ಕುರುಗೋಡು ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಮೆಣಸಿನಕಾಯಿ ನರ್ಸರಿ ಮಾಲೀಕರು ಹಾಗೂ ರೈತರ ಸಭೆ ನಡೆಯಿತು. ರೈತರ ಹಿತದೃಷ್ಟಿಯಿಂದ ಹಾಗೂ ಗುಣಮಟ್ಟದ ಸಸಿ ಪೂರೈಕೆಗೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಮೆಣಸಿನಕಾಯಿ ಸಸಿ ನರ್ಸರಿ ನಡೆಸುವ ಪ್ರತಿಯೊಬ್ಬ ಮಾಲೀಕರೂ ಕಡ್ಡಾಯವಾಗಿ ಲೈಸೆನ್ಸ್ ಹಾಗೂ GST ನೋಂದಣಿ ಹೊಂದಿರಬೇಕು ಎಂದು ತೀರ್ಮಾನಿಸಲಾಯಿತು. ನರ್ಸರಿಗಳ ಮುಂಭಾಗದಲ್ಲಿ ಮಾಹಿತಿ ಫಲಕ ಅಳವಡಿಸಿ, ಅದರಲ್ಲಿ ಲೈಸೆನ್ಸ್ ಸಂಖ್ಯೆ, GST ಸಂಖ್ಯೆ ಹಾಗೂ ಸಸಿಗಳಿಗೆ ಬಳಸುವ ಔಷಧಿಗಳ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚಿಸಲಾಯಿತು.
ಇದಲ್ಲದೆ, ನರ್ಸರಿ ಮಾಲೀಕರು ಎರಡು ಪ್ರತ್ಯೇಕ ರಿಜಿಸ್ಟರ್ಗಳನ್ನು ನಿರ್ವಹಿಸುವುದು ಕಡ್ಡಾಯವಾಗಿದ್ದು, ಸಸಿ ಬೆಳವಣಿಗೆ ಮತ್ತು ಮಾರಾಟದ ವಿವರಗಳನ್ನು ದಾಖಲಿಸಬೇಕು ಎಂದು ತಿಳಿಸಲಾಯಿತು. ಮೆಣಸಿನಕಾಯಿ ಸಸಿಗಳನ್ನು ಬೆಳೆಸುವ ವೇಳೆ ಬಾಂಡ್ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ತಾಡಪಾಲ್ (ಪ್ಲಾಸ್ಟಿಕ್ ಕವರ್) ಬಳಸಿ ಸುರಕ್ಷಿತವಾಗಿ ಬೆಳೆಸಬೇಕು ಎಂಬ ನಿರ್ಧಾರವೂ ಕೈಗೊಳ್ಳಲಾಯಿತು.
ತಾಡಪಾಲ್ ಹೊದಿಕೆ ಬಳಸಿ ಬೆಳೆಸಿದ ಸಸಿಗಳಿಗೆ ಪ್ರತಿ ಸಸಿಗೆ 50 ಪೈಸೆಯಂತೆ ರೈತರಿಂದ ಹಣ ಪಡೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಈ ಕ್ರಮದಿಂದ ಉತ್ತಮ ಗುಣಮಟ್ಟದ ಸಸಿ ಉತ್ಪಾದನೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ, ರೈತರು, ನರ್ಸರಿ ಮಾಲೀಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
