ಬಳ್ಳಾರಿ,ಜು.17:ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ರೋಗಿಗಳಿಗೆ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ ವಿಶ್ವಜಿತ್ ಮೆಹೆತಾ ಅವರು ಹೇಳಿದರು.
ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
100 ಯಾರ್ಡ್ ವ್ಯಾಪ್ತಿಯಲ್ಲಿ ಕಡ್ಡಾಯ ನಿಷೇಧ:
ಕೋಟ್ಪಾ ಕಾಯ್ದೆಯಡಿ ಶಾಲಾ-ಕಾಲೇಜುಗಳಂತೆ ಈಗ ಆಸ್ಪತ್ರೆಗಳೂ ಸಹ ಪ್ರಮುಖ ಆದ್ಯತೆಯ ವಲಯಗಳಾಗಿವೆ. ಆಸ್ಪತ್ರೆಯ ಆವರಣದಿಂದ 100 ಯಾರ್ಡ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಬೀಡಿ, ಸಿಗರೇಟ್, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಅಂಗಡಿಗಳ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿ:
ನಗರದ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ತಡೆಗೋಡೆಯ ಹೊರಭಾಗದಲ್ಲಿ ಸಣ್ಣ ಪುಟ್ಟ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮತ್ತು ಬಳಕೆ ಅತಿಹೆಚ್ಚು ಕಂಡುಬರುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಮತ್ತು ಆರೋಗ್ಯ ನಿರೀಕ್ಷಕರು ಜಂಟಿ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಬೇಕು. ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಆಸ್ಪತ್ರೆಯ ಪ್ರವೇಶ ದ್ವಾರ ಹಾಗೂ ಸುತ್ತಮುತ್ತಲಿನ ಗೋಡೆಗಳ ಮೇಲೆ ‘ಇದು ತಂಬಾಕು ಮುಕ್ತ ವಲಯ, ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು’ ಎಂಬ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ನಿಯಮ ಉಲ್ಲಂಘಿಸುವ ತಂಬಾಕು ಅಂಗಡಿಗಳಿಗೆ ದಂಡ ವಿಧಿಸಿ:
ರಾಜ್ಯ ತಂಬಾಕು ನಿಯಂತ್ರಣ ಕೋಶದ ಸಂಯೋಜಕ ಡಾ. ಮಹಾಂತೇಶ ಉಳ್ಳಾಗಡ್ಡಿ ಅವರು ಮಾತನಾಡಿ, ಜಿಲ್ಲೆಯ ಯಾವುದೇ ಶೈಕ್ಷಣಿಕ ಸಂಸ್ಥೆಯ 100 ಮೀಟರ್ ವ್ಯಾಪ್ತಿಯ ಒಳಗಡೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ಲೈಸೆನ್ಸ್ ನೀಡುವಾಗ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಕೋಟ್ಪಾ ಲೈಸೆನ್ಸ್ ನಿಯಮಗಳನ್ನು ಉಲ್ಲಂಘಿಸುವ ಮಳಿಗೆಗಳ ವಿರುದ್ಧ ಕಠಿಣ ಆರ್ಥಿಕ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆಗೆ ರೂ. 4,000 ದಂಡ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆಗೆ ರೂ. 3,000 ದಂಡ. ಒಂದು ವೇಳೆ ಕಾನೂನು ಉಲ್ಲಂಘನೆ ಮುಂದುವರೆದಲ್ಲಿ, ಪ್ರತಿದಿನಕ್ಕೆ ರೂ. 100 ರಂತೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಅದೇರೀತಿಯಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1 ವರ್ಷದ ಅವಧಿಗೆ ರೂ. 500 ಲೈಸೆನ್ಸ್ ಶುಲ್ಕ ನಿಗದಿಪಡಿಸಲಾಗಿದೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವರ್ಷಗಳ ಅವಧಿಗೆ ರೂ. 500 ನವೀಕರಣ ಶುಲ್ಕ ಇರಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಟಿಬಿ-ತಂಬಾಕು ಮುಕ್ತ ಸಮನ್ವಯತೆ:
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ. ಮರಿಯಂಬಿ ವಿ.ಕೆ ಅವರು ಮಾತನಾಡಿ, ಕ್ಷಯರೋಗಿಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ತಡೆಯಲು ‘ಟಿಬಿ-ತಂಬಾಕು ಸಮನ್ವಯ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ದಾಖಲಾಗಿರುವ ಟಿಬಿ ಪ್ರಕರಣಗಳ ಪೈಕಿ 115 ಕ್ಷಯರೋಗಿಗಳು ನಿಯಮಿತವಾಗಿ ತಂಬಾಕು ಸೇವನೆ ಮಾಡುತ್ತಿರುವುದು ಪತ್ತೆಯಾಗಿದೆ. ಈ ಎಲ್ಲಾ 115 ರೋಗಿಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸಂಪರ್ಕ ಮಾಡಲಾಗುತ್ತಿದ್ದು, ಅವರಿಗೆ ತಂಬಾಕು ಮುಕ್ತಿಗಾಗಿ ಸೂಕ್ತ ಕೌನ್ಸೆಲಿಂಗ್ ಮತ್ತು ಚಿಕಿತ್ಸಕ ನೆರವು ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಬಾಕು ಮುಕ್ತಿ ಕೇಂದ್ರವು ಈ ತ್ರೆöÊಮಾಸಿಕದಲ್ಲಿ ಒಟ್ಟು 3,352 ಒಪಿಡಿ ರೋಗಿಗಳನ್ನು ಸ್ಕಿçÃನಿಂಗ್ಗೆ ಒಳಪಡಿಸಲಾಗಿದೆ. ಇವರಲ್ಲಿ 1,332 ಜನರಿಗೆ ತಂಬಾಕು ಮುಕ್ತಿಗಾಗಿ ವಿಶೇಷ ಕೌನ್ಸೆಲಿಂಗ್ ನೀಡಲಾಗಿದೆ. ತೀವ್ರ ತಂಬಾಕು ವ್ಯಸನದಿಂದ ಬಳಲುತ್ತಿದ್ದ 20 ಜನರನ್ನು ಸಂಪೂರ್ಣವಾಗಿ ತಂಬಾಕು ಮುಕ್ತರನ್ನಾಗಿಸುವಲ್ಲಿ ಕೇಂದ್ರದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಧೂಮಪಾನ ವಲಯಗಳನ್ನು ಸ್ಥಾಪಿಸಬೇಕು. ಕ.ಕ.ರಾ.ರ.ಸಾ. ಸಂಸ್ಥೆಯ ಬಳ್ಳಾರಿ ವಿಭಾಗದಲ್ಲಿ ಒಟ್ಟು 37 ಪ್ರಕರಣಗಳನ್ನು ದಾಖಲಿಸಿ ರೂ. 3,050 ದಂಡ ವಸೂಲಿ ಮಾಡಲಾಗಿದೆ. ನಿಲ್ದಾಣಗಳಲ್ಲಿ ತಂಬಾಕು ನಿಷೇಧ ಹಾಗೂ ಬಸ್ಗಳ ಮೇಲಿನ ಜಾಹೀರಾತು ತೆರವುಗೊಳಿಸಬೇಕು. ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ತಹಶೀಲ್ದಾರ ವಿಶ್ವಜಿತ್ ಮೆಹೆತಾ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ಗೋವಿಂದರಾಜು ವಿ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ವಿ., ಬಿಎಂಸಿ ಆರ್ ಸಿ ಅಧೀಕ್ಷಕಿ ಡಾ.ಇಂಧುಮತಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
