ವರದಿ: ಜಿ ಎಂ ಬಸಯ್ಯ
ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಅವಧಿ ಮೀರಿದ ತಂಪು ಪಾನೀಯ ಮಾರಾಟವಾಗುತ್ತಿದ್ದು ನಕಲಿ, ಕಳಪೆ ಗುಣಮಟ್ಟದ, ಬಲು ಹುಳು ಇರುವ ಕುಡಿವ ನೀರಿನ ಬಾಟಲ್, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ವಿ. ವಡ್ಡರ ವೀರೇಶ್ ಆರೋಪಿಸಿದರು.
ಗ್ರಾಮದ ರೈತ ಸಂಘದ ಕಚೇರಿಯಲ್ಲಿ ನಡೆದ ರೈತರ ಸಭೆಯಲ್ಲಿ ಸೋಮವಾರ ಮಾತನಾಡಿ, ಕೆಲ ದಿನಗಳ ಹಿಂದೆ ಕಳಪೆ ಗುಣಮಟ್ಟದ ಕೂಲ್ ಡ್ರಿಂಕ್ಸ್ ಕುಡಿದ ಗ್ರಾಮದ ಬಾಲಕನೊಬ್ಬ ಅಸ್ವಸ್ಥನಾಗಿದ್ದು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ಸ್ಥಳೀಯ ಗ್ರಾಮದಲ್ಲಿ ತಯಾರಾಗುವ ಕುಡಿವ ನೀರಿನಲ್ಲಿ ಹುಳುಗಳು ಕಾಣಿಸುತ್ತಿವೆ. ಅವಧಿ ಮೀರಿದ್ದರೂ ನೀರಿನ ಬಾಟಲ್ ಮಾರಲಾಗುತ್ತಿದೆ. ಜನರ ಆರೋಗ್ಯ ಹಿತ ಕಾಪಾಡುವಲ್ಲಿ ಗ್ರಾಮಾಡಳಿತ, ತಾಲೂಕು ಆಡಳಿತ ನಿಗಾವಹಿಸಬೇಕು.
ಕಳಪೆ ಗುಣಮಟ್ಟದ, ನಕಲಿ ನೀರಿನ ಬಾಟಲ್, ಕೂಲ್ ಡ್ರಿಂಕ್ಸ್ ಕಳಪೆ ಗೊಬ್ಬರ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪರವಾನಿಗೆ ನೀಡಿದ್ದಲ್ಲಿ ಪರಿಶೀಲಿಸಿ ರದ್ದುಪಡಿಸಬೇಕು. ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸುವಲ್ಲಿ ಜಿಲ್ಲಾಧಿಕಾರಿಗಳು ಮುಂದಾಗಬೇಕು. ವಾರದೊಳಗೆ ತಕ್ಕ ಕ್ರಮ ಕೈಗೊಳ್ಳದಿದ್ದಲ್ಲಿ ಏ.7ರಂದು ಎಮ್ಮಿಗನೂರಿನಿಂದ ಡಿಸಿ ಕಚೇರಿತನಕ ಬೃಹತ್ ಪ್ರತಿಭಟನೆಯ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
