[ವರದಿ : ನೇಕಾರ್ ಸಂಜೀವ್ ಕುಮಾರ್]
ಗಂಗಾವತಿ:ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜದ ಸಂಘಟನೆ ಹಾಗೂ ಸದೃಢ ಆರೋಗ್ಯಕ್ಕೆ ಪಾದಯಾತ್ರೆ ಅತ್ಯಂತ ಸಹಕಾರಿಯಾಗಿದೆ ಎಂದು ಹಿರೇಜಂತಕಲ್ ವಿರೂಪಾಪುರ ಆರ್ಯವೈಶ್ಯ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪಂಚಮ ವರ್ಷದ ಮಂತ್ರಾಲಯ ಪಾದಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯಾಪನಾ ಸಮಾರಂಭ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪಾದಯಾತ್ರೆ ಉದ್ದಕ್ಕೂ ಯಾತ್ರಿಗಳಿಗೆ ಲಘು ಉಪಹಾರ, ಶುದ್ಧ ಕುಡಿಯುವ ನೀರು, ಫಲಹಾರ ಹಾಗೂ ಅನ್ನದಾಸೋಹ ವ್ಯವಸ್ಥೆ ಮಾಡಿದ ಗಣ್ಯರ ಸೇವೆ ಸ್ಮರಣೀಯ. ಜೊತೆಗೆ ಐದು ದಿನಗಳ ಪಾದಯಾತ್ರೆಯಲ್ಲಿ ವರಣದೇವರ ಕೃಪೆ ಇದಕ್ಕೆಲ್ಲ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹವೇ ಪ್ರಮುಖ ಕಾರಣ ಎಂದು ತಿಳಿಸಿದರು.

ಗುರುಗಳಾದ ಗುರು ಭೀಮ್ ಭಟ್ ಜೋಶಿ ಮಾತನಾಡಿ, ಗುರುರಾಯರ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ತಾಯಿಯ ಆಶೀರ್ವಾದದಿಂದ ಪಾದಯಾತ್ರೆ ಯಶಸ್ವಿಯಾಗಿದ್ದು, ಸಹಕಾರ ನೀಡಿದ ಸರ್ವ ಸದ್ಭಕ್ತರಿಗೆ ಒಳ್ಳೆಯದಾಗಲಿ ಎಂದು ಹರಸಿದರು. ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಠಿ ಮಾತನಾಡಿ, ಪಾದಯಾತ್ರೆಗೆ ಸಹಕಾರ ನೀಡಿದ ಹಾಗೂ ಯಶಸ್ಸಿಗೆ ಕಾರಣರಾದ ಆರ್ಯವೈಶ್ಯ ಸಮಾಜದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ 102 ಮಹಿಳೆಯರಿಗೆ ಉಡಿ ತುಂಬುವ ಮೂಲಕ ಗೌರವಿಸಲಾಯಿತು.
ನವ ವೃಂದಾವನ ಭಜನಾ ಮಂಡಳಿಯವರಿಂದ ಜರುಗಿದ ಭಜನೆ ಮತ್ತು ತಾಳಕ್ಕೆ ತಕ್ಕ ನೃತ್ಯ ಕಾರ್ಯಕ್ರಮ ನೆರೆದಿದ್ದವರ ಗಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ನವ ವೃಂದಾವನ ಭಜನಾ ಮಂಡಳಿಯ ಸದಸ್ಯರು, ವಾಸವಿ ಯುವಜನ ಸೇವಾ ಸಂಘದ ಗೌರವಾಧ್ಯಕ್ಷ ದರೋಜಿ ವೆಂಕಟೇಶ, ಅಧ್ಯಕ್ಷ ಮಂಜುನಾಥ, ಪ್ರಮುಖರಾದ ಗುರುರಾಜ, ಚಂದ್ರು ಬನ್ನಿಗೋಳ, ದರೋಜಿ ಮಲ್ಲಿಕಾರ್ಜುನ ಶ್ರೇಷ್ಠಿ, ಹಣವಾಳ ಚಂದ್ರಶೇಖರ ಶ್ರೇಷ್ಠಿ , ಬೆನ್ನೂರು ಪ್ರಹ್ಲಾದ್, ದಮ್ಮೂರು ಸುರೇಶ, ಮರಿಸ್ವಾಮಿ, ಗೋಪಾಲ ಶ್ರೇಷ್ಠಿ ಆನೆಗುಂದಿ, ಮಂಜುನಾಥ ಚಿಕ್ಕಜಂತಕಲ್, ಬಸವ ಹಾಗೂ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ, ಶ್ರೀಮತಿ ದಮ್ಮೂರು ಮಂಜುಳಾ, ಶ್ರೀಮತಿ ಪದ್ಮಾವತಿ, ಶ್ರೀಮತಿ ದೀಪ ಬನ್ನಿಗೋಳ, ಶ್ರೀಮತಿ ನಾಗಮಣಿ ಸೇರಿದಂತೆ ಆರ್ಯವೈಶ್ಯ ಸಮಾಜದ ಮುಖಂಡರು, ಯುವಕರು ಹಾಗೂ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.
