Friday, June 12, 2026
HomeDistrictsBallariರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ದಿಢೀರ್ ಭೇಟಿ – ಕಟ್ಟುನಿಟ್ಟಿನ ಪರಿಶೀಲನೆ

ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ದಿಢೀರ್ ಭೇಟಿ – ಕಟ್ಟುನಿಟ್ಟಿನ ಪರಿಶೀಲನೆ

ವರದಿ : ಜಿ ಎಂ ಬಸಯ್ಯ
ಕುರುಗೋಡು: ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾಗೂ ರಸಗೊಬ್ಬರಗಳ ಕಪ್ಪು ಮಾರುಕಟ್ಟೆ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೃಷಿ ಇಲಾಖೆ ಅಧಿಕಾರಿಗಳು ಕುರುಗೋಡು ತಾಲೂಕಿನ ಗೆಣಕಿಹಾಳು ಗ್ರಾಮದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಉಪ ಕೃಷಿ ನಿರ್ದೇಶಕರಾದ (DDA) ಮಂಜುನಾಥ್ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಗರ್ಜಪ್ಪ ಹಾಗೂ ಕುರುಗೋಡು ರೈತ ಸಂಪರ್ಕ ಕೇಂದ್ರದ ಹಿರಿಯ ಕೃಷಿ ಅಧಿಕಾರಿ ಡಿ. ದೇವರಾಜ್ ಉಪಸ್ಥಿತರಿದ್ದರು.

ಈ ವೇಳೆ ಅಧಿಕಾರಿಗಳು ರಸಗೊಬ್ಬರ ವಿತರಕರು ಹಾಗೂ ಡೀಲರ್‌ಗಳಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಪ್ರತಿಯೊಂದು ರಸಗೊಬ್ಬರ ಅಂಗಡಿಯ ಮುಂಭಾಗದಲ್ಲಿ ರೈತರಿಗೆ ಸುಲಭವಾಗಿ ಕಾಣುವಂತೆ ಲಭ್ಯವಿರುವ ಎಲ್ಲಾ ರಸಗೊಬ್ಬರಗಳ ಅಧಿಕೃತ ದರಪಟ್ಟಿಯನ್ನು (Rate/Price List) ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದರು. ಜೊತೆಗೆ ಅಂಗಡಿಯಲ್ಲಿ ಲಭ್ಯವಿರುವ ರಸಗೊಬ್ಬರದ ದಾಸ್ತಾನು, ಒಟ್ಟು ಚೀಲಗಳ ಸಂಖ್ಯೆ ಹಾಗೂ ಪ್ರಮಾಣದ ನಿಖರ ಮಾಹಿತಿಯನ್ನು ಪ್ರತಿದಿನ ನವೀಕರಿಸಿ ಪ್ರದರ್ಶಿಸುವಂತೆ ಸೂಚನೆ ನೀಡಿದರು.

ರೈತರು ಕೇವಲ ಯೂರಿಯಾ ಅಥವಾ ಡಿಎಪಿ (DAP) ರಸಗೊಬ್ಬರ ಕೇಳಿದಾಗ, ಬೇರೆ ಯಾವುದೇ ಕಂಪನಿಗಳ ಉತ್ಪನ್ನಗಳು, ಮೈಕ್ರೋ ನ್ಯೂಟ್ರಿಯೆಂಟ್ಸ್ ಅಥವಾ ಕೀಟನಾಶಕಗಳನ್ನು ಕಡ್ಡಾಯವಾಗಿ ಜೊತೆಯಾಗಿ ಮಾರಾಟ (ಲಿಂಕ್ ಸೇಲ್) ಮಾಡುವಂತಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು. ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಮಾತ್ರ ವಿತರಿಸಬೇಕು ಎಂದು ತಿಳಿಸಿದರು.

ಇದಲ್ಲದೆ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆ (MRP)ಗಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವಂತಿಲ್ಲ. ಎಂಆರ್‌ಪಿ ದರಕ್ಕಿಂತ ಒಂದು ರೂಪಾಯಿ ಹೆಚ್ಚಾಗಿ ವಸೂಲಿ ಮಾಡಿದರೂ ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.

ಪ್ರತಿಯೊಬ್ಬ ರೈತರಿಗೆ ರಸಗೊಬ್ಬರ ಖರೀದಿಸಿದ ಬಳಿಕ ಕಡ್ಡಾಯವಾಗಿ ಜಿಎಸ್‌ಟಿ (GST) ಒಳಗೊಂಡ ಕಂಪ್ಯೂಟರೈಸ್ಡ್ ಬಿಲ್ ಅಥವಾ ಅಧಿಕೃತ ನಗದು ರಶೀದಿ ನೀಡಬೇಕು. ಬಿಲ್ ನೀಡದೇ ಕೇವಲ ಕೈಬರಹದ ಚೀಟಿ ನೀಡುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದರು.

ವಿಶೇಷವಾಗಿ ಹೆಚ್ಚಿನ ಬೇಡಿಕೆಯಲ್ಲಿರುವ ಯೂರಿಯಾ (Urea) ಮತ್ತು ಡಿಎಪಿ (DAP) ರಸಗೊಬ್ಬರ ವಿತರಣೆಯ ವೇಳೆ ಕಡ್ಡಾಯವಾಗಿ ‘ಕೆ-ಕಿಸಾನ್’ (K-Kissan) ಪೋರ್ಟಲ್ ಹಾಗೂ ಪಿಒಎಸ್ (POS) ಯಂತ್ರದ ಮೂಲಕ ರೈತರ ಹೆಬ್ಬೆಟ್ಟಿನ ಗುರುತು (Biometric) ಪಡೆದುಕೊಂಡೇ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕರಾದ ಮಂಜುನಾಥ್ ಮಾತನಾಡಿ, “ಕೃಷಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ರೈತರಿಂದ ದೂರುಗಳು ಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಲಾಗುವುದು” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments