ಬೀದರ್ (ಸೆ.16): ಲೋಕೋಪಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆಯ 1.25 ಕೋಟಿ ರೂ. ಮೊತ್ತದ ತಾಲೂಕಿನ ‘ಬಗದಲ ಬಾವಗಿ ವಾಯಾ ಬೈರನಳ್ಳಿ ರಸ್ತೆ ಸುಧಾರಣಾ ಕಾಮಗಾರಿ’ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು.
ಔರಾದ (ಎಸ್) ಗ್ರಾಮದ ಬಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಬಳಿಕ ಔರಾದ (ಎಸ್) ಗ್ರಾಮಕ್ಕೆ ಭೇಟಿ ನೀಡಿ ಔರಾದ ಮತ್ತು ಬೈರನಳ್ಳಿ ಗ್ರಾಮಗಳಿಗೆ ಮಲ್ಟಿ ವಿಲೇಜ್ ಸಿಸ್ಟಮ್ ಸ್ಕಿಮ್ ನಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು, ಔರಾದ ಮತ್ತು ಬೈರನಳ್ಳಿ ಗ್ರಾಮಗಳಿಗೆ ಮಲ್ಟಿ ವಿಲೇಜ್ ಸಿಸ್ಟಮ್ ಸ್ಕೀಮ್ ನಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಅಂದಾಜು 1.31 ಕೋಟಿ ರೂ.ಗಳಲ್ಲಿ ಮಲ್ಟಿ ವಿಲೇಜ್ ಸಿಸ್ಟಮ್ ಸ್ಕೀಮ್ ರೂಪಿಸಿ ನೀರಿನ ಸಮಸ್ಯೆ ಬಗೆಹರಿಸುವ ಪ್ರಸ್ತಾವನೆ ಇದೆ. ಈ ವಿಚಾರವಾಗಿ ಸಂಬಂಧಿಸಿದ ಮಂತ್ರಿಗಳೊಂದಿಗೆ ಮಾತನಾಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಇ ಶಿವಾಜಿ ದೊಣ್ಣೆ, ಇಂಜಿನಿಯರ್ ಮಲ್ಲಿಕಾರ್ಜುನ ಪಾಟೀಲ್, ಔರಾದ (ಎಸ್) ಪಿಡಿಒ ಸಂಗಾರೆಡ್ಡಿ, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಕುಪ್ಪೇಂದ್ರ, ಬೋಜಪ್ಪ ಮೆಟಗೆ ಸೇರಿದಂತೆ ಅನೇಕ ಅಧಿಕಾರಿಗಳು, ಗ್ರಾಮಸ್ಥರು, ಗುತ್ತಿಗೆದಾರರು ಇದ್ದರು.