ವರದಿ : ಬಸಯ್ಯ ಜಿಎಂ
ಕುರುಗೋಡು: ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ವತಿಯಿಂದ ಏಪ್ರಿಲ್ 16ರಿಂದ 20ರವರೆಗೆ ಐದು ದಿನಗಳ ಕಾಲ “ಪ್ರಥಮ ವರ್ಷದ ಪ್ರವಚನ” ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಪ್ರವಚನಕಾರರಾದ ಕೊಟ್ಟೂರುಸ್ವಾಮಿ ಶಾಖಾ ವಿರಕ್ತ ಮಠದ ಪೂಜ್ಯಶ್ರೀ ಮರಿ ಕೊಟ್ಟೂರು ದೇಶಿಕರು ಮಾತನಾಡಿ, ಪ್ರತಿಯೊಬ್ಬರೂ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ದೇವರಲ್ಲಿ ಭಕ್ತಿ ಹಾಗೂ ಗುರು-ಹಿರಿಯರ ಗೌರವ ಬೆಳೆಸುವಂತೆ ಮಾಡಬೇಕು ಎಂದು ಹೇಳಿದರು. ಇಂತಹ ಪುಣ್ಯಕ್ಷೇತ್ರಗಳಲ್ಲಿ ನಡೆಯುವ ಕಥೆ, ಪುರಾಣ ಪ್ರವಚನಗಳನ್ನು ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ಸೇವೆಯನ್ನು ಮುಂಡ್ರಿಗಿ ಬಸವರಾಜ್ (ಹಾರ್ಮೋನಿಯಂ) ಮತ್ತು ಎಚ್.ಎಂ. ಶೇಖರಯ್ಯ (ತಬಲಾ) ಸಲ್ಲಿಸಿದರು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆಂಜನೇಯಲು, ವ್ಯವಸ್ಥಾಪನ ಅಧ್ಯಕ್ಷ ಚಾನಾಳ್ ಆನಂದ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಐದು ದಿನಗಳ ಕಾಲ ನಡೆಯುವ ಈ ಪ್ರವಚನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೊಡ್ಡ ಬಸವೇಶ್ವರರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.
