ವರದಿ : ಶಿವರಾಜ್ ಕನ್ನಡಿಗ
[ಪರವಾನಗಿ ನವೀಕರಣಗೊಳ್ಳದ ಹಿನ್ನೆಲೆ: ಪಟ್ಟಣ ಪಂಚಾಯಿತಿಗೆ ದೌಡಾಯಿಸಿದ ಅಂಗಡಿ ಮಾಲೀಕ]
ಕೊಟ್ಟೂರು: ಪಟ್ಟಣದಲ್ಲಿನ ಲೋಕಪಯೋಗಿ ಇಲಾಖೆ (PWD) ರಸ್ತೆಯನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಲಕ್ಷ್ಮಿ ಟೈಲ್ಸ್ ಅಂಡ್ ಗ್ರಾನೈಟ್ ಅಂಗಡಿ ಮಾಲೀಕರಿಗೆ ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ಕಠಿಣ ನೋಟಿಸ್ ಜಾರಿ ಮಾಡಿದ್ದಾರೆ.
ಅತಿಕ್ರಮಣದಿಂದಾಗಿ ಯಾವುದೇ ರೀತಿಯ ರಸ್ತೆ ಅಪಘಾತಗಳು ಸಂಭವಿಸಿದಲ್ಲಿ ಅದಕ್ಕೆ ಅಂಗಡಿ ಮಾಲೀಕರೇ ನೇರ ಹೊಣೆಯಾಗಲಿದ್ದಾರೆ ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ. ಮುಂದಿನ ಮೂರು ದಿನಗಳ ಒಳಗಾಗಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸದಿದ್ದರೆ ಅಂಗಡಿ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗುವುದು ಎಂದು ಲೋಕಪಯೋಗಿ ಇಲಾಖೆಯ ಅಧಿಕಾರಿ ನಾಗನಗೌಡ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದಾಖಲೆ ಒದಗಿಸಲು ವಿಫಲ:
ಅಂಗಡಿಯ ವಾಣಿಜ್ಯ ಮತ್ತು ವಾಣಿಜ್ಯೇತರ (Commercial & Non-Commercial) ಬಳಕೆಯ ಮಾಹಿತಿ ಹಾಗೂ ರಸ್ತೆ ಜಾಗಕ್ಕೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ಪರಿಶೀಲನೆಗೆ ಒದಗಿಸುವಂತೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ ಅವರು ಯಾವುದೇ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯಮ ಪರವಾನಗಿ ನವೀಕರಣವಾಗಿಲ್ಲ!
ಮತ್ತೊಂದೆಡೆ, ಸದರಿ ಅಂಗಡಿಗೆ ಕೊಟ್ಟೂರು ಪಟ್ಟಣ ಪಂಚಾಯಿತಿಯಿಂದ ನೀಡಲಾಗುವ ಉದ್ಯಮ ಪರವಾನಗಿ (Trade License) ಇದುವರೆಗೂ ನವೀಕರಣ (Renewal) ಆಗಿರುವುದು ಕಂಡುಬಂದಿಲ್ಲ. PWD ಅಧಿಕಾರಿಗಳ ಖಡಕ್ ಕ್ರಮದಿಂದ ಎಚ್ಚೆತ್ತುಕೊಂಡ ಅಂಗಡಿ ಮಾಲೀಕರು, ತಡಿಬಡಿಯಾಗಿ ಪಟ್ಟಣ ಪಂಚಾಯಿತಿಗೆ ದೌಡಾಯಿಸಿ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
■”ಅಂಗಡಿ ಮಾಲೀಕರು ಉದ್ಯಮ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನಿಯಮಗಳ ಪ್ರಕಾರ ಸಂಪೂರ್ಣ ಪರಿಶೀಲನೆ ನಡೆಸಿ, ಅತಿಕ್ರಮಣ ತೆರವುಗೊಳಿಸಿದ ನಂತರವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.”
— ಎ. ನಸರುಲ್ಲಾ, ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಕೊಟ್ಟೂರು.
