[ವರದಿ : ಜಿ ಎಂ ಬಸಯ್ಯ]
ಕಂಪ್ಲಿ/ಸೂಗೂರು: ಕೃಷಿ ಕೆಲಸದಲ್ಲಿ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡುವ ಮೂಲಕ ಕೃಷಿ ವೆಚ್ಚ ತಗ್ಗಿಸಲು ರೈತರೊಬ್ಬರು ಸ್ವತಃ ಕೈ ಕುಂಟೆ ಹಿಡಿದು ಜಮೀನಿನಲ್ಲಿ ಹರಗಿ ಇತರರಿಗೆ ಮಾದರಿಯಾಗಿದ್ದಾರೆ.
ಸಮೀಪದ ಮಣ್ಣೂರು ಸೂಗೂರು ಗ್ರಾಮದ ರೈತ ಜಟಸೂರ ಬಸವರಾಜ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹೂವು, ತೆಂಗು ಹಾಗೂ ನಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಕೃಷಿ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸ್ವತಃ ಕೈ ಕುಂಟೆ ಬಳಸಿ ಜಮೀನಿನಲ್ಲಿ ಹರಗಿ ಬೆಳೆಗಳ ನಿರ್ವಹಣೆ ಮಾಡುತ್ತಿದ್ದಾರೆ.
ಈ ಮೂಲಕ ಕೃಷಿ ವೆಚ್ಚವನ್ನು ತಗ್ಗಿಸುವುದರ ಜೊತೆಗೆ, ರೈತರು ಸ್ವತಃ ಶ್ರಮವಹಿಸಿ ಕೃಷಿ ಮಾಡಿದರೆ ಖರ್ಚು ಕಡಿಮೆ ಮಾಡಬಹುದು ಎಂಬ ಸಂದೇಶವನ್ನು ಬಸವರಾಜ ಅವರು ನೀಡಿದ್ದಾರೆ.
ಈ ಕುರಿತು ಮಾತನಾಡಿದ ರೈತ ಬಸವರಾಜ, “ಪ್ರಸ್ತುತ ರೈತರ ಪರಿಸ್ಥಿತಿ ಸುಧಾರಿಸಿಲ್ಲ. ಅನ್ನದಾತರಿಗೆ ಸೂಕ್ತ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು. ಕೃಷಿ ಉಪಕರಣಗಳು ಹಾಗೂ ಗೊಬ್ಬರದ ಬೆಲೆಗಳನ್ನು ಕಡಿಮೆ ಮಾಡಿ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೂ ನಮ್ಮ ತಾಪತ್ರಯ ತಪ್ಪುವುದಿಲ್ಲ,” ಎಂದು ಹೇಳಿದರು.
ಕೃಷಿಯ ಮೇಲಿನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಸ್ವತಃ ಜಮೀನಿನಲ್ಲಿ ಶ್ರಮಿಸುತ್ತಿರುವ ಬಸವರಾಜ ಅವರ ಕಾರ್ಯ ಇತರೆ ರೈತರಿಗೆ ಮಾದರಿಯಾಗಿದೆ.
