ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಎಂದು ಹಾಯ್ ಸಂಡೂರು! ನ್ಯೂಸ್ನಲ್ಲಿ 07-02-2026ರಂದಲೇ ಸುದ್ದಿ ಪ್ರಕಟವಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟೂರಿನಲ್ಲಿ ಕೆಲವು ದಿನಗಳಿಂದ ಬೀದಿ ನಾಯಿಗಳ ಕಾಟ ಕಡಿಮೆಯಾಗಿದೆ ಎಂದು ಜನರು ನೆಮ್ಮದಿಯಾಗಿದ್ದರೂ, ಆ ನೆಮ್ಮದಿ ಹೆಚ್ಚು ದಿನ ಇರಲಿಲ್ಲ. ಶನಿವಾರ, 14-03-2026 ರಂದು ಸಂಜೆ ಸುಮಾರು 4 ಗಂಟೆ ವೇಳೆಗೆ, ತೇರುಗದ್ದೆ ಸಮೀಪದ ಪಟೇಲ್ ಡ್ರೆಸ್ಸೆಸ್ ಅಂಗಡಿ ಬಳಿ ಹುಚ್ಚು ನಾಯಿಯೊಂದು ಏಕಾಏಕಿ ವಿದ್ಯಾರ್ಥಿನಿ ಹಾಗೂ ವೃದ್ಧೆಯ ಮೇಲೆ ದಾಳಿ ನಡೆಸಿದೆ.

ದಾಳಿಯ ವೇಳೆ ವಿದ್ಯಾರ್ಥಿನಿಗೆ ದೇಹದ ಹಲವೆಡೆ ಕಚ್ಚಿ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಉಂಟುಮಾಡಿದ್ದು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಪೌರಕಾರ್ಮಿಕರ ಮೂಲಕ ಆ ಹುಚ್ಚು ನಾಯಿಯನ್ನು ಪತ್ತೆಹಚ್ಚಿ ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿ ಬಣಕಾರ್ ಗುರುಬಸವರಾಜ್ ಅವರು ನಾಯಿಯ ಆರ್ಭಟ ಕಂಡು ಗಾಬರಿಗೊಂಡು ವಿಷಯವನ್ನು ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಇಂತಹ ಅಪಾಯಕಾರಿ ನಾಯಿಗಳನ್ನು ಪತ್ತೆಹಚ್ಚಿ ನಿಯಂತ್ರಿಸಬೇಕು ಎಂದು ಗುರುಬಸವರಾಜ್, ದುರ್ಗಪ್ಪ, ಬಂಡಿ ಕೊಟ್ಟರೇಶ್ ಆಗ್ರಹಿಸಿದ್ದಾರೆ.
