ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು ಪಟ್ಟಣದ ಶ್ರೀ ಕೋಟೆ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಿಮಿತ್ಯವಾಗಿ, ಶನಿವಾರದಂದು ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಗಂಗೆಯನ್ನು ಪೂಜೆಗೈದು ದೇವಸ್ಥಾನಕ್ಕೆ ಭಕ್ತರು ಹೊತ್ತು ತರುತ್ತಿದ್ದಂತೆ ಅಗ್ನಿಕುಂಡ ಹಾಯುವ ಕಾರ್ಯಕ್ರಮ ಚಾಲನೆ ಪಡೆಯಿತು. ದೇವರಿಗೆ ಹರಕೆಹೊತ್ತು ವೀರಭದ್ರೇಶ್ವರ ಸ್ವಾಮಿಯ ಭಕ್ತರು ಸಾಲಾಗಿ ಅಗ್ನಿ ಹಾದು ಭಕ್ತಿ ಸಮರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಸಹ ಉತ್ಸಾಹದಿಂದ ಪಾಲ್ಗೊಂಡು ನಮಿಸಿದರು. ಅಗ್ನಿ ಹಾಯುವ ಕಾರ್ಯಕ್ರಮದ ನಂತರ ವೀರಭದ್ರ ಸ್ವಾಮಿಯ ಹಲಗೆ ಮತ್ತು ಗುಗ್ಗಳದ ಮೆರವಣಿಗೆ ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ ಸೇರಿದಂತೆ ಇತರೆಡೆ ಸಾಗಿತು.

ಈ ಸಂದರ್ಭದಲ್ಲಿ ವೀರಭದ್ರ ದೇವರನ್ನು ಮನೆದೇವರನ್ನಾಗಿಸಿಕೊಂಡ ಯುವಕರು ಮತ್ತು ಮಹಿಳೆಯರು ಚೂಪಾದ ದೊಡ್ಡ ಶಸ್ತ್ರ (ತಾಮ್ರದ ಸೂಜಿ)ಯನ್ನು ಯುವಕರು ಕಪಾಳಕ್ಕೆ ಚುಚ್ಚಿಸಿಕೊಂಡರೆ
ಮಹಿಳೆಯರು ತಮ್ಮ ಕೈ ಮೇಲ್ಬಾಗದಲ್ಲಿ ಚುಚ್ಚಿಸಿಕೊಂಡು ಭಕ್ತಿ ಸಮರ್ಪಿಸಿದರು. ಕೆಲ ಯುವಕರು ಗಂಟು ಗಂಟಾದ ದಾರವನ್ನು ಸೂಜಿಯೊಂದಿಗೆ ಚುಚ್ಚಿಸಿಕೊಂಡು ಸಾಮೂಹಿಕವಾಗಿ ನೃತ್ಯ ಮಾಡುತ್ತಾ ಸಾಗಿದ್ದು ನೋಡುಗರನ್ನು ರೋಮಾಂಚನಗೊಳಿಸಿತು ಮನಗೆದ್ದಿತು.
