[ವರದಿ : ಜಿ ಎಂ ಬಸಯ್ಯ]
ಕುರುಗೋಡು: ವಾಹನ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯಿಂದ ಸುಮಾರು ₹20.95 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಯಲ್ಲಾಪುರ ನಿವಾಸಿ ಡಿ. ನಾಗರಾಜ್ ಅವರ ಮನೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಳುವಾಗಿದ್ದ ಸಂಬಂಧ ಜುಲೈ 8ರಂದು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ನಿಗಾ ವಹಿಸಿದ್ದರು.
ಈ ನಡುವೆ ಕುರುಗೋಡು ಪಟ್ಟಣದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ರಾಜಸಾಬ್ ಎಂಬಾತ ತನ್ನ ಮೋಟಾರ್ ಸೈಕಲ್ನಲ್ಲಿ ಚಿನ್ನದ ಆಭರಣಗಳನ್ನು ಸಾಗಿಸುತ್ತಿದ್ದು, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದನು. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, 2025ರಿಂದ ಕುರುಗೋಡು, ಕುಡುತಿನಿ, ಕಂಪ್ಲಿ ಹಾಗೂ ಸಂಡೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು ಏಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಸುಮಾರು 155 ಗ್ರಾಂ ಚಿನ್ನದ ಆಭರಣಗಳು (ಅಂದಾಜು ಮೌಲ್ಯ ₹20.15 ಲಕ್ಷ), ₹10 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳು, ಒಂದು ಮೋಟಾರ್ ಸೈಕಲ್ ಹಾಗೂ ಒಂದು ಮೊಬೈಲ್ ಫೋನ್ ಸೇರಿ ಒಟ್ಟು ₹20.95 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಡಿವೈಎಸ್ಪಿ ಪ್ರಸಾದ್ ಗೋಖಲೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಬಾಳನಗೌಡ ಹಾಗೂ ಪಿಎಸ್ಐಗಳಾದ ಸುಪ್ರೀತ್, ವಿರೂಪಾಕ್ಷಪ್ಪ (ಕುರುಗೋಡು), ರಾಕೇಶ್ (ಸಂಡೂರು), ಕರೆಮ್ಮ ಮತ್ತು ಠಾಣೆಯ ಸಿಬ್ಬಂದಿಗಳಾದ ಎಎಸ್ಐ ಎಂ. ಶಕ್ಷಾವಲಿ, ಬಸವರಾಜ್, ಸಂತೋಷ್, ರಾಜಶೇಖರ್, ಮಹೇಶ್, ರೇವಣಸಿದ್ದೇಶ್ವರ, ಶರಣಪ್ಪ ಹಾಗೂ ರಾಮಚಂದ್ರ ಅವರ ತಂಡ ಯಶಸ್ವಿಯಾಗಿ ನಡೆಸಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
