ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಹಾಗೂ ಬಿಎಲ್ಒ ಮೇಲ್ವಿಚಾರಕರಿಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಕಾರ್ಯನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಸ್ಟರ್ ಟ್ರೈನರ್ ಮುಸ್ತಾಕ್ ಅಹ್ಮದ್ ಅವರು ಬಿಎಲ್ಒ ತಂತ್ರಾಂಶದ ಮೂಲಕ SIR ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ವಿಧಾನಗಳ ಕುರಿತು ವಿವರವಾದ ತರಬೇತಿ ನೀಡಿದರು. ಮತದಾರರಿಗೆ ವಿತರಿಸಲಾಗುವ ಎನ್ಯುಮರೇಟರ್ ಫಾರ್ಮ್ನಲ್ಲಿ ಅಗತ್ಯ ಮಾಹಿತಿಯನ್ನು ಸರಿಯಾಗಿ ಹೇಗೆ ಭರ್ತಿ ಮಾಡಿಸಬೇಕು ಹಾಗೂ ಭರ್ತಿ ಮಾಡಿದ ಫಾರ್ಮ್ಗಳ ಮಾಹಿತಿಯನ್ನು ಬಿಎಲ್ಒ ತಂತ್ರಾಂಶಕ್ಕೆ ಹೇಗೆ ಅಪ್ಲೋಡ್ ಮಾಡಬೇಕು ಎಂಬ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
SIR ಪ್ರಕ್ರಿಯೆಯನ್ನು ದೋಷರಹಿತವಾಗಿ ಹಾಗೂ ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಚುನಾವಣೆ ವಿಷಯ ನಿರ್ವಾಹಕರಾದ ಆದರ್ಶ, ಮುಸ್ತಾಫ್ ಹಾಗೂ ಕಂದಾಯ ನಿರೀಕ್ಷಕರಾದ ಡಿ. ಶಿವಕುಮಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
