ಕೊಟ್ಟೂರು :ಬಯಲು ನಾಡಿನ ಶಕ್ತಿ ದೇವತೆ ಎಂದೇ ಹೆಸರಾದ ಪಕ್ಕದ ಜಗಳೂರು ತಾಲೂಕಿನ ಮಡ್ರಳ್ಳಿ ಚೌಡಮ್ಮ ದೇವಿಯ ರಥೋತ್ಸವ ಮಾರ್ಚ್ 6ರಂದು ನಡೆಯಿಲಿರುವ ಹಿನ್ನಲೆಯಲ್ಲಿ ಮಡ್ರಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 500 ಕ್ಕೂ ಹೆಚ್ಚು ಜನರು ಪಾದಯಾತ್ರೆ ಮೂಲಕ ಗುರುವಾರ ಫೆಬ್ರವರಿ 26ರಂದು ಕೊಟ್ಟೂರಿಗೆ ಆಗಮಿಸಿ ಜಾತ್ರೆಗೆ ಬೇಕಾದ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಸಾಮಾನುಗಳನ್ನು ಖರೀದಿಸಿದರು.
ಸುಮಾರು ವರ್ಷಗಳಿಂದ ಮಡ್ರಳ್ಳಿಯಿಂದ ಈ ಕಾರಣಕ್ಕಾಗಿ ಪಾದಯಾತ್ರೆ ಮೂಲಕ ಕೊಟ್ಟೂರಿಗೆ ಬಂದು ಪೂಜಾ ಬಳಕೆಯ ಸಾಮಾನುಗಳನ್ನು ಖರೀದಿಸುವುದನ್ನು ಪದ್ದತಿ ಮಾಡಿಕೊಂಡಿದ್ದು ಅದರಂತೆಯೇ ಈ ಪದ್ದತಿಯನ್ನು ಮುಂದುವರಿಸಿದರು. ಚೌಡಮ್ಮ ದೇವಿಗೆ ಕೊಟ್ಟೂರಿನಿಂದ ಖರೀದಿಸಿದ ಕುಂಕುಮ, ಬಳೆ, ಭಂಡಾರ ಸಾಮಾನುಗಳಿಂದಲೇ ಪೂಜೆ ಮಾಡುವ ಕಾರ್ಯವನ್ನು ನೆರವೇರಿಸಲಿದ್ದಾರೆ.
ಈ ದೇವಿಗೆ ಈ ಬಗೆಯ ಪೂಜಾ ಕಾರ್ಯದ ಮಡಿಲಕ್ಕಿಯನ್ನು ಮಾಡಿಕೊಂಡು ಕೊಟ್ಟೂರು ಜನರ ಪೂಜಾಗಳೊಂದಿಗೆ ಗುರುವಾರ ರಾತ್ರಿ 26ರ ನಂತರ ಪಾದಯಾತ್ರೆ ಮೂಲಕವೇ ಮಡ್ರಳ್ಳಿಗೆ ತೆರಳುವತ್ತ ಮುಂದಾದರು. ಶುಕ್ರವಾರ ಬೆಳಿಗ್ಗೆ 5-6 ರ ಸುಮಾರಿಗೆ ಪಾದಯಾತ್ರಿಗಳು ಮಡ್ರಳ್ಳಿಗೆ ಪ್ರವೇಶ ಪಡೆಯುತ್ತಿದ್ದಂತೆ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಬಗೆಯ ವಾದ್ಯಗಳೊಂದಿಗೆ ಮಡ್ರಳ್ಳಿಗೆ ಬರಮಾಡಿಕೊಂಡು ಚೌಡಮ್ಮ ದೇವಸ್ಥಾನಕ್ಕೆ ತೆಗೆದುಕೊಂಡು ಹೋದರು.
ಶ್ರೀಚೌಡಮ್ಮ ದೇವಸ್ಥಾನದ ಪೂಜಾ ಬಳಗದವರೊಂದಿಗೆ ಪುರುಷರು, ಮಹಿಳೆಯರು ಪಾದಯಾತ್ರೆ ಕೈಗೊಂಡು ಶ್ರೀದೇವಿಗೆ ತಮ್ಮ ಭಕ್ತಿ ಸಮರ್ಪಿಸಿದರು.
■ ಮಡ್ರಳ್ಳಿ ಚೌಡಮ್ಮ ದೇವಿಯ ರಥೋತ್ಸವ ಹುಣ್ಣಿಮೆಯ ನಂತರ ಅಂದರೇ ಮಾರ್ಚ್ 06ರಂದು ನಡೆಯಲಿದ್ದು ಈ ಕಾರಣಕ್ಕಾಗಿ ದೇವಿಗೆ ಮಡಿಲಕ್ಕಿಯ ಸಾಮಾನುಗಳನ್ನು ಖರೀದಿಸಲು ಕೊಟ್ಟೂರಿನ ಸಂತೆಗೆ ಬಂದಿದ್ದೇವೆ. ಕೊಟ್ಟೂರಿನಿಂದ ಪ್ರತಿವರ್ಷ ಈ ಬಗೆಯ ಸಾಮಾನುಗಳನ್ನು ಖರೀದಿಸಿಕೊಂಡು ದೇವಿಗೆ ಅರ್ಪಣೆ ಮಾಡುವುದು ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಡ್ರಳ್ಳಿ ಮತ್ತು ಸುತ್ತಮುತ್ತಲಿನಿಂದ ನೂರಾರು ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕವೇ ಬಂದಿದ್ದು ಪುನಃ ಪಾದಯಾತ್ರೆ ಮೂಲಕವೇ ಮಡ್ರಳ್ಳಿಗೆ ತೆರಳುತ್ತೇವೆ.:
— ಚೌಡಪ್ಪ ಒಬಳೇಶ ಭಕ್ತರು
ಮಡ್ರಳ್ಳಿ ಗ್ರಾಮ.
