[ವರದಿ: ಜಿ.ಎಂ. ಬಸಯ್ಯ]
ಕುರುಗೋಡು, ಸೆ. 7: ಗೊಬ್ಬರ ಮಾರಾಟದ ಬಾಕಿ ಹಣದ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಘಟನೆ ಕುರುಗೋಡು ತಾಲ್ಲೂಕಿನ ಯಲ್ಲಾಪುರ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಉಮಾಶಂಕರ್ ಎಂದು ಗುರುತಿಸಲಾಗಿದ್ದು, ಪೊಲೇಪಲ್ಲಿ ಅರುಣ್ ಕುಮಾರ್, ಅಂಡಿ ಹನುಮಂತ ಹಾಗೂ ಯಲ್ಲಾಪುರ ಮಂಜುನಾಥ ಸೇರಿದಂತೆ ಇತರರ ವಿರುದ್ಧ ಆರೋಪ ಕೇಳಿಬಂದಿದೆ.

ಘಟನೆ ವಿವರ
ಕುರುಗೋಡು ಪೊಲೀಸ್ ಠಾಣೆಗೆ ಎನ್. ಎರ್ರೀಸ್ವಾಮಿ ಉಜ್ಜಲಪೇಟೆ ಅವರು ನೀಡಿದ ದೂರಿನ ಪ್ರಕಾರ, ಅವರ ತಮ್ಮ ಉಮಾಶಂಕರ್ ನರ್ಸರಿ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು.
2026ರಲ್ಲಿ ಪೊಲೇಪಲ್ಲಿ ಅರುಣ್ ಕುಮಾರ್ ಅವರಿಗೆ ಸುಮಾರು ₹60 ಸಾವಿರ ಮೌಲ್ಯದ ಗೊಬ್ಬರವನ್ನು ಉಮಾಶಂಕರ್ ನೀಡಿದ್ದರು. ಈ ಪೈಕಿ ಅರುಣ್ ಕುಮಾರ್ ₹50 ಸಾವಿರ ಪಾವತಿಸಿದ್ದು, ಉಳಿದ ₹10 ಸಾವಿರ ಬಾಕಿ ಹಣ ನೀಡುವ ವಿಚಾರವಾಗಿ ಇಬ್ಬರ ನಡುವೆ ವಿವಾದ ಉಂಟಾಗಿತ್ತು ಎನ್ನಲಾಗಿದೆ.
ಭಾನುವಾರ ರಾತ್ರಿ ಸುಮಾರು 12 ಗಂಟೆ ವೇಳೆಯಲ್ಲಿ ಯಲ್ಲಾಪುರ ಕ್ರಾಸ್ ಬಳಿಯ ಸಾಯಿಬಾಬಾ ಗುಡಿ ಸಮೀಪ, ಅರುಣ್ ಕುಮಾರ್, ಅಂಡಿ ಹನುಮಂತ, ಯಲ್ಲಾಪುರ ಮಂಜುನಾಥ ಹಾಗೂ ಇತರರು ಉಮಾಶಂಕರ್ ಅವರೊಂದಿಗೆ ಜಗಳ ತೆಗೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಅರುಣ್ ಕುಮಾರ್ ತನ್ನ ಮೋಟಾರ್ ಸೈಕಲ್ನಲ್ಲಿದ್ದ ಮಚ್ಚುಗತ್ತಿಯಿಂದ ಉಮಾಶಂಕರ್ ಅವರ ಕುತ್ತಿಗೆ ಹಾಗೂ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿ, ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಉಮಾಶಂಕರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ದೂರಿನ ಆಧಾರದ ಮೇಲೆ ಕುರುಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳ ಪತ್ತೆ ಹಾಗೂ ಮುಂದಿನ ಕಾನೂನು ಕ್ರಮಕ್ಕೆ ತನಿಖೆ ಮುಂದುವರಿದಿದೆ.
