ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಇಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು. ಮಲ್ಲಮ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ತಹಶೀಲ್ದಾರ್ ಅಮರೇಶ್ ಜಿ.ಕೆ ಇವರು ಕೃಷಿ ಪ್ರಧಾನವಾದ ಭಾರತೀಯ ಕುಟುಂಬದಲ್ಲಿ ಅವಿಭಕ್ತ ಕುಟುಂಬಗಳು ಒಗ್ಗಟ್ಟಿನಿಂದ ಜೀವಿಸುತ್ತಿದ್ದರು. ಇಂದು ಅವಿಭಕ್ತ ಕುಟುಂಬಗಳು ವಿರಳವಾಗುತ್ತಿವೆ. ಸಾಮಾಜಿಕ ಬದಲಾವಣೆ, ವ್ಯಕ್ತಿಯ ಸ್ವಾರ್ಥ, ಸಂಕುಚಿತ ಮನೋಭಾವನೆಯಿಂದ ಕುಟುಂಬಗಳು ಒಗ್ಗಟ್ಟನ್ನು ಮರೆದು ವಿಭಕ್ತವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಲೋಕಜ್ಞಾನ ಕಡಿಮೆ ಇರುವ ಗಂಡ ಭರಮರೆಡ್ಡಿಯನ್ನು ವಿವಾಹವಾಗಿ ಬಂದು ಮನೆಯಲ್ಲಿ ಅತ್ತೆ, ನಾದಿನಿಯರ ಕಿರುಕುಳು ಎಷ್ಟೇ ಇದ್ದರೂ ಅವೆಲ್ಲವನ್ನೂ ಸಹಿಸಿಕೊಂಡು ಕುಟುಂಬದ ಒಗ್ಗಟ್ಟಿಗೆ ಶ್ರಮಿಸಿ ಕೊನೆಗೆ ಎಲ್ಲರ ತಪ್ಪನ್ನು ಕ್ಷಮಿಸಿ ಕ್ಷಮಾಗುಣವನ್ನು ತೋರುವ ಮೂಲಕ ಕುಟುಂಬವನ್ನು ಒಡೆಯದೇ ಉಳಿಸಲು ಶ್ರಮಿಸುವ ಮೂಲಕ ಅವಿಭಕ್ತ ಕುಟುಂಬಕ್ಕೆ ಮಲ್ಲಮ್ಮ ಪ್ರೇರಣಾ ಶಕ್ತಿಯಾಗಿದ್ದಾಳೆ ಎಂದರು.
ತಾಲೂಕು ರೆಡ್ಡಿ ಸಮಾಜದ ಮುಖಂಡರಾದ ಕೆ ರಾಮನಗೌಡರು ಮಾತನಾಡುತ್ತಾ, ಒಬ್ಬ ಅತ್ತಿಗೆ ಹೇಗಿರಬೇಕು ಎನ್ನುವುದಕ್ಕೆ ಮಲ್ಲಮ್ಮ ಉದಾಹರಣೆಯಾಗಿದ್ದಾಳೆ. ಜೀವನದಲ್ಲಿ ಜವಾಬ್ದಾರಿ ಇಲ್ಲದೇ ಸ್ವೇಚ್ಛಾಚಾರಿಯಾಗಿದ್ದ ಮೈದುನ ವೇಮನರೆಡ್ಡಿ ಮುತ್ತಿನ ಮೂಗುತಿಯ ಮೂಲಕ ಮುಕ್ತಿಯ ಮಾರ್ಗವನ್ನು ತೋರಿ ವೇಮನಯೋಗಿಯಾಗಿ ಪರಿವರ್ತಿಸಿದ ಮಹಾನ್ ಸಾದ್ವಿಯಾಗಿದ್ದಾಳೆ. ತಮ್ಮ ತಾಳ್ಮೆಯ ಗುಣದಿಂದ ಇಡೀ ಕುಟುಂಬ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಶ್ರಮಿಸಿ, ಭಕ್ತಿಯ ಪಥದ ಮೂಲಕ ಸಾಗಿ ದೈವಸಾಕ್ಷಾತ್ಕಾರವಾಗಿ ಏನು ಬೆಕೆಂದು ಕೇಳಿದರೆ ತನಗಾಗಿ, ತನ್ನ ಸ್ವಾರ್ಥಕ್ಕಾಗಿ ಏನನ್ನೂ ಬೇಡದೇ, ಇಡೀ ಸಮುದಾಯದ ಒಳಿತಿಗಾಗಿ “ರೆಡ್ಡಿ ಸಮಾಜಕ್ಕೆ ಬಡತನ ಬಾರದಿರಲಿ” ಎಂದು ಕೋರುವ ಮೂಲಕ ನಿಸ್ವಾರ್ಥ ವ್ಯಕ್ತಿಯಾಗಿ ಕಂಗೊಳಿಸಿದ್ದಾಳೆ. ಅನೇಕ ಪವಾಡಗಳನ್ನು ಮಾಡುವ ಮೂಲಕ ಮಲ್ಲಮ್ಮ ರೆಡ್ಡಿ ಸಮಾಜದ ಪೂಜ್ಯನೀಯ ವ್ಯಕ್ತಿಯಾಗಿದ್ದಾಳೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ರೆಡ್ಡಿ ಸಮಾಜದ ಗೌರವಾಧ್ಯಕ್ಷ ದೇವೇಮದ್ರಗೌಡ, ಉಪಾಧ್ಯಕ್ಷರಾದ ರೆಡ್ಡಿ ರಾಜಣ್ಣ, ಸುರೇಶ, ನಿರ್ದೇಶಕ ಜಿ ನಾಗರಾಜ, ಮುಖಂಡರಾದ ಎಂ ಮಲ್ಲಿಕಾರ್ಜುನ, ಎನ್ ರವೀಂದ್ರನಾಥ, ಎನ್ ಬಸವರಾಜ, ಕಂದಾಯ ನಿರೀಕ್ಷಕ ಶಿವಕುಮಾರ, ಗ್ರಾಮ ಆಡಳಿತ ಅಧಿಕಾರಿ ಹರೀಶ್ ಹಾಗೂ ಇತರರು ಇದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ರೆಡ್ಡಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
