ವರದಿ : ಜಿ ಎಂ ಬಸಯ್ಯಸ್ವಾಮಿ
ಸೋಮಲಾಪುರ, ಏ.5:
ಕುರುಗೋಡು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಆರಾಧ್ಯದೈವ ಶ್ರೀ ಚಿದಾನಂದ ಅವಧೂತರ 34ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಏಪ್ರಿಲ್ 6ರಂದು ಭಕ್ತಿ ಭಾವದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಅಂಗವಾಗಿ ಗ್ರಾಮದಲ್ಲಿ ಉಚಿತ 80 ಜೋಡಿಗಳ ಸಾಮೂಹಿಕ ವಿವಾಹ ಹಾಗೂ ಭವ್ಯ ರಥೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾರ್ಯಕ್ರಮಗಳು ಶ್ರೀ ಸದ್ಗುರು ಷಡಕ್ಷರಿ ಅವಧೂತ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿವೆ ಎಂದು ಮಠದ ಮೂಲಗಳು ತಿಳಿಸಿವೆ.
ಏಪ್ರಿಲ್ 6ರಂದು ಸೋಮವಾರ ಬೆಳಗ್ಗೆ 7.30ರಿಂದ 8.30ರೊಳಗೆ ಸಾಮೂಹಿಕ ವಿವಾಹ ಕಾರ್ಯಕ್ರಮವು ಸದ್ಗುರು ಶ್ರೀ ಷಡಕ್ಷರಿ ಮಹಾಸ್ವಾಮಿಗಳವರ ಹಾಗೂ ಶ್ರೀ ಜಡೇಶ ಶಿವಯೋಗ ಮಂದಿರದ ಜಡೇಶ ತಾತನವರ ಸಾನಿಧ್ಯದಲ್ಲಿ ನೆರವೇರಲಿದೆ. ನಂತರ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಸಂಜೆ 5 ಗಂಟೆಯಿಂದ ಗ್ರಾಮದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾತ್ರಿ 8.30ಕ್ಕೆ ಜಮದಗ್ನಿ ಕಲ್ಯಾಣ ಬೈಲಾಟ ಪ್ರದರ್ಶನ ನಡೆಯಲಿದ್ದು, ಜಾತ್ರೆಯ ಪ್ರಯುಕ್ತ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಇದಕ್ಕೂ ಮೊದಲು ಸೋಮವಾರ ಬೆಳಗ್ಗೆ ಪ್ರಣವ ಧ್ವಜಾರೋಹಣ ನೆರವೇರಿಸಲಾಗಿದ್ದು, ಸಂಜೆ ಶ್ರೀ ಚಿದಾನಂದ ಅವಧೂತರ ಭಾವಚಿತ್ರದ ಮೆರವಣಿಗೆ ಜರುಗಿತು. ನಂತರ ಸಂಜೆ 7 ಗಂಟೆಗೆ ಆಧ್ಯಾತ್ಮಿಕ ಪ್ರವಚನ ಹಾಗೂ ರಾತ್ರಿ 8 ಗಂಟೆಗೆ ಮಠದಲ್ಲಿ ಭಜನೆ ಕಾರ್ಯಕ್ರಮಗಳು ನಡೆದವು.
ಏಪ್ರಿಲ್ 7ರಂದು ಬೆಳಗ್ಗೆ 9 ಗಂಟೆಗೆ ಸುಮಂಗಲೆಯರ ಆರತಿ, ಭಜನೆ ವಾದ್ಯಗಳೊಂದಿಗೆ ಕಳಸಾರೋಹಣ ನೆರವೇರಿಸಿ, ಗಂಗಾಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಲವೇಳೆ ಕಲ್ಪಿಸಲಾಗುವುದು ಎಂದು ತಿಳಿದುಬಂದಿದೆ.
