HomeDistrictsBallariಯೂಟ್ಯೂಬ್ ರೈತನ ಯಶೋಗಾಥೆ: ಸಾವಯವ ಕೃಷಿಯಲ್ಲಿ ನಿತೀಶ್ ರೆಡ್ಡಿ ಸಾಧನೆ

ಯೂಟ್ಯೂಬ್ ರೈತನ ಯಶೋಗಾಥೆ: ಸಾವಯವ ಕೃಷಿಯಲ್ಲಿ ನಿತೀಶ್ ರೆಡ್ಡಿ ಸಾಧನೆ

ಬಳ್ಳಾರಿ,ಮೇ 08:ಕೇವಲ 1.67 ಎಕರೆ ಜಮೀನಿನಲ್ಲಿ ಆಧುನಿಕ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ನಿತೀಶ್ ರೆಡ್ಡಿ ಇಂದು ಜಿಲ್ಲೆಯ ಯುವ ರೈತರಿಗೆ ಮಾದರಿಯಾಗಿದ್ದಾರೆ.

ಪ್ರೇರಣೆ ಮತ್ತು ಕೃಷಿ ಆರಂಭ:
ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದ ನಿತೀಶ್ ರೆಡ್ಡಿ, ಐ.ಟಿ.ಐ ವಿದ್ಯಾಭ್ಯಾಸ ಮುಗಿಸಿದ್ದು, ಉದ್ಯೋಗಕ್ಕಾಗಿ ಅಲೆಯದೆ ಕೃಷಿಯಲ್ಲಿ ತೊಡಗಿಸಿಕೊಂಡರು. ಮಹಾರಾಷ್ಟçದ ಕನ್ನೇರಿ ಮಠದ ಪೂಜ್ಯ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗಳ ಸಾವಯವ ಕೃಷಿ ಪದ್ಧತಿಯನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿದ ಇವರು, ಅದರಿಂದ ಪ್ರೇರಿತರಾಗಿ ತಮ್ಮ ಪುಟ್ಟ ಜಮೀನಿನಲ್ಲಿ ಪ್ರಯೋಗ ಆರಂಭಿಸಿದರು.

ವೈವಿಧ್ಯಮಯ ಬೆಳೆಗಳ ಸಮಾಗಮ:
ನಿತೀಶ್ ರೆಡ್ಡಿ ತಮ್ಮ ಜಮೀನಿನಲ್ಲಿ ಕೇವಲ ಒಂದೇ ಬೆಳೆಗೆ ಸೀಮಿತವಾಗದೆ ವೈವಿಧ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ‘ಟಿ’ ಮಾದರಿಯಲ್ಲಿ 2*10 ಅಡಿ ಅಂತರದಲ್ಲಿ ಡ್ರಾಗನ್ ಹಣ್ಣು ಬೆಳೆಸಿದ್ದಾರೆ. ಬಳ್ಳಾರಿಯ ಉಷ್ಣ ಹವಾಗುಣಕ್ಕೆ ಹೊಂದಿಕೊಳ್ಳುವ 330 ಸೇಬು ಗಿಡಗಳನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದಾರೆ.
ಅದರ ಜೊತೆಗೆ ಹೊಲದ ಸುತ್ತಲೂ ತೆಂಗು, ಬಾಳೆ, ಪಪ್ಪಾಯ, ಕರಿಬೇವು, ನಿಂಬೆ, ಸಪೋಟ, ಬಟರ್ ಫ್ರೂಟ್, ಮೋಸಂಬಿ, ಪೇರಲ ಮತ್ತು ಸೀತಾಫಲದಂತಹ ಹಣ್ಣಿನ ಗಿಡಗಳನ್ನು ಮಿಶ್ರ ಬೆಳೆಯಾಗಿ ಬೆಳೆಸಿದ್ದಾರೆ.
ಡ್ರಾಗನ್ ಹಣ್ಣಿನ ಸಾಲುಗಳ ಮಧ್ಯೆ ಬೆಂಡೆಕಾಯಿ, ಸೌತೇಕಾಯಿ, ಹೀರೆಕಾಯಿಯಂತಹ ತರಕಾರಿಗಳನ್ನು ಬೆಳೆಯುವ ಮೂಲಕ ಅಂತರ ಬೇಸಾಯ ಪದ್ಧತಿಯಿಂದ ಜಾಗದ ಸದುಪಯೋಗ ಪಡೆದಿದ್ದಾರೆ.

ಸಾವಯವ ಪದ್ಧತಿ ಮತ್ತು ನಿರ್ವಹಣೆ:
ಸಂಪೂರ್ಣ ರಾಸಾಯನಿಕ ಮುಕ್ತ ಕೃಷಿ ಇವರ ಗುರಿ. ಪರಾಗಸ್ಪರ್ಶ ಕ್ರಿಯೆ ಹೆಚ್ಚಿಸಿ ಉತ್ತಮ ಇಳುವರಿ ಪಡೆಯಲು ಜೇನು ಪೆಟ್ಟಿಗೆಗಳನ್ನು ಅಳವಡಿಸಿ ಜೇನು ಸಾಕಾಣಿಕೆ ಕೃಷಿ ಮಾಡಿದ್ದಾರೆ. ಜೀವಾಮೃತ, ಪಂಚಗವ್ಯ, ಗೋಕೃಪಾಮೃತ ಮತ್ತು ಘನ ಜೀವಾಮೃತದಂತಹ ನೈಸರ್ಗಿಕ ಗೊಬ್ಬರಗಳನ್ನು ತಾವೇ ತಯಾರಿಸುತ್ತಾರೆ.

ನವೀನ ತಂತ್ರಜ್ಞಾನ:
ಕೊರಿಯನ್ ನೈಸರ್ಗಿಕ ಕೃಷಿ ಪದ್ಧತಿಯಡಿ ಬಾಳೆದಿಂಡಿನ ದ್ರವ ರೂಪದ ಗೊಬ್ಬರ ಮತ್ತು ಮೀನಿನ ಅಮೈನೋ ಆಸಿಡ್‌ಗಳನ್ನು ಬಳಸುವ ಮೂಲಕ ನವೀನ ತಂತ್ರಜ್ಞಾನ ಅಳವಡಿಕೊಂಡಿದ್ದಾರೆ.

ಸಬ್ಸಿಡಿ ಸೌಲಭ್ಯ:
ಕೃಷಿ ಇಲಾಖೆಯ ಕೋಳೂರಿನ ರೈತ ಸಂಪರ್ಕ ಕೇಂದ್ರದ ವತಿಯಿಂದ 2025-26 ನೇ ಸಾಲಿನಲ್ಲಿ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಮತ್ತು ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಹಸು, ಎರೆಹುಳು ತೊಟ್ಟಿ ಮತ್ತು ಜೇನು ಪೆಟ್ಟಿಗೆ ಖರೀದಿಸಲು 30 ಸಾವಿರ ರೂ. ಸಹಾಯಧನ ಪಡೆದಿದ್ದಾರೆ.

ಆದಾಯ ಮತ್ತು ಮಾರುಕಟ್ಟೆ:
ನಿತೀಶ್ ರೆಡ್ಡಿ ಕೇವಲ ಬೆಳೆಯುವುದಷ್ಟೇ ಅಲ್ಲದೆ, ಉತ್ತಮ ಮಾರುಕಟ್ಟೆ ಮಾಹಿತಿಯನ್ನೂ ಯೂಟ್ಯೂಬ್ ಮೂಲಕವೇ ಪಡೆಯುತ್ತಾರೆ. ತಮ್ಮ ಉತ್ಪನ್ನಗಳನ್ನು ಗುಣಮಟ್ಟದ ಆಧಾರದ ಮೇಲೆ ವರ್ಗೀಕರಿಸಿ, ತಾವೇ ಖುದ್ದಾಗಿ ಮಾರಾಟ ಮಾಡುತ್ತಾರೆ. ಡ್ರಾಗನ್ ಹಣ್ಣಿನಿಂದ ವಾರ್ಷಿಕವಾಗಿ ಸುಮಾರು 1.5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಗೌರವ ಮತ್ತು ಪ್ರಶಸ್ತಿ:
ಈ ಸಾಧನೆಯನ್ನು ಗುರುತಿಸಿ, ಕೃಷಿ ಇಲಾಖೆಯು ನಿತೀಶ್ ರೆಡ್ಡಿಯವರ ತಾಯಿ ನಿರ್ಮಲಾ ಅವರಿಗೆ 2025-26 ನೇ ಸಾಲಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ (ರೈತ ಮಹಿಳೆ) ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ಸಾವಯವ ಕೃಷಿ ಅಳವಡಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಪಡೆಯುವುದು ಕುರಿತು ಮಾಹಿತಿ ಒದಗಿಸಲಾಗಿದೆ. ಯಾವುದೇ ಕೂಲಿ ಆಳುಗಳ ಸಹಾಯವಿಲ್ಲದೆ ಇಡೀ ಕುಟುಂಬವೇ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಈ ಯಶಸ್ಸಿನ ಹಿಂದಿನ ರಹಸ್ಯ ಎಂಬುದು ನಾವೆಲ್ಲರೂ ಕಾಣಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments