ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು : ಕೊಟ್ಟೂರಿನ ಬಿಕ್ಕಿಮರುಡಿ ದುರುಗಮ್ಮ ದೇವಿಯ ರಥೋತ್ಸವ ಸೋಮವಾರ ಸಂಜೆ ಜರುಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರ ಪೈಕಿ ಕೆಲವರು ಹರಕೆ ಹೊತ್ತು ಜೀವಂತ ಕೋಳಿಗಳನ್ನು ತೂರಿ ಭಕ್ತಿ ಸಮರ್ಪಿಸಿದರು.
ವಿಶಿಷ್ಟಾಚರಣೆಯ ಇಲ್ಲಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವವು ಬೌದ್ದಪೊರ್ಣಿಮೆಯ ದಿನವಾದ ಸೋಮವಾರ ಸಂಜೆ ೬.೨೦ರ ಸುಮಾರಿನಲ್ಲಿ ಸಾವಿರಾರು ಭಕ್ತರ ಸಡಗರ ಸಂಭ್ರಮಗಳೊಂದಿಗೆ ಜರುಗಿತು.ರಥಕ್ಕೆ ಚಾಲನೆ ದೊರಕುತಿದ್ದಂತೆ ದುರುಗಮ್ಮ ದೇವಿಗೆ ಹರಕೆ ಹೊತ್ತ ಕೆಲ ಭಕ್ತರು ಜೀವಂತ ೫-೬ ಕ್ಕೂ ಹೆಚ್ಚು ಕೋಳಿಗಳನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು.
ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಏಕೈಕ ಸಂಪ್ರದಾಯ ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವದ್ದಾಗಿದ್ದು ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ದಂಡು ದಂಡಾಗಿ ಮಧ್ಯಾಹ್ನದಿಂದಲೇ ಇಲ್ಲಿನ ಕೆರೆಯ ದಂಡೆಯ ಮೇಲಿರುವ ದೇವಿಯ ಗುಡಿಯ ಬಳಿ ಜಮಾಯಿಸತೊಡಗಿದರು. ಈ ಪೈಕಿ ಹೊಸದಾಗಿ ಮದುವೆಯಾದ ದಂಪತಿಗಳ ಸಂಖ್ಯೆ ಹೆಚ್ಚಕ್ಕಿತ್ತು.
ರಥೋತ್ಸವಕ್ಕೂ ಮೊದಲು ಗುಡಿಯಿಂದ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೋಂದಿಗೆ ರಥದ ಬಳಿ ತರಲಾಯಿತು.ರಥದ ಸುತ್ತಲೂ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ಪ್ರದಕ್ಷಿಣೆ ನಡೆಯಿತು.
ನಂತರ ದೇವಿಯನ್ನು ಪಲ್ಲಕ್ಕಿಯಿಂದ ರಥದಲ್ಲಿ ಕೂರಿಸಲಾಯಿತು. ನಂತರ ದೇವಿಯ ಪಟಾಕ್ಷಿ ಹರಾಜು ಪ್ರಕ್ರಿಯೆಯಲ್ಲಿ ಎ ಹರೀಶ್ ರಾಂಪುರ ೫೫,೫೦೧ ಸಾವಿರ ರೂಗಳಿಗೆ ಕೂಗಿ ತನ್ನದಾಗಿಸಿಕೊಂಡರು. ಈ ಪ್ರಕ್ರಿಯೆ ಮುಗಿಯುತ್ತಿಂದತೆಯೇ. ಭಕ್ತರು ಜೀವಂತ ಕೋಳಿಗಳನ್ನು ತೂರಿದರು.
ಕೋಳಿಗಳನ್ನು ತೊರುತ್ತಿದ್ದಂತೆ ರಾಶಿಯೋಪಾದಿಯಲ್ಲಿ ಬಾಳೆಹಣ್ಣುಗಳನ್ನು ಮತ್ತಷ್ಟು ಬಗೆಯ ಭಕ್ತರು ತೂರಿ ಭಕ್ತಿ ಸರ್ಮಪಿಸಿದರು. ರಥೋತ್ಸವ ಸುಮಾರು ೩೦೦ ಮೀಟರ್ ದೂರವಿರುವ ಆಂಜನೇಯ ದೇವಸ್ಥಾನದ ಬಳಿ ಸಾಗಿ ವಾಪಸ್ ಮರಳಿ ಬಂದು ದುರುಗಮ್ಮ ಗುಡಿಯ ಮುಂಭಾಗದ ಬಳಿ ನಿಲುಗಡೆಗೊಂಡಿತು.
ಶ್ರೀದುರುಗಮ್ಮ ದೇವಿ ಜಾತ್ರಾ ಸಮಯದಲ್ಲಿ ಕೋವಿ ನಾಗೇಂದ್ರಪ್ಪ , ಪಕ್ಕಿರಪ್ಪ, ಉಜ್ಜಿನಿ ಚೌಡಪುರ ನಾಗರಾಜ, ದುರುಗೇಶ್, ಇನ್ನು ಅನೇಕ ಮುಖಂಡರು ಹಾಗೂ ಭಕ್ತರು ರಥೋತ್ಸವದ ಸಮಯದಲ್ಲಿ ಭಾಗಿಯಾಗಿದ್ದರು.