ಹೆಡ್ ಕಾನ್ಸ್ಟೇಬಲ್ ಕರಿಯಪ್ಪ ಎಚ್ ಎಂ, ಗುರುಪ್ರಸಾದ್, ವಾಲ್ಯ ನಾಯ್ಕ್, ಜಾಫರ್, ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.