ವರದಿ: ಬಸಯ್ಯ ಜಿಎಂ
ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಶ್ರೀ ರಾಮ ಮಂದಿರ ಆವರಣದಲ್ಲಿ ಮೇ 24, 2026ರಂದು ಕನ್ನಡ ನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. ಕರ್ನಾಟಕ ಸ್ಟೇಟ್ ಬಯಲಾಟ ಆರ್ಟಿಸ್ಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬೂದುಗುಪ್ಪ ಗ್ರಾಮದ ಶ್ರೀ ಬಸವೇಶ್ವರ ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಭರತನಾಟ್ಯ, ಬಯಲಾಟ, ದೊಡ್ಡಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ಕಾರ್ಯಕ್ರಮದಲ್ಲಿ ಕರ್ನಾಟಕದ ಜನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳು ಶ್ರೀರಾಮನ ಸನ್ನಿಧಿಯಲ್ಲಿ ಮೂಡಿಬಂದಿದ್ದು, ಭಕ್ತರು ಹಾಗೂ ಪ್ರೇಕ್ಷಕರ ಮನಸೆಳೆಯುವಂತಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಪಾಲ ಜೀ ಅವರು ಕಲಾವಿದರನ್ನು ಸನ್ಮಾನಿಸಿ, “ಕನ್ನಡ ನಾಡಿನ ಕಲೆಯನ್ನು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರದರ್ಶಿಸಿರುವುದು ಶ್ಲಾಘನೀಯ ಕಾರ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸುರಭಿ ತಂಡದಿಂದ ನೃತ್ಯ ಪ್ರದರ್ಶನ, ಬೆಂಗಳೂರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಶ್ರೀಮತಿ ಲಲಿತಾ ಹಾಗೂ ತಂಡದಿಂದ ಭಕ್ತಿಗೀತೆಗಳ ಗಾಯನ, ಜೊತೆಗೆ ಬೆಂಗಳೂರಿನ ಆರ್. ಅಮೃತವಾಣಿ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು.
ಬಯಲಾಟ ಪ್ರದರ್ಶನಕ್ಕೆ ರಾಯದುರ್ಗ ತಾಲೂಕಿನ ಚದ್ದಂ ಗೊಲ್ಲರಹಟ್ಟಿ ವೆಂಕಟೇಶ ಮೇಷ್ಟ್ರು ಸಂಗೀತ ನಿರ್ದೇಶನ ನೀಡಿದರು. ತಬಲಾದಲ್ಲಿ ಗಾದಿಲಿಂಗ ಗೋಟೂರು ಹಾಗೂ ರಿದಂ ಪ್ಯಾಡ್ನಲ್ಲಿ ವಿಜಯಕುಮಾರ ರೆಡ್ಡಿ ಸಹಕರಿಸಿದರು.
ಬಳ್ಳಾರಿ ಜಿಲ್ಲೆಯ ಕಲಾವಿದರು ಪ್ರಸ್ತುತಪಡಿಸಿದ ‘ಶ್ರೀ ರೇಣುಕಾ ಮಹಾತ್ಮೆ’ ಬಯಲಾಟ ವಿಶೇಷ ಆಕರ್ಷಣೆಯಾಗಿತ್ತು. ಹಿರಿಯ ಕಲಾವಿದ ಶಂಕರಬಂಡೆ ಪೀರಸಾಬ್ ಎಮ್ಮಿಗನೂರು ಅವರು 50ನೇ ಬಾರಿಗೆ ಜಮದಾಗ್ನಿ ಪಾತ್ರ ನಿರ್ವಹಿಸಿ ವಿಶೇಷ ಸಾಧನೆ ಮಾಡಿದರು. ಪರುಶುರಾಮನ ಪಾತ್ರದಲ್ಲಿ ಕರಿಬಸವಯ್ಯ ಸ್ವಾಮಿ ರಾಮಸಾಗರ, ರೇಣುಕೆಯಾಗಿ ಅನಿತಾ, ಮೇನಕೆಯಾಗಿ ವೇದಾವತಿ ಹಾಗೂ ರಾಮ ಮತ್ತು ರಾಜನ ಪಾತ್ರದಲ್ಲಿ ಶರಣಪ್ಪ ಅಭಿನಯಿಸಿದರು. ಮೇಕಪ್ ಕಲಾವಿದರಾಗಿ ಗಂಗಾಧರ ಸಾಹುಕಾರ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮ ವೀಕ್ಷಿಸಿದ ಹಿರಿಯ ಮುಖಂಡರಾದ ರುದ್ರಗೌಡ, ಗೋಪಾಲರೆಡ್ಡಿ ಹಾಗೂ ತಿಮ್ಮನಗೌಡ ಅವರು ಬಳ್ಳಾರಿ ಜಿಲ್ಲೆಯ ಬಯಲಾಟ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಸ್ಟೇಟ್ ಬಯಲಾಟ ಆರ್ಟಿಸ್ಟ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ ಅವರು, “ಶ್ರೀರಾಮನ ಸನ್ನಿಧಿಯಲ್ಲಿ ನಮ್ಮ ನಾಡಿನ ಜನಪದ ಕಲೆಯನ್ನು ಪ್ರದರ್ಶಿಸುವ ಅವಕಾಶ ದೊರೆತದ್ದು ನಮ್ಮೆಲ್ಲರ ಸೌಭಾಗ್ಯ” ಎಂದು ಸಂತಸ ವ್ಯಕ್ತಪಡಿಸಿದರು.
