ವರದಿ: ಜಿ.ಎಂ ಬಸಯ್ಯ ಸ್ವಾಮಿ
ಕುರುಗೋಡು ಸಮೀಪದ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಇಂದಿರನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಲಯದ ವಾರ್ಡನ್ ಬಸವರಾಜ ಮಾತನಾಡಿ, ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗಳ ಮಹತ್ವವನ್ನು ಸಮಾಜಕ್ಕೆ ತೋರಿಸಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಹೇಳಿದರು. ಅವರು ಬುದ್ಧನ ಪಂಚಶೀಲ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ದಮನಿತ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ಶಿಲ್ಪಿಯಾಗಿ ಅಥವಾ ಒಂದು ವರ್ಗಕ್ಕೆ ಸೀಮಿತಗೊಳಿಸುವುದು ತಪ್ಪು ಎಂದು ಹೇಳಿದ ಅವರು, ಅವರ ವಿಶಾಲ ಚಿಂತನೆ ಮತ್ತು ದೂರದೃಷ್ಟಿಯನ್ನು ಜನರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದರು. ಹಣಕಾಸು, ಶಿಕ್ಷಣ, ಕೃಷಿ, ನೀರಾವರಿ ಮತ್ತು ವಿದೇಶಾಂಗ ನೀತಿಗಳಂತಹ ಹಲವು ಕ್ಷೇತ್ರಗಳಲ್ಲಿ ಅಂಬೇಡ್ಕರ್ ಅವರು ಮಹತ್ವದ ಆಲೋಚನೆಗಳನ್ನು ನೀಡಿದ್ದು, ದೇಶದ ಅಭಿವೃದ್ಧಿಗೆ ಬುನಾದಿ ಹಾಕಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕರವಸುಲಿಗಾರ ಎಚ್. ಗಾದಿಲಿಂಗಪ್ಪ, ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಮಲ್ಲೇಶ್, ತಾಲ್ಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವನೇಗೌಡರ ರಾಮಪ್ಪ ಹಾಗೂ ಪ್ರಮುಖರಾದ ಮಲ್ಲಿಕಾ, ಹೊನ್ನೂರಪ್ಪ, ಪುಲ್ಲಯ್ಯ, ಈಶ್ವರ, ಕಾಳಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
