ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದ ಭಂಗಿ ಹನುಮಂತಪ್ಪ ತಂದೆ ಕರಿಯಪ್ಪ ಎಂಬುವರ ಮಾಲೀಕತ್ವದ ಪರಶುರಾಮ ಎಂಬ ಹೆಸರಿನ ಟಗರನ್ನು ಮೊನ್ನೆ ನಡೆದ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕರೆತಂದು, ಅಭಿಮಾನಿಗಳಿಂದ ಸನ್ಮಾನಿಸುವಷ್ಟು ಕ್ರೇಜ್ ಸೃಷ್ಟಿಸಿದೆ.
ಹೌದು, ರಾಜ್ಯಾದ್ಯಂತ ಹಲವಾರು ಟಗರಿನ ಕಾಳಗ, ಪ್ರದರ್ಶನ, ಕಣಗಳಲ್ಲಿ ಜಯಿಸಿದ್ದು, ಸವದತ್ತಿಯಲ್ಲಿ ಸ್ಕೂಟಿ, ಕೂಡ್ಲಿಗಿಯಲ್ಲಿ 50 ಸಾವಿರ ನಗದು, ಬೆಳ್ಳೂಡಿಯಲ್ಲಿ ಬೈಸಿಕಲ್, ರಾಣಿಬೆನ್ನೂರಿನಲ್ಲಿ ಎಲ್ಇಡಿ ಟಿವಿ, ಬಾಗಳಿಯಲ್ಲಿ ಹೋಮ್ ಥಿಯೇಟರ್, ಇನ್ನೂ ಬೇರೆ ಕಡೆಯಲ್ಲೆಲ್ಲಾ ಭಾಗವಹಿಸಿ, 4 ಟಿವಿ, 3 ಸೈಕಲ್, ಒಟ್ಟು 3 ಲಕ್ಷ ನಗದನ್ನು ಇದುವರೆಗೂ ಬಹುಮಾನವಾಗಿ ಗಳಿಸಿದೆ.

ಇಲ್ಲಿಯವರೆಗೂ 18 ಕ್ಕೂ ಹೆಚ್ಚು ಕಣಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹಾಲು ಹಲ್ಲಿನಿಂದ ಹಿಡಿದು 6 ಹಲ್ಲಿನವರೆಗೂ ಕಣಗಳಲ್ಲಿ ತನ್ನದೇಯಾದ ಆಟವನ್ನು ಪ್ರದರ್ಶಿಸಿ, ಎಲ್ಲಿಲ್ಲದ ಹವಾ ಸೃಷ್ಟಿಸಿದೆ. ಇದಕ್ಕೆ ಎದುರಾಳಿಯಾಗಿ ಸ್ಪರ್ಧಿಸಿದ 4 ಟಗರುಗಳು ಕಣಗಳಲ್ಲಿ ಸೋತು, ಸ್ಥಳದಲ್ಲಿಯೇ ಅಸುನೀಗಿವೆ. ವಾಟ್ಸಾಪ್, ಇನ್ಸಟಾಗ್ರಾಮ್ ನಲ್ಲಂತೂ ಹರಾಳು ಪರಶುರಾಮನ ಅಭಿಮಾನಿ ಪೇಜ್ ಗಳ ಗುಂಪೇ ಹುಟ್ಟಿಕೊಂಡಿದೆ.
ಟಗರಿನ ಕಾಳಗ/ ಟಗರು ಕಣ ಎಂಬ ವಿವಿಧ ಹೆಸರಿನಿಂದ ಕರೆಯುವ ಇದೊಂದು ಕರ್ನಾಟಕದ ಗ್ರಾಮೀಣ ಭಾಗದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಇದು ಹಳ್ಳಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಎಲ್ಲಿಯಾದರೂ ಕಣಗಳು ನಡೆದರೆ ಅಲ್ಲಿ ಈಗ ಹರಾಳು ಪರಶುರಾಮನ ಅಭಿಮಾನಿಗಳು ನೆರೆದಿರುತ್ತಾರೆ.
