The post ಕನ್ನಡದ ಮಹಾನ್ ಕುಳ್ಳ ದ್ವಾರಕೀಶ್ ಇನ್ನಿಲ್ಲ appeared first on Hai Sandur kannada fortnightly news paper.
]]>ದ್ವಾರಕೀಶ್ 1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ಜನಿಸಿದರು. ಮೈಸೂರಿನಲ್ಲಿ ಬನುಮಯ್ಯ ಶಾಲೆ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ ದ್ವಾರಕೀಶ್ ಅವರ ಮನದಲ್ಲಿ ಯಾವಾಗಲೂ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು. ಇವ ಸಿನಿಮಾಗೆ ಓಡಿ ಹೋಗದಿರಲಿ ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ ಈಗಲೂ ಮೈಸೂರಿನ ಗಾಂಧೀ ಚೌಕದಲ್ಲಿ ಅಸ್ಥಿತ್ವದಲ್ಲಿರುವ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರು. ಆದರೆ ದ್ವಾರಕೀಶ್ ಅವರಿಗೆ ಸಿನಿಮ ಖಯಾಲಿ ಹೋಗಲಿಲ್ಲ. ಅವರ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರು. ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು ಆಮೇಲೆ ಸಿನಿಮಾ ಮಾತು ಎಂದರು. ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ ‘ವೀರಸಂಕಲ್ಪ’ದಲ್ಲಿ ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.
‘ವೀರಸಂಕಲ್ಪ’ ಅನುಭವದ ಬಗ್ಗೆ ದ್ವಾರಕೀಶ್ ಹೇಳಿದ ಒಂದು ಮಾತು ನೆನಪಾಗುತ್ತದೆ. ಅವರು ಎದುರಿಸಿದ ಮೊದಲ ಶಾಟ್ ಸಿಂಹಾಸನ ಹತ್ತುವುದಾಗಿತ್ತಂತೆ. ಆ ಶಾಟ್ ಮುಗಿದ ತಕ್ಷಣ ಮೇಲೆ ಕುಳಿತಿದ್ದ ಕ್ಯಾಮರಾಮನ್ ನಿರ್ದೇಶಕರಿಗೆ ಹೇಳಿದರಂತೆ, “ಸಾರ್ ಬೇಕಿದ್ರೆ ಈಗ್ಲೇ ಸಿಂಹಾಸನ ಇಳಿಯೋದು ಕೂಡಾ ಶಾಟ್ ತೆಗೆದುಬಿಡೋಣ, ಎರಡೂ ಕೆಲಸ ಒಟ್ಟಿಗೆ ಆಗಿಬಿಡುತ್ತೆ” ಅಂತ. ಈ ಮಾತನ್ನು ದ್ವಾರಕೀಶ್ ತಮ್ಮ ಸಿನಿಮಾ ಬದುಕಿನಲ್ಲೂ ತಾದ್ಯಾತ್ಮವಾಗಿ ಕಂಡಿದ್ದರು!.
ನಾವು ಬಹಳಷ್ಟು ವೇಳೆ ಒಬ್ಬ ವ್ಯಕ್ತಿ ಸೋತಾಗ ಅವನು ಕೆಟ್ಟ ಚಿತ್ರ ಮಾಡಿದ ಎಂದೋ, ಅವನು ಯಾರೊಡನೆಯೋ ಕಿತ್ತಾಡಿದಾಗ ನಾವು ಇಷ್ಟಪಟ್ಟ ಬಣದ ಕಡೆ ವಾಲಿಕೊಂಡು ಈತ ಯಾವಾಗಲೂ ತರಲೆ ಅಂತಲೋ ಅಭಿಪ್ರಾಯ ಕ್ರೋಡೀಕರಣಕ್ಕೆ ತೊಡಗುವುದು ಸಾಮಾನ್ಯ. ದ್ವಾರಕೀಶ್ ಅಂತಹ ಸಂದರ್ಭಗಳಲ್ಲಿ ಬಹಳಷ್ಟು ವೇಳೆ ನಮಗೆ ಕಂಡಿದ್ದಾರೆ. ಆದರೆ ದ್ವಾರಕೀಶ್ ಎಂಬ ಪ್ರತಿಭಾವಂತ ಮತ್ತು ಸಾಹಸಿಯನ್ನು ಈ ಎಲ್ಲ ಪರಿಧಿಗಳ ಆಚೆ ನೋಡುವ ಅಗತ್ಯವಿದೆ.
ಅಂದು ದ್ವಾರಕೀಶ್ ತಮ್ಮ ನೆಗೆಟೀವ್ ಅಂಶಗಳನ್ನು ತಾವೇ ಅಣಕು ಮಾಡಿಕೊಳ್ಳುತ್ತಾ, ಅದನ್ನೇ ತನ್ನ ಪಾಸಿಟೀವ್ ಶಕ್ತಿಗಳನ್ನಾಗಿ ಮಾಡಿಕೊಂಡು ಮೇಲೆ ಬಂದವರು. ನಾನು ಎತ್ತರವಿಲ್ಲ ಹಾಗಾಗಿ ‘ಕುಳ್ಳ’, ನನಗೆ ಬುದ್ಧಿ ಬೆಳೆದಿಲ್ಲ ಹಾಗಾಗಿ ‘ಪೆದ್ದ’, ಮಾತು ಸರಿಯಾಗಿ ಆಡೋಲ್ಲ ಹಾಗಾಗಿ ‘ಮೊದ್ದು’, ಮೂಗು ಸರಿ ಇಲ್ಲ ಹಾಗಾಗಿ ‘ಸೊಟ್ಟ’, ಸುಂದರತೆ ಇಲ್ಲ ‘ಜೀರೋ’ ಹೀಗೆ ಅವರು ತಮ್ಮನ್ನು ತಾವೇ ಗುರುತಿಸಿಕೊಂಡು, ಅದನ್ನೇ ತಮ್ಮ ಚಿತ್ರದ ವಸ್ತುವನ್ನಾಗಿಸಿಕೊಂಡು ಒಂದೊಂದೇ ಮೆಟ್ಟಿಲನ್ನು ನಿರ್ಮಿಸಿಕೊಂಡು ಮೇಲೇರಿದರು.
‘ವೀರ ಸಂಕಲ್ಪ’, ‘ಸತ್ಯ ಹರಿಶ್ಚಂದ್ರ’, ‘ಪರೋಪಕಾರಿ’, ‘ಕ್ರಾಂತಿ ವೀರ’, ‘ಮೇಯರ್ ಮುತ್ತಣ್ಣ’, ‘ದೂರದ ಬೆಟ್ಟ’, ‘ಗಾಂಧೀನಗರ’, ‘ಬಾಳು ಬೆಳಗಿತು’, ‘ಬಂಗಾರದ ಮನುಷ್ಯ’, ‘ಬಹದ್ದೂರ್ ಗಂಡು’ ಹೀಗೆ ನೀವು ಅಂದಿನ ಬಹಳಷ್ಟು ಚಿತ್ರಗಳಲ್ಲಿ ರಾಜ್ ಕುಮಾರ್ – ದ್ವಾರಕೀಶ್ ಜೋಡಿಯನ್ನು ಮೆಚ್ಚುಗೆಯಿಂದ ಕಾಣಬಹುದಿತ್ತು. ಚಿತ್ರರಂಗಕ್ಕೆ ಬಂದ ಮೂರುನಾಲ್ಕು ವರ್ಷಗಳಲ್ಲೇ ಸಿನಿಮಾ ನಿರ್ಮಾಣಕ್ಕೂ ದ್ವಾರಕೀಶ್ ಕೈ ಹಾಕಿದರು. ‘ಮೇಯರ್ ಮುತ್ತಣ್ಣ’ ಚಿತ್ರದ ಅವರ ನಿರ್ಮಾಣ ‘ಸಿದ್ಧಲಿಂಗಯ್ಯ’ ಅಂತಹ ಶ್ರೇಷ್ಠ ಚಿತ್ರ ನಿರ್ದೇಶಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು. ಅದಕ್ಕೂ ಮುಂಚೆ ದ್ವಾರಕೀಶ್ ಹಲವರೊಂದಿಗೆ ಕೂಡಿ ‘ಮಮತೆಯ ಬಂಧನ’ ಎಂಬ ಚಿತ್ರ ಕೂಡಾ ನಿರ್ಮಿಸಿದ್ದರು. ಮುಂದೆ ದ್ವಾರಕೀಶ್ ‘ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ’ದಂತಹ ಚಿತ್ರ ನಿರ್ಮಿಸಿ ತಾವೇ ಹೀರೋ ಕೂಡಾ ಆದರು. ಅಂದು ಆ ಚಿತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ತೆಲುಗು, ತಮಿಳು, ಮಲಯಾಳ, ಮರಾಠಿ ಭಾಷೆಗಳಲ್ಲಿ ಕೂಡಾ ನಿರ್ಮಾಣವಾಗಿ ದ್ವಾರಕೀಶ್ ಪ್ರಚಂಡ ಯಶಸ್ಸು ಗಳಿಸಿದ್ದರು.
ದ್ವಾರಕೀಶ್ ಅಭಿನಯದ ಕೆಲವೊಂದು ಚಿತ್ರಗಳಲ್ಲಿನ ಅವರ ಮುದ್ದು ಮುದ್ದಿನ ಅಭಿನಯದ ಬಗ್ಗೆ ಹೇಳುವುದಾದರೆ ‘ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ಹಣದ ಬದಲು ಜೇಬಲ್ಲಿ ಜಿರಳೆ ಭದ್ರಪಡಿಸಿಕೊಂಡು ಹೋಟೆಲಿನಲ್ಲಿ ಎಲ್ಲಾ ತರಹದ ತಿಂಡಿ ತಿನ್ನೋದು; ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಕೊಳದ ಬಳಿ ಕುಳಿತು, ನೀರು ಬಿಸಿ ಆಗ್ಲಿ ಅಂತ ಕಾಯ್ತಿದೀನಿ ಅನ್ನೋದು; ‘ಬಹದ್ದೂರ್ ಗಂಡು’ ಚಿತ್ರದಲ್ಲಿ ಪದೇ ಪದೇ ‘ನಾವೇನ್ ಮೂಲಂಗಿ ತಿನ್ತಾ ಇರ್ತೀವಾ’ ಅನ್ನೋದು; ‘ಭಕ್ತ ಕುಂಬಾರ’ದಲ್ಲಿ ಕಣ್ಣು ಕಾಣದಂತೆ ಅವತಾರ ಮಾಡಿಕೊಂಡಿದ್ದ ಬಾಲಣ್ಣನಿಗೆ “ಮಹಾಸ್ವಾಮಿ ಸಂಕೋಚ ಬೇಡ ಇನ್ನೊಂದ್ಸ್ವೊಲ್ಪ ಬಡಿಸಿಕೊಳ್ಳಿ” ಅಂತ ಹೇಳುತ್ತಾ, ತಾಯಿ ಊಟ ಬಡಿಸಿ ಆಚೆ ಹೋದ ನಂತರ ಅದನ್ನೆಲ್ಲಾ ತಾನೇ ತಿನ್ನೋದು; ‘ಗಲಾಟೆ ಸಂಸಾರ’ದಲ್ಲಿ ಮಂಜುಳಾ ಹಿಂದೆ ಭಗ್ನ ಪ್ರೇಮಿಯಾಗಿ ಅಲೆದಾಡೋದು; ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ‘ತದ್ದಿನ ದಿನ ದಿನ ತದ್ಧಿನ ನಾಳೆ ನಮ್ಮ ತಿಥಿ ದಿನ’ ಅಂತ ಕುಣಿಯೋದು; ‘ಮುದ್ಧಿನ ಮಾವ’ ಚಿತ್ರದಲ್ಲಿ ಭಿಕ್ಷುಕನಾಗಿ, ಮನೆಯ ಒಡೆಯ ದೊಡ್ಡಣ್ಣನಿಗೆ ನಾವಿಬ್ರೂ ಬೇರೆ ಬೇರೆ ತರದಲ್ಲಿ ಭಿಕ್ಷೆ ಬೇಡೋರೇ ಅನ್ನೋದು; ‘ಪ್ರೊಫೆಸರ್ ಹುಚ್ಚೂರಾಯ’ ಚಿತ್ರದಲ್ಲಿ ‘ನಿನ್ಮನೆ ಕಾಯಾ, ಎಂಟ್ಎಮ್ಮೆ ಕರೆಯಾ, ಸೆರಗನ್ನು ಹೊದೆಯೇ ನೀ ಗುಜ್ಜಾನೆ ಮರಿಯೇ’ ಅಂತ ವೈಶಾಲಿಯನ್ನು ರೇಗಿಸೋದು; ‘ಗುರು ಶಿಷ್ಯರು’ ಚಿತ್ರದಲ್ಲಿ ‘ದೊಡ್ಡವರೆಲ್ಲಾ ಜಾಣರಲ್ಲ’ ಎಂದು ಹಾಡಿ ಕುಣಿದು ತನ್ನಂತ ಗಾಂಫ ಮಂಗಗಳಿಗೆ ನಾಯಕನಾಗಿರೋದು ಇಂಥ ರಸಪೂರ್ಣ ಗಳಿಗೆಗಳು ಅಸಂಖ್ಯಾತ.
ದ್ವಾರಕೀಶ್ ಚಿತ್ರ ನಿರ್ಮಾಪಕನಾಗಿ ಮಾಡಿದ ಕೆಲಸಗಳು ಮಹತ್ವ ಪೂರ್ಣವಾದವು. ಅವರು ನಿರ್ಮಿಸಿದ ಒಟ್ಟು ಚಿತ್ರಗಳು 52. ಅವುಗಳಲ್ಲಿ ‘ಮೇಯರ್ ಮುತ್ತಣ್ಣ’, ‘ಕುಳ್ಳ ಏಜೆಂಟ್ ೦೦೦’, ‘ಭಾಗ್ಯವಂತರು’, ‘ಕಳ್ಳ ಕುಳ್ಳ’, ‘ಮನೆ ಮನೆ ಕಥೆ’, ‘ಇಂದಿನ ರಾಮಾಯಣ’, ‘ಕಿಟ್ಟು ಪುಟ್ಟು’, ‘ಸಿಂಗಾಪೂರಿನಲ್ಲಿ ರಾಜಾ ಕುಳ್ಳ’, ‘ಗುರು ಶಿಷ್ಯರು’, ‘ಆಪ್ತಮಿತ್ರ’, ‘ಆನಂದ ಭೈರವಿ’ ಕಂಡ ಯಶಸ್ಸು ಅವು ಹೊಂದಿದ್ದ ಮನರಂಜನಾತ್ಮಕ ಅಂಶಗಳು, ತಾಂತ್ರಿಕತೆ, ಉತ್ತಮ ಹಾಡುಗಳು ಇವೆಲ್ಲವೂ ಮರೆಯುವಂತದ್ದಲ್ಲ. ಅವರೇ ನಿರ್ದೇಶಿಸಿದ ‘ನೀ ಬರೆದ ಕಾದಂಬರಿ’, ‘ರಾಯರು ಬಂದರು ಮಾವನ ಮನೆಗೆ’ ಅಂತಹ ಚಿತ್ರಗಳು ಕೂಡಾ ಉತ್ತಮವಾಗಿದ್ದವು. ಎ. ಆರ್. ರೆಹಮಾನ್ ಮೊದಲು ಕೆಲಸ ಮಾಡಿದ್ದು ‘ನೀ ಬರೆದ ಕಾದಂಬರಿ’ ಚಿತ್ರದ ಸಂದರ್ಭದಲ್ಲಿ, ಆ ಚಿತ್ರದ ಸಂಗೀತ ನಿರ್ದೇಶಕರಾದ ವಿಜಯಾನಂದ್ ಅವರ ಸಹಾಯಕನಾಗಿದ್ದವರು ಎ. ಆರ್. ರೆಹಮಾನ್. ಈ ವಿಷಯವನ್ನು ಸ್ವಯಂ ಎ ಆರ್ ರೆಹಮಾನ್ ಅವರೇ ಬಹಿರಂಗಪಡಿಸಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ದ್ವಾರಕೀಶ್ ತಾವು ನಿರ್ಮಾಪಕರಾಗಿ ಯಶಸ್ವಿಯಾಗಿದ್ದ ದಿನಗಳಲ್ಲಿ ಕಲಾವಿದರನ್ನು ಅತ್ಯಂತ ಗೌರವಯುತವಾಗಿ, ಶಿಸ್ತು ಗೌರವಗಳಿಂದ, ಸಂಭಾವನೆಗಳಿಂದ ಯೋಗ್ಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿತ್ತು. ಹಾಗಾಗಿ ಹಾಸ್ಯನಟ ಮಾತ್ರರಾಗಿದ್ದರೂ ಅವರೊಂದಿಗೆ ನಾಯಕನಟಿಯರಾಗಿ ನಟಿಸಲು ಮಂಜುಳಾ, ರಾಧಿಕಾ, ಜಯಚಿತ್ರಾ ಅಂತಹ ಪ್ರಸಿದ್ಧ ತಾರೆಯರು ಕೂಡಾ ಹಿಂದು ಮುಂದೆ ನೋಡಲಿಲ್ಲ ಎಂಬುದು ಅತೀ ಮುಖ್ಯವಾದ ಅಂಶ. ಕನ್ನಡದಲ್ಲಿ ಮಾತ್ರವಲ್ಲದೆ ರಜನೀಕಾಂತ್, ಶ್ರೀದೇವಿ ಅಂತಹ ಪ್ರಸಿದ್ಧ ತಾರೆಯರಿದ್ದ ಇತರ ಭಾಷೆಯ ಚಿತ್ರಗಳನ್ನು ಕೂಡಾ ದ್ವಾರಕೀಶ್ ನಿರ್ಮಿಸಿದ್ದರು. ಒಬ್ಬ ಸಾಮಾನ್ಯ ನಟನಾಗಿ ಕೆಲವೊಂದು ರೂಪಾಯಿ ಸಂಭಾವನೆಗೆ ಚಿತ್ರರಂಗದಲ್ಲಿ ನಟಿಸಲು ಬಂದ ಈ ಪುಟ್ಟ ಹುಡುಗ ಹೀಗೆ ತ್ರಿವಿಕ್ರಮನಾಗಿ ಬೆಳೆದು ನಿಂತ ಪರಿ ಅಭಿನಂದನೀಯವಾದದ್ದು.
ಯಶಸ್ಸಿನ ನಡೆಯಲ್ಲಿ ನಡೆದವನಿಗೆ ಸೋಲುಗಳು ಯಾವಾಗ ಬಂದು ತಟ್ಟುತ್ತದೋ ಹೇಳುವುದು ಕಷ್ಟ. ಒಳ್ಳೆಯ ಚಿತ್ರ ಅನ್ನೋದು “ತಾನೇ ತಾನಾಗಿ ಆಗುವಂತದ್ದು ನಾವು ಮಾಡಿದೆವು ಎಂದು ಅಹಂಕಾರಪಡುವುದಲ್ಲ” ಎನ್ನುವ ದ್ವಾರಕೀಶ್ ಅವರಿಗೆ ತಮ್ಮ ಸೋಲುಗಳನ್ನು ಮಾತ್ರ ತಾವೇ ಮಾಡಿಕೊಂಡದ್ದು ಎಂಬುದರ ಬಗ್ಗೆ ಪರಿಜ್ಞಾನ ಇತ್ತು ಎಂಬುದು ಕೂಡಾ ಮಹತ್ವದ ಅಂಶ. “ಗುರು ಶಿಷ್ಯರು” ಅಂತಹ ಚಿತ್ರ ಮಾಡಿ ಯಶಸ್ಸಿನ ತುತ್ತ ತುದಿಯಲ್ಲಿದ್ದ ನಾನು “ಆಫ್ರಿಕಾದಲ್ಲಿ ಶೀಲಾ” ಮಾಡಿ “ಮೈಯೆಲ್ಲಾ ಸಾಲ” ಎನ್ನುವಂತಾದೆ ಎಂದು ನುಡಿಯುವ ದ್ವಾರಕೀಶ್ ಅವರ ಮಾತುಗಳು ಮಾರ್ಮಿಕವಾದದ್ದು ಮತ್ತು ಸೋಲಿನಲ್ಲೂ ಹಾಸ್ಯ ಪ್ರಜ್ಞೆಯನ್ನು ಮೇಳೈಸಿಕೊಂಡದ್ದು. ಹಲವು ಬಾರಿ ಕಿತ್ತಾಡಿದರೂ, ಹಲವು ಬಾರಿ ಒಟ್ಟಿಗೆ ಗೆದ್ದು ಒಬ್ಬರಿಗೊಬ್ಬರಿಗೆ ಆಂತರ್ಯದಲ್ಲಿ ಪ್ರೀತಿ ಹೊಂದಿದ್ದ ದ್ವಾರಕೀಶ್ ವಿಷ್ಣುವರ್ಧನ್ ಜೋಡಿ, ‘ಆಪ್ತ ಮಿತ್ರ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡದ್ದು ಮಾತ್ರವಲ್ಲದೆ, ದ್ವಾರಕೀಶ್ ತಾವು ಕಳೆದುಕೊಂಡಿದ್ದ ಜೀವನವನ್ನು ಮತ್ತೆ ಪಡೆಯುವಂತಾಯಿತು.
ದ್ವಾರಕೀಶ್ ಚಿತ್ರರಂಗದಲ್ಲಿ ಗೆದ್ದಿದ್ದಾರೆ, ಸೋತಿದ್ದಾರೆ, ಹಲವೊಮ್ಮೆ ವಿಚಿತ್ರವಾಗೂ ಕಂಡಿದ್ದಾರೆ. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಾವು ಅವರ ಪ್ರತಿಭೆ, ಸಾಹಸ ಪ್ರವೃತ್ತಿ, ನೀಡಿದ ಕೊಡುಗೆಗಳನ್ನು ಕೂಡಾ ಗಮನಿಸುವುದು ಮುಖ್ಯವಾದದ್ದು. ಹಲವಾರು ಚಿತ್ರಗಳಲ್ಲಿ ರಾಜ್ ಜೋಡಿಯಾಗಿ, ವಿಷ್ಣು ಜೋಡಿಯಾಗಿ ನಟಿಸಿದ್ದು, ಕನ್ನಡದ ಶ್ರೇಷ್ಠ ಹಾಸ್ಯ ನಟರ ಪರಂಪರೆಯಲ್ಲಿ ಒಬ್ಬರಾಗಿದ್ದು, ಸಿದ್ಧಲಿಂಗಯ್ಯ, ಭಾರ್ಗವ ಅಂತಹವರನ್ನು ನಿರ್ದೇಶಕರಾಗಿ ಮಾಡಿದ್ದು, ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದು, ವಿದೇಶದ ವೈಭೋಗಗಳನ್ನು ಚಿತ್ರ ರಸಿಕರು ಕನ್ನಡ ಚಿತ್ರಗಳಲ್ಲಿ ಕಾಣುವಂತೆ ಮಾಡಿದ್ದು, ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದು, ಪೌರಾಣಿಕ ಚಿತ್ರಗಳು ಮರೆಯಾಗಿದ್ದ ಕಾಲದಲ್ಲಿ ‘ಗುರು ಶಿಷ್ಯರು’ ಅಂತಹ ಚಿತ್ರ ನಿರ್ಮಿಸಿದ್ದು, ‘ಆಪ್ತಮಿತ್ರ’ದಂತಹ ಅಪೂರ್ವ ಯಶಸ್ಸಿನ ಚಿತ್ರ ನಿರ್ಮಿಸಿದ್ದು ಇವೆಲ್ಲಾ ದ್ವಾರಕೀಶರ ಅಮೋಘ ಇತಿಹಾಸದ ವಿವಿಧ ಕಾಲಘಟ್ಟಗಳು.
ದ್ವಾರಕೀಶ್ ಅವರು ಪತ್ರಿಕೆಯೊಂದರಲ್ಲಿ ‘ಬೆಳ್ಳಿ ತೆರೆಯ ಹಿಂದೆ’ ಎಂಬ ಅಂಕಣದ ಮೂಲಕ ತಮ್ಮ ಬದುಕು ಮತ್ತು ಚಿತ್ರರಂಗದ ಕುರಿತಾಗಿ ಧಾರಾವಾಹಿಯಾಗಿ ಬರೆದರು. ಆ ಅಂಕಣದಲ್ಲಿ ಕೊನೆಯಲ್ಲಿ ಅವರು ಹೀಗೆ ಹೇಳುತ್ತಾರೆ – “ಆದಷ್ಟೂ ಸತ್ಯ ಬರೆದಿದ್ದೇನೆ. ಕೆಲವನ್ನು ಮುಚ್ಚಿಟ್ಟಿದ್ದೇನೆ”. ಮುಂದೆ ಸಹಾ ಅವರು ಆಟಗಾರ, ಚೌಕ, ಅಮ್ಮ ಐ ಲವ್ ಯು ಚಿತ್ರಗಳನ್ನು ನಿರ್ಮಿಸಿದ್ದರು. ಅವರು ಹೊಸ ಚಿತ್ರಗಗಳನ್ನು ನಿರ್ಮಿಸುವ ಬಗ್ಗೆ ಉತ್ಸುಕತೆಯಿಂದ ಹೇಳುತ್ತಿದ್ದರು. ಹೀಗೆ ದ್ವಾರಕೀಶರದು ನಿರಂತರವಾಗಿ ಕಷ್ಟದ ನಡುವೆಯೂ ಮೇಲೇಳುವ ಸಾಹಸಮಯ ಸಿನೀಬದುಕು.
ದ್ವಾರಕೀಶರು ಕೊನೆಯವರೆಗೂ ಪುಟ್ಟವರಂತೆಯೇ ಕಾಣುತ್ತಿದ್ದರು. ಅವರು 2024 ಏಪ್ರಿಲ್ 16ರಂದು ನಿಧನರಾದಾಗ 82ನೇ ವಯಸ್ಸಿನಲ್ಲಿದ್ದರು. ದ್ವಾರಕೀಶ್ ಕೊನೆಯವರೆಗೂ ಚಿತ್ರರಂಗದಲ್ಲಿ ಸಾಧನೆ ಮುಂದುವರೆಸಬೇಕೆಂಬ ಮನಸ್ಸಿತ್ತು. ಯಶಸ್ಸು ಕ್ಷೀಣವಾದ ಕಾಲದಲ್ಲಿ ವಿಧಿ ಅವರ ನೆಲೆ ಮತ್ತು ಅದನ್ನು ಮಾರಿದ್ದರಲ್ಲಿ ಬಂದ ಜೀವನಾಂಶಗಳನ್ನು ಕೂಡ ಕಸಿದಿತ್ತು.
ಕನ್ನಡ ಚಿತ್ರರಂಗ ಕಂಡ ಬಹುಮುಖ್ಯ ಸಾಧಕರಲ್ಲಿ ದ್ವಾರಕೀಶ್ ಒಬ್ಬರು ಎಂಬುದು ನಿರ್ವಿವಾದ. ಅಂಥ ಅಪೂರ್ವ ಸಾಹಸಿ ಲೋಕದಲ್ಲಿ ಖಂಡಿತ ದುರ್ಲಬರು. ಅವರ ಕಾಲದ ನಮ್ಮ ಮನದಲ್ಲಿ ಅವರಿಗೆ ಶಾಶ್ವತ ಸ್ಥಾನವಿದೆ.
ಕೃಪೆ: ಕನ್ನಡ ಸಂಪದ
The post ಕನ್ನಡದ ಮಹಾನ್ ಕುಳ್ಳ ದ್ವಾರಕೀಶ್ ಇನ್ನಿಲ್ಲ appeared first on Hai Sandur kannada fortnightly news paper.
]]>The post ಹಿರಿಯನಟಿ ‘ಲೀಲಾವತಿ’ ತಾಯಿ ಇನ್ನಿಲ್ಲ appeared first on Hai Sandur kannada fortnightly news paper.
]]>ನಾಗರಹಾವು ಚಿತ್ರದಲ್ಲಿ ‘ರಾಮಾಚಾರಿ’ ವಿಷ್ಣುವರ್ಧನ, ‘ಚಾಮಯ್ಯ ಮೇಷ್ಟ್ರು’ ಅಶ್ವಥ್ ಅವರ ಜೊತೆಯಲ್ಲಿ ಚಾಮಯ್ಯ ಮೇಷ್ಟ್ರ ಪತ್ನಿಯಾಗಿ, ರಾಮಾಚಾರಿಯ ಸಲಹುವ ಯಶೋದೆಯಂತೆ, ಮಾತು ಮಾತಿಗೂ ‘ದೇವ್ರೇ, ದೇವ್ರೇ’ ಅನ್ನುವ ಆ ಮಾತೃ ಸ್ವರೂಪಿ ಲೀಲಾವತಿಯನ್ನು ಮರೆಯುವುದು ಸಾಧ್ಯವೇ ಇಲ್ಲ. ಅಂತೆಯೇ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬಲ್ಲಿ ಪ್ರೀತಿಯ ಶಿಕ್ಷಕಿಯಾಗಿ ಅವರು ಕಂಡ ರೀತಿ, ‘ಮೆಲ್ಲುಸಿರೇ ಸವಿಗಾನ’ ಹಾಡಿನಲ್ಲಿ ಅವರು ತೋರಿದ ಸುಂದರ ಅಭಿನಯ, ‘ಅಂತಿಂಥ ಹೆಣ್ಣು ನೀನಲ್ಲ’ ಎಂದು ಅತ್ತ ಕಾಳಿಂಗರಾಯರು ಹಾಡುತ್ತಿದ್ದರೆ ಇತ್ತ ರಾಜ್ ಜೊತೆಯಲ್ಲಿ ತೋರುತ್ತಿದ್ದ ಲಾವಣ್ಯ, ‘ಗೆಜ್ಜೆ ಪೂಜೆ’ ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಕಣ್ಣುಗಳಲ್ಲೇ ಇಡೀ ಚಿತ್ರಕಥೆಗೆ ಬೇಕಾದ ವಾತಾವರಣವನ್ನು ಕಟ್ಟಿಕೊಡುವ ರೀತಿ, ‘ಭಕ್ತ ಕುಂಬಾರ’ದಲ್ಲಿ ಭಕ್ತಿ, ನಿರಾಶೆ, ಆಕ್ರೋಶ, ಪ್ರೀತಿ ಇವುಗಳೆಲ್ಲವನ್ನೂ ಒಟ್ಟಿಗೆ ತರುವ ಸಂಗಮ, ‘ಅವರ್ಗಳ್’ ಎಂಬ ತಮಿಳು ಚಿತ್ರದಲ್ಲಿ ಕ್ರೂರಿಯಾದ ಮಗ ರಜನೀಕಾಂತನಿಗೆ ತನ್ನ ಸೌಮ್ಯತನದಿಂದಲೇ ಬಂಡೆದ್ದ ಆಕೆಯ ಅಭಿನಯದ ರೀತಿ ಹೀಗೆ ಹೇಳುತ್ತಾ ಹೋದರೆ ಅದು ಕೊನೆಯಿಲ್ಲದ ಕಥೆಯಾಗುತ್ತದೆ. ಅಂತಹ ಭವ್ಯ ಕಲಾವಿದೆ ಲೀಲಾವತಿಯವರು.
ಲೀಲಾವತಿಯವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ಬದುಕು ಸಾಗಿಸಲು ಮೈಸೂರಿನ ಕಡೆ ಮುಖ ಮಾಡಿದ ಲೀಲಾವತಿಯವರು ಅತ್ಯಂತ ಕಷ್ಟಪೂರ್ಣ ಜೀವನವನ್ನು ಪ್ರಾರಂಭಿಸಿದರು. ಹೊಟ್ಟೆಹೊರೆಯಲು ಪಾತ್ರೆ ತೊಳೆದು ಜೀವನ ಸಾಗಿಸಿದ್ದೂ ಉಂಟು. ಮುಂದೆ ರಣಧೀರ ಕಂಠೀರವ ಚಿತ್ರಕ್ಕಾಗಿ 1500 ರೂಪಾಯಿ ಆದಾಯ ದೊರಕುವವರೆಗೆ ಅವರು ಪಟ್ಟ ಬವಣೆಗಳು ಅನೇಕ. ಲೀಲಾವತಿ ತಾಯಿ ಹೇಳುತ್ತಿದ್ದರು: “ಬದುಕೆಂಬುದು ರೈಲುಬಂಡಿಯಂತೆ. ಬದುಕಲ್ಲಿ ನೀವು ರೈಲು ತಡವಾಗಿ ಬರಬಹುದು ಎಂದು ನಿರೀಕ್ಷಿಸಬಹುದು. ಆದರೆ ಅದು ಹಳಿತಪ್ಪುತ್ತದೆ ಎಂದು ನಿರೀಕ್ಷಿಸುವುದು ಕಷ್ಟ!”. ಈ ಮಾತುಗಳು ಲೀಲಾವತಿಯವರ ಬದುಕಿನ ಸೂಕ್ಷ್ಮ ಎಳೆಗಳನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಹಳಿತಪ್ಪಿದ ಬದುಕಿನಲ್ಲೂ ಅವರೂ ಎಲ್ಲಾ ಪರೀಕ್ಷೆಗಳಲ್ಲೂ ಹೋರಾಡಿ ಜೀವನದ ರೈಲುಬಂಡಿಯನ್ನು ತಳ್ಳುತ್ತಾ ಬದುಕು ಸಾಗಿಸಿದವರು.
ಲೀಲಾವತಿಯವರು ಮೈಸೂರಿನಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟಪಾತ್ರವೊಂದರ ಮೂಲಕ ಚಿತ್ರಜೀವನವನ್ನು ಪ್ರಾರಂಭಿಸಿದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ನಗಣ್ಯವಾದ ಪಾತ್ರಗಳಲ್ಲಿ ಸಹಾ ಅಭಿನಯಿಸಿದರು. ‘ರಾಣಿ ಹೊನ್ನಮ್ಮ’ ಲೀಲಾವತಿಯವರು ನಾಯಕಿಯಾದ ಪ್ರಥಮ ಚಿತ್ರ. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಗೆಜ್ಜೆ ಪೂಜೆ, ಸಿಪಾಯಿ ರಾಮು, ಭಕ್ತ ಕುಂಬಾರ ಚಿತ್ರಗಳಲ್ಲಿ ಅವರದು ಘನವೇತ್ತ ಪಾತ್ರಗಳು. ಹಲವಾರು ಚಿತ್ರಗಳಲ್ಲಿ ಅವರು ನಾಯಕನಟರಿಗೆ ದೊರಕುತ್ತಿದ್ದ ಎರಡರಷ್ಟು ಸಂಭಾವನೆ ಪಡೆಯುವಂತಹ ಪ್ರಸಿದ್ಧಿ ಸಹಾ ಪಡೆದಿದ್ದರು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ ಸುಮಾರು 600ರ ಸಮೀಪದ್ದು.
ಮದುವೆ ಮಾಡಿ ನೋಡು, ಸಂತ ತುಕಾರಾಂ ಚಿತ್ರಗಳಿಗೆ ಲೀಲಾವತಿಯವರು ರಾಷ್ಟ್ರಪ್ರಶಸ್ತಿ ಪಡೆದರೆ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಅವರೇ ನಿರ್ಮಿಸಿದ ‘ಕನ್ನಡದ ಕಂದ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಪಡೆದರು.
ಲೀಲಾವತಿ ಅವರ ಮಗ ವಿನೋದ್ ರಾಜ್ ಹಲವಾರು ಚಿತ್ರಗಳಲ್ಲಿ ನಟಿಸಿದರು. ತಾಯಿ ಮಗ ಇಬ್ಬರೂ ತೋಟಗಾರಿಕೆ ನಡೆಸಿ ಯಶಸ್ವಿ ಎನಿಸಿದರು.
ಲೀಲಾವತಿ ಎಂಬ ಈ ತಾಯಿಯ ಬದುಕು ಚಿತ್ರರಂಗದಲ್ಲಿ ಅನೇಕ ಕಲಾವಿದೆಯರು ಪಟ್ಟ ಕಷ್ಟ ಪರಿಪಾಟಲುಗಳ ಜೊತೆಗೆ ಇದನ್ನೆಲ್ಲಾ ಮೀರಿ ಬದುಕು ನಡೆಸಿ ಕೆಚ್ಚೆದೆ ಇರಬೇಕಾದ ಮಹಾನ್ ಜೀವದ ಬಗೆಗೆ ಸಾಕಷ್ಟು ಹೇಳುತ್ತದೆ.
ಹಿರಿತನದಲ್ಲಿ ಅಸ್ವಸ್ಥವಾಗಿದ್ದ ಜೀವ ಈ ಲೋಕಕ್ಕೆ ವಿದಾಯ ಹೇಳಿದೆ. ಈ ಮಹಾನ್ ತಾಯಿಗೆ ಹೃದಯಪೂರ್ಣ ನಮನ.
The post ಹಿರಿಯನಟಿ ‘ಲೀಲಾವತಿ’ ತಾಯಿ ಇನ್ನಿಲ್ಲ appeared first on Hai Sandur kannada fortnightly news paper.
]]>The post ನೀನೇ ಸಾಕಿದಾ ಗಿಣಿ,ನಿನ್ನಾ ಮುದ್ದಿನಾ ಗಿಣಿ ಎಂಬ ಅದ್ಭುತ ಗೀತೆ ಹುಟ್ಟಿದ ಕತೆ appeared first on Hai Sandur kannada fortnightly news paper.
]]>ಆರ್ ಟಿ ವಿಠ್ಠಲ್ ಮೂರ್ತಿ
The post ನೀನೇ ಸಾಕಿದಾ ಗಿಣಿ,ನಿನ್ನಾ ಮುದ್ದಿನಾ ಗಿಣಿ ಎಂಬ ಅದ್ಭುತ ಗೀತೆ ಹುಟ್ಟಿದ ಕತೆ appeared first on Hai Sandur kannada fortnightly news paper.
]]>The post ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಇನ್ನಿಲ್ಲ appeared first on Hai Sandur kannada fortnightly news paper.
]]>1971ರಲ್ಲಿ ಡಿ.ಬಿ. ಚಂದ್ರೇಗೌಡರು ಮೊದಲ ಬಾರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 1977ರಲ್ಲಿ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಅವರು, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಸಂದರ್ಭ ಬಂದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಗೆಲುವಿಗೆ ಶ್ರಮಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಸಂಸದರ ಸ್ಥಾನಕ್ಕೆ ರಾಜೀನಾಮೆಯ ಬಳಿಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ಅವರು ನೀರಾವರಿ ಸಚಿವರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವರಾಜು ಅರಸು ಅವರೊಂದಿಗೆ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡು 1980-81ರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು.
ಚಂದ್ರೇಗೌಡರು 1983ರಲ್ಲಿ ಜನತಾ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗ್ಡೆ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ 1983-85ರವರೆಗೆ ಚಂದ್ರೇಗೌಡರು ವಿಧಾನಸಭಾ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1986ರಲ್ಲಿ ಇವರು ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1987ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಪಡೆದಿದ್ದರು.
ಚಂದ್ರೇಗೌಡರು 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ 1999ರಿಂದ 2004ರವರೆಗೆ ಎಸ್.ಎಂ. ಕೃಷ್ಣಾ ಅವರ ಸಂಪುಟದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2009ರಲ್ಲಿ ಬಿಜೆಪಿ ಸೇರಿದ್ದ ಅವರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.
ಸಮಾಜವಾದಿ ಚಿಂತಕರಾಗಿದ್ದ ಡಿ.ಬಿ ಚಂದ್ರೇಗೌಡರು ನಾಲ್ಕೂವರೆ ದಶಕಗಳ ಕಾಲ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2014ರಿಂದ ಈಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದ ಅವರು, ದಾರದಹಳ್ಳಿಯ ತಮ್ಮ ‘ಪೂರ್ಣಚಂದ್ರ’ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಡಿ.ಬಿ ಚಂದ್ರೇಗೌಡರು 2023ರ ನವೆಂಬರ್ 6ರಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.
The post ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಇನ್ನಿಲ್ಲ appeared first on Hai Sandur kannada fortnightly news paper.
]]>The post ಜುಲೈ 12-ಆಲೂರು ವೆಂಕಟರಾಯರು ಅವರ ಹುಟ್ಟುಹಬ್ಬದಂದು ಶತ ಶತ ನಮನಗಳು: appeared first on Hai Sandur kannada fortnightly news paper.
]]>ಮೈಸೂರು, ಬಾಂಬೆ ಪ್ರೆಸಿಡೆನ್ಸಿ & ನಿಜಾಮರ ಹೈದರಾಬಾದ್ನ ಕನ್ನಡ ಮಾತನಾಡುವ ಜನರಿಗಾಗಿ ರಾಜ್ಯ ರಚನೆಗೆ ಬೆಂಬಲವಾಗಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಕೈಗೊಂಡಿದ್ದಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ.
ಕರ್ನಾಟಕದ ಕುಲಪುರೋಹಿತ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಕನ್ನಡ ಭುವನೇಶ್ವರಿ ತಾಯಿಯ ಅನನ್ಯ ಆರಾಧಕ,ಸಾಹಿತ್ಯ ಪರಿಚಾರಕ, ಪತ್ರಕರ್ತರು, ಇತಿಹಾಸಕಾರರಾದ ಅವರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿ, ತಮ್ಮ ಬರಹಗಳ ಮೂಲಕ ಜಾಗೃತಿ ಮೂಡಿಸಿ, ಕರ್ನಾಟಕದ ಕುಲಪುರೋಹಿತ ಎನಿಸಿಕೊಂಡ ಶ್ರೀ ಆಲೂರು ವೆಂಕಟರಾಯರ ಜನ್ಮ ಜಯಂತಿಯಂದು ಗೌರವಪೂರ್ವಕವಾಗಿ ಅವರನ್ನು ಸ್ಮರಿಸೋಣ.
ಕನ್ನಡ ಸಾಹಿತ್ಯ, ಪತ್ರಿಕೋದ್ಯಮ & ಸಾಂಸ್ಕೃತಿಕ ವಲಯಕ್ಕೆ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯವಾಗಿದೆ.
-ಮೈಲೇಶ ಬೇವೂರ್
The post ಜುಲೈ 12-ಆಲೂರು ವೆಂಕಟರಾಯರು ಅವರ ಹುಟ್ಟುಹಬ್ಬದಂದು ಶತ ಶತ ನಮನಗಳು: appeared first on Hai Sandur kannada fortnightly news paper.
]]>The post ಕನಸುಗಾರ ಸೊಗಸಾದ ಮಾತುಗಾರ ಮೈಲೇಶ್ ಬೇವೂರ್ appeared first on Hai Sandur kannada fortnightly news paper.
]]>ಸಂಡೂರು ಜನತೆಯ ಅದೃಷ್ಟವೆಂಬಂತೆ ಇಲಾಖೆಗೆ 2021ನೇ ವರ್ಷದಲ್ಲಿ ಮೈಲೇಶ್ ಬೇವೂರ್ ಎಂಬುವವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಂದರು.
ಇತ್ತೀಚಿಗೆ ಸ್ಥಳೀಯ ಜಾತಿ ರಾಜಕೀಯ ದುರುದ್ದೇಶದಿಂದ ಅವರನ್ನು ದಿನಾಂಕ: 03.07.2023 ರಂದು ವರ್ಗಾವಣೆ ಮಾಡಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಸಂಡೂರು ತಾಲೂಕಿನಲ್ಲಿ ನೆಲೆ-ಬೆಲೆ ಇಲ್ಲವೆಂದು ತೋರಿಸಿದ್ದು ಎಲ್ಲರಿಗೂ ಗೊತ್ತಿರುವಂತ ವಿಷಯವೇ ,
ಸಂಡೂರು ತಾಲೂಕಿಗೆ ಒಬ್ಬ ಸಭ್ಯ, ದಕ್ಷ ಪ್ರಾಮಾಣಿಕ, ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದ ಮೈಲೇಶ್ ಬೇವೂರ್ ಅವರನ್ನ ನಾನು ಬಹಳ ಹತ್ತಿರದಿಂದ ಅವರ ಕಾರ್ಯವೈಖರಿಯನ್ನು 2010 ರಿಂದ ಗಮನಿಸುತ್ತಾ ಬಂದಿದ್ದೇನೆ. ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿಕೊಳ್ಳಲು ಶಬ್ದಗಳು ಸಾಲದು, ಅ ತರಹದ ಒಬ್ಬ ಸ್ನೇಹಜೀವಿ,ಅವರೊಂದಿಗಿನ ಪ್ರೀತಿ, ವಿಶ್ವಾಸ ಅಂದು ಹೇಗಿತ್ತೋ ಇಂದಿಗೂ ಇದೇ ಮುಂದೆಯೂ ಹಾಗೇ ಇರುತ್ತದೆ.
ಅವರು ಸಂಡೂರು ತಾಲೂಕಿನಿಂದ ವರ್ಗವಾಗಿ ಹೋಗುವ ಮುನ್ನ ಅವರ ಬಗ್ಗೆ ನನ್ನ ಚಿಕ್ಕದಾದ ಒಂದು ಪರಿಚಯ ವರದಿ ನಿಮ್ಮಗಳ ಮುಂದಿಡುತ್ತಿದ್ದೇನೆ
“ಓಂ” ಎಂಬ ಶಬ್ದವನ್ನು ವಿಭಜಿಸಿದಾಗ ಅ,ಉ,ಮ ಅಕ್ಷರಗಳು ಸಿಗುತ್ತವೆ ಅ ಮತ್ತು ಉ ಸ್ವರಾಕ್ಷರಗಳಾದರೆ “ಮ” ವ್ಯಂಜನಾಕ್ಷರವಾಗಿದೆ. 34 ಸ್ವರಾಕ್ಷರಗಳಲ್ಲಿ “ಮ” ಒಂದೇ “ಓಂ” ಕಾರದಲ್ಲಿ ವಿಜೃಂಭಿಸಿ ಉಳಿದ 33 ಸ್ವರಾಕ್ಷರಗಳನ್ನು ನೇಪಥ್ಯಕ್ಕೆ ತಳ್ಳಿ “ಮ” ಮೆರೆದಿರುವುದನ್ನು ಗಮನಿಸಿದರೆ “ಮ” ದ ಮಹತ್ವ, ಗಟ್ಟಿತನ ಹಾಗೂ ಶ್ರೇಷ್ಠತೆ ನಮ್ಮನ್ನು ನಿಬ್ಬೆರಗಾಗಿಸುತ್ತದೆ.
ಜಾನಪದದಲ್ಲಿ ಕಂಡುಬರುವ ಮೈಲಮ್ಮ ದೇವತೆಯಲ್ಲಿಯೂ “ಮ” ಅಕ್ಷರವೇ ಆರಂಭದಲ್ಲಿದೆ. ಹಿಂದಿನ ದಿನಮಾನಗಳಲ್ಲಿ ಸಿಡುಬಿನಂತಹ ಮಾರಣಾಂತಿಕ ಖಾಯಿಲೆಗಳಿಂದ ದಿಕ್ಕೆಟ್ಟ ಜನತೆಗೆ ದಾರಿದೀಪವಾದವಳು “ಮೈಲಮ್ಮ”. ಈ ಸ್ತ್ರೀ ನಾಮವನ್ನು ಗಂಡು ಮಕ್ಕಳಿಗೂ ನಾಮಕರಣ ಮಾಡುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಅದರ ಉದ್ದೇಶ ಎಷ್ಟೇ ತಾಯ್ತನದ ಗುಣಗಳು ಗಂಡಿಗೂ ಹರಿದು ಬರಲಿ ಎನ್ನುವ ಸದಾಶಯದಿಂದ.
ಇಂತಹ ಈ ಎಲ್ಲಾ ಪರಂಪರೆ, ಮೌಲ್ಯಗಳ ಸಂಕಲನಗಳೊಂದಿಗೆ ಮುಂದುವರೆದ ಕಥನ ಕ್ರಮವೇ ಕನ್ನಡ ನೆಲದಲ್ಲಿಯೇ ವಿಶಿಷ್ಟ ಆಧ್ಯಾತ್ಮಿಕ, ಸಾಂಸ್ಕೃತಿಕ ಮೌಲ್ಯಗಳಿಗಾಗಿ ಹೆಜ್ಜೆ ಮೂಡಿಸಿರುವ ಸಂಡೂರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬಂದಂತಹ ಭರವಸೆಯ ಸೃಷ್ಟಿಶೀಲತೆಯ “ಮ” ಕಾರ ಪ್ರಿಯ ಮೈಲೇಶ್ ಬೇವೂರು, ಶಿಕ್ಷಣ ಇಲಾಖೆಯ ಬಹುದೊಡ್ಡ ಜವಾಬ್ದಾರಿ ಹೊತ್ತ ಸಂಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ
ಈ ಹಿಂದೆ ಕಿರಿಯ ವಯೋಮಾನಕ್ಕೆ ಹಿರಿದಾದ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ತೀವ್ರ ಸಂಕೀರ್ಣವಾದ, ಬಹು ಸಂಸ್ಕೃತಿಯ ಮತ್ತು ಭಿನ್ನ ಅಭಿರುಚಿಯ ಸಂಗಮವಾದ ಕೂಡ್ಲಿಗಿ ತಾಲೂಕಿನಲ್ಲಿ ಅಕ್ಷರ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪುನರ್ ಸ್ಥಾಪಿಸಿ ಅದನ್ನು ಚಿರಸ್ಥಾಯಿಯಾಗಿಸುವ ಮೂಲಕ ವ್ಯಕ್ತಿ ನೆಲೆಯಿಂದ ವಿಶ್ವಾಸತ್ಮಕನೋಟದವರೆಗೆ ಕೊಂಡೊಯ್ದು ಸಮಾಜದ ಮುಖ್ಯವಾಹಿನಿಗೆ ತರುವ ಅಕ್ಷರ ಕಾಯಕದಲ್ಲಿ ತನ್ಮಯರಾಗಿ ಭಾಗಶಃ ಸಕಾರಗೊಂಡಿದ್ದಾರೆ
ಮೈಲೇಶ್ ಬೇವೂರ್ ಹಿನ್ನೆಲೆ:-
ನಮ್ಮ ನಿಮ್ಮ ನಡುವಿನ ಹಲವು ಪ್ರತಿಭೆಗಳಲ್ಲಿ ಒಬ್ಬರಾಗಿರುವ ಮೈಲೇಶರು ಶ್ರಮಸಂಸ್ಕೃತಿಯ ಪರಂಪರೆಯಿಂದ ಬಂದು ಬಿ.ಇಡಿ. ಹಾಗೂ ಕೆ.ಇ.ಎಸ್. ಪೂರೈಸಿ “ಶಿಕ್ಷಣ” ವೊಂದನ್ನೇ ತಾರ್ಕಿಕವಾಗಿ, ಧನಾತ್ಮಕ ನೆಲೆಗಳೊಂದಿಗೆ ಅನುಸಂಧಾನಗೊಳಿಸಿ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು.
ಪ್ರಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಹರಪನಹಳ್ಳಿ ತಾಲೂಕಿನ ಕಡಬಗೆರೆಯ ನೂತನ ಪ್ರೌಢ ಶಾಲೆಗೆ ನೇಮಕಗೊಂಡವರು. ಶಾಲೆಗೆ ನೇಮಕಗೊಂಡವರು. ವಿಶೇಷವೆಂದರೆ ಕಡಬಗೆರೆಯ ನೂತನ ಪ್ರೌಢಶಾಲೆಯು ಶೈಶವಾಸ್ಥೆಯಲ್ಲಿದ್ದಾಗಲೇ ಇವರು ನೇಮಕಗೊಂಡಿದ್ದರು. ಕಡಬಗೆರೆಯ 4-5 ಕಿ.ಮೀ.ಇಕ್ಕೆಲಗಳಲ್ಲಿ ಎರಡು ಪ್ರೌಢಶಾಲೆಗಳು ಆಲದ ಮರದಂತೆ ಬೇರುಬಿಟ್ಟಿವೆ. ಈ ಶೈಶವಸ್ಥೆಯ ಪ್ರೌಢಶಾಲೆಯನ್ನು ಪೋಷಿಸಿ, ಬೆಳೆಸಿ ಬಲಾಢ್ಯ ಶಾಲೆಗಳ ಜೊತೆ ಸಮರ್ಥವಾಗಿ ನಿಲ್ಲುವಂತೆ ಮಾಡುವುದು ಕಠಿಣ ಸವಾಲಾಗಿತ್ತು. ಅ ಸವಾಲನ್ನು ನಗುತ್ತಲೇ ಸ್ವೀಕರಿಸಿದ ಮೈಲೇಶರು ದಾಖಲಾತಿ, ಹಾಜರಾತಿಯನ್ನು ಸಮನ್ವಯಗೊಳಿಸಿ ಗುಣಾತ್ಮಕ ಶಿಕ್ಷಣವನ್ನು ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಹೊರಬೀಳುವಂತೆ ಮಾಡುವಲ್ಲಿ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಿ ಇಡೀ ಗ್ರಾಮದ ಜನತೆಗೆ, ವಿದ್ಯಾರ್ಥಿಗಳ ಶ್ಲಾಘನೆಗೆ ಬಾಜನರಾದದ್ದು, ಹಾಗೂ ಅಂದಿನಿಂದ ಇಂದಿಗೂ ಕಡಬಗೆರೆ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ವಿದ್ಯಾರ್ಥಿಗಳ ನೆನಪಿನ ತಿಜೋರಿಯಲ್ಲಿ ಭದ್ರವಾಗಿ ಜತನದಿಂದಿರಿಸಿ ಕೊಂಡಿದ್ದಾರೆ. ಹೀಗಾಗಿಯೇ ಇಂದಿಗೂ ಮುಂದೆಯೂ ಕಡಬಗೆರೆ ಪ್ರೌಢಶಾಲೆಯು ದೊಡ್ಡ ಆಲದ ಮರವೇ ಆಗಿದೆ.
ಇವರ ಕಾರ್ಯತತ್ಪರತೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಶಾಲಾ ಇಲಾಖೆಯು ಬಡ್ತಿ ನೀಡಿ ಕೃಷಿ ಕಾಯಕ ಹಾಗೂ ಸಾಹಿತ್ಯರಂಗದಲ್ಲಿ ಛಾಪು ಮೂಡಿಸಿರುವ ಬಳ್ಳಾರಿ ಜಿಲ್ಲೆಯ ಮುದ್ದೆಬಸಾಪುರ (ಎಂ.ಬಿ.) ಅಯ್ಯನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಮುಖ್ಯಶಿಕ್ಷಕರಾಗಿ ನಿಯೋಜಿತರಾದರು. ಇಲ್ಲಿಯೂ ಸಹ ತಮ್ಮ ಎಂದಿನ ಉತ್ಸುಕತೆ, ಲವಲವಿಕೆಯನ್ನು ದ್ವಿಗುಣವಾಗಿಸಿಕೊಂಡು ಮುಖ್ಯೋಪಾಧ್ಯಾಯತ್ವಕ್ಕೆ ಹೊಸ ವ್ಯಾಖ್ಯಾನವನ್ನು ಬರೆದು ಹೊಸ ಹೊಳಹು ಮೂಡಿಸಿದರು. ಎಂ.ಬಿ.ಅಯ್ಯನಹಳ್ಳಿಯ ಹಿರಿಯರನ್ನು,ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಿ ಪ್ರೌಢಶಾಲೆಗೊಂದು ಹಿರಿಮೆ-ಗರಿಮೆ ಕಟ್ಟಿಕೊಟ್ಟರು. ಹೀಗಿರುತ್ತಲೇ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಯಾಧಿಕಾರಿಯಾಗಿ ಬಡ್ತಿ ಪಡೆದು ಕೂಡ್ಲಿಗಿಗೆ ನಿಯುಕ್ತಿಗೊಂಡು ಇಲಾಖೆಯ ಮಹತ್ವದ ಅಶಯಗಳಾದ ಡಿ.ಪಿ.ಇ.ಪಿ.ಕಾರ್ಯಕ್ರಮ ಹಾಗೂ ನಲಿ-ಕಲಿ ಯೋಜನೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಿದ್ದರು. ಬಹುಮುಖ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಂಯೋಜಕರು, ಸಂಪನ್ಮೂಲವ್ಯಕ್ತಿಗಳು ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸಂಯೋಜಿಸಿಕೊಂಡು ತಾಲ್ಲೂಕಿನ ಶಿಕ್ಷಕರೆಲ್ಲರ ಮೇಲೆ ವಿಶ್ವಾಸವಿರಿಸಿ “ಮಗು-ಶಿಕ್ಷಕ-ಪೋಷಕ” ಎನ್ನುವ ತತ್ವದಡಿ ಎಲ್ಲರನ್ನು ಮೇಳೈಸಿ ಇಲಾಖೆಯಲ್ಲಿ ತಂಪೆರೆಯುವ ಪರಿವರ್ತನೆಯ ಹೊಸಗಾಳಿ ಬೀಸಿದ್ದರು
ಮೈಲೇಶ್ ಬಾಹ್ಯವ್ಯಕ್ತಿತ್ವದ ಪರಿಚಯ:-
ಇಲ್ಲಿಯವರೆಗೂ ಅವರ ಬಾಹ್ಯವ್ಯಕ್ತಿತ್ವದ ಅನಾವರಣವಾದರೆ ಅಂತರಂಗದೊಳಗಿನ ಮೃದುತ್ವವನ್ನು ಇಣುಕುವ ಮತ್ತು ತಡಕಾಡುವ ಕೆಲಸ ಮಾಡಬೇಕಾಗಿದೆ. ಇವರು ಮೂಲತಃ ವಿಶ್ವಕವಿ ರವೀಂದ್ರನಾಥ ಠಾಕೂರರ ಪರಮ ಅಭಿಮಾನಿ ಹಾಗೂ ಅನುಯಾಯಿ. ರವೀಂದ್ರರ ಗೀತಾಂಜಲಿ, ಪತಾಂಜಲಿ, ಕೃತಿಗಳನ್ನು ತಪಸ್ಸಿನಂತೆ ಓಡಿಕೊಂಡಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯದ ಸಾಕ್ರೆಟಿಸ್, ಬರ್ನಾಡ್ ಷಾ, ಹಾಗೂ ಮ್ಯಾಕ್ಸ್ ಮುಲ್ಲರ್, ಮುಂತಾದ ದಾರ್ಶನಿಕರ ಕೃತಿಗಳನ್ನು ವೈಚಾರಿಕವಾಗಿ ಓದಿಕೊಂಡಿದ್ದಾರೆ.
ಪ್ರಾಯಶಃ ನಿರಂತರ ಓದು, ಧ್ಯಾನ ಹಾಗೂ ಸಾರ್ವಜನಿಕ ಒಡನಾಟ ಇವರನ್ನು ಸಮಚಿತ್ತ ಹಾಗೂ ನಿರ್ವಿಘ್ನ ಮನಸ್ಥಿತಿಗೆ ತಂದು ನಿಲ್ಲಿಸಿರಬೇಕು.ಉನ್ನತಾಧಿಕಾರದಲ್ಲಿದ್ದರೂ ಅಹಮಿಕೆಯನ್ನು ತೃಣವಸ್ಟಾದರೂ ಇಟ್ಟುಕೊಳ್ಳದೇ ಸಮಾಧಾನಿಯಾಗಿ ಅಲಿಸುವ, ಓದಿದುದನ್ನು ಹಾಗೂ ಹೇಳಬೇಕಾದುದನ್ನು ಸಮರ್ಥವಾಗಿ ಮಂಡಿಸುವ ಇವರು ಕನಸುಗಾರನೆಂಬುದು ಎಷ್ಟು ನಿಜವೋ ಅಷ್ಟೇ ಸೊಗಸಾದ ಮಾತುಗಾರ. ಅನ್ಯರ ಪ್ರತಿಭೆ, ಕೌಶಲ್ಯ, ಶ್ರಮ ಹಾಗೂ ನೈಪುಣ್ಯವನ್ನು ಗುರುತಿಸಿ ಗೌರವಿಸುವ ಉದಾತ್ತಗುಣ ಇವರೊಳಗಡಗಿದೆ
ಇಲಾಖೆಯ ಅನೇಕ ಉನ್ನತಾಧಿಕಾರಿಗಳ ಒಡನಾಟದಲ್ಲಿ ಹಾಗೂ ಸಾಂಗತ್ಯದಲ್ಲಿ ಹದವಾಗಿ ಪರಿಪಕ್ವಗೊಂಡು ಮಾಗಿರುವ ಮೈಲೇಶರು 2013 ರಲ್ಲಿ ಕಲ್ಬುರ್ಗಿಯಲ್ಲಿ ಜರುಗಿದ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅತ್ಯುತ್ತಮ ಸಮಸ್ವಯಾಧಿಕಾರಿ (Best Co-Ordinator) ಆಗಿ ಆಯ್ಕೆಯಾಗುವ ಮುಖೇನ ಅವಾರ್ಡ್ ಪಡೆದು ಇವರ ಶುದ್ದಂತಾಕರಣಕ್ಕೆ , ನಿಸ್ಪೃಹತೆಗೆ,ನಿರ್ಮಲ ಮನಸ್ಸಿಗೆ ಹಾಗೂ ನಿಷ್ಕಳಂಕ ಗುಣಕ್ಕೆ ಜೊತೆ ಜೊತೆಗೆ Profession is paradise ಎಂಬ ಮಾತನ್ನು ಬಲವಾಗಿ ನಂಬಿರುವ ಹೃದಯಕ್ಕೆ ಹಾಗೂ ಮನಃಸಾಕ್ಷಿಗೆ ಸಂದಂತಹ ಬಹುದೊಡ್ಡ ಸಮ್ಮಾನವೇ ಆಗಿತ್ತು.
“ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬ ತವನಿಧಿ ದಾಸಿಮಯ್ಯನ ವಚನಕ್ಕೆ ಸಾಕ್ಷಿಭೂತವಾಗಿ ಮೈಲೇಶ್ ಹಾಗೂ ಪವಿತ್ರ ಇವರಿಬ್ಬರ ದಾಂಪತ್ಯದ ಬದುಕು ಚೇತೋಹಾರಿಯಾಗಿದೆ ನಾವಿಬ್ಬರು ನಮಗಿಬ್ಬರು ಎನ್ನುವ ಹಾಗೆ ಪ್ರಕೃತಿ, ಪ್ರಾರ್ಥನಾ ಎಂಬ ಎರಡು ಮುದ್ದಾದ ಮುತ್ತಿನಂಥಹ ಮಕ್ಕಳಿವೆ ಇವರ ಖಾಸಗಿ ಬದುಕು ಇನ್ನಷ್ಟು ಸುಂದರವಾಗಲಿ, ಖಾಸಗಿ ಬದುಕು ಸುಂದರವಾದಷ್ಟೂ ಇಲಾಖೆಯ ಶಿಕ್ಷಣ ಪ್ರೇಮಿಗಳ ನಿರೀಕ್ಷೆಗಳನ್ನು, ಅಕಾಡೆಮಿಕ್ ಕಾರ್ಯಗಳನ್ನು ಮೊಗೆದಷ್ಟು ಸಮೃದ್ಧಗೊಳಿಸುವ ಚೈತನ್ಯ ಶೀಲತೆ ಬರಲಿದೆ.
ಕಿರಿಯರಿಂದ ಹಿಡಿದು ಹಿರಿಯರವರೆಗೂ ತಾವುಗಳು ಉತ್ತಮ ಮಾರ್ಗದರ್ಶಕರಾಗಿ ಸದಾ ಸ್ಪೂರ್ತಿಯ ಸೆಲೆಯಾಗಿದ್ದೀರಿ. ವಿಷಯದ ಆಳವಾದ ಜ್ಞಾನವನ್ನು ಈಗಲೂ ನಿಮ್ಮಿಂದ ಕಲಿಯಬಹುದಾಗಿದೆ. ಜ್ಞಾನದ ಬಲದಿಂದ ಎಲ್ಲವನ್ನು ಗೆಲ್ಲಬಹುದು ಎಂಬುದನ್ನ ತೋರಿಸಿಕೊಟ್ಟ ಮಾರ್ಗದರ್ಶಕರು ನೀವಾಗಿದ್ದೀರಿ ಎಂಬುದನ್ನು ನಾನು ನಂಬಿದ್ದೇನೆ.
ಅತ್ಯಂತ ಹಿಂದುಳಿದ ಸಂಡೂರು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಲ್ಪ ಸಮಯದಲ್ಲಿ ಬದಲಾವಣೆಯನ್ನು ತಂದಿದ್ದೀರಿ ಮುಖ್ಯವಾಗಿ ತಾವುಗಳು ಶಾಲೆಗೆ ಭೇಟಿ ನೀಡಿದಾಗ ಆಫೀಸ್ ರೂಮಿಗೆ ಹೋಗದೆ ನೇರವಾಗಿ ತರಗತಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಕೇಳಿ ಉತ್ತರಗಳನ್ನು ಪಡೆದು ನಂತರ ಶಿಕ್ಷಕರಿಗೆ ಮಾರ್ಗದರ್ಶನ ನೀಡಿತಿದ್ದುದ್ದು,
ತಾವು ನಮ್ಮ ಉತ್ತಮ ಅಂಶಗಳನ್ನು ವೇದಿಕೆ ಕಾರ್ಯಕ್ರಮಗಳಲ್ಲಿ ಎಲ್ಲ ಶಿಕ್ಷಕರ ಸಮ್ಮುಖದಲ್ಲಿ ನೆನಪಿಸುವುದು ಎಲ್ಲರಿಗೂ ಮಾದರಿಯಾಗಿ ಸಂತೋಷವೆನಿಸುತ್ತದೆ.
ತಾವು ಸಂಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅತ್ಯಲ್ಪ ಸಮಯವಕಾಶದಲ್ಲೇ ತಮ್ಮ ತನವನ್ನು ಕಳೆದುಕೊಳ್ಳದೆ ಪ್ರಾಮಾಣಿಕವಾಗಿ
ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಸಂಡೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ನೌಕರರ ಕರ್ತವ್ಯ ನಿರ್ವಹಣೆಗೆ ಸಾಣೆ ಹಿಡಿದು ದಕ್ಷವಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಲು ಶ್ರಮಿಸಿ ಈಗ ವರ್ಗಾವಣೆ ಗೊಂಡಿರುವುದು ನಮ್ಮಲ್ಲೆರ ದುರಾದೃಷ್ಟ
“ವಜ್ರ ಎಲ್ಲಿದ್ದರೂ ವಜ್ರವೇ ” ಎಂಬ ಮಾತಿನಂತೆ ತಾವುಗಳು ಎಲ್ಲೇ ಇರಲಿ ಹೇಗೇ ಇರಲಿ ತಮ್ಮತನವನ್ನು ಬಿಟ್ಟುಕೊಡದೇ ಮುನ್ನುಗಿ ಯಶಸ್ಸು ನಿಮ್ಮದಾಗುತ್ತೆ ತಮ್ಮ ಮುಂದಿನ ವೃತ್ತಿ ಜೀವನದ ದಿನಗಳು ಇನ್ನೂ ಅತ್ಯಂತ ಉತ್ತುಂಗಕ್ಕೆ ಏರಲಿ ಎಂದು ಹಾರೈಸುವುದಷ್ಟೇ ನನ್ನಿಂದ ಸಾಧ್ಯ,ಮತ್ತೇನನ್ನು ಹೇಳಲಿ…
ಇಂತಿ ನಿಮ್ಮ ಪ್ರೀತಿಯ…
ಗೋಪಾಲ್
The post ಕನಸುಗಾರ ಸೊಗಸಾದ ಮಾತುಗಾರ ಮೈಲೇಶ್ ಬೇವೂರ್ appeared first on Hai Sandur kannada fortnightly news paper.
]]>The post ದ್ರಾವಿಡರ ಕಣ್ಣನ್ನ್ ಮತ್ತು ಡಾ.ಶ್ರೀನಿವಾಸ್ ಎನ್. ಟಿ.ಅವರ ಜೀವನ ಕಥನ.. appeared first on Hai Sandur kannada fortnightly news paper.
]]>ಕೂಡ್ಲಿಗಿ ತಾಲೂಕಿನ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಈ ಭಾಗದ ಶಾಸಕರಾಗಿ ಆಯ್ಕೆಯಾದ ನಂತರ ನಾಡಿನ ಅನೇಕ ಗಣ್ಯ ಮಾನ್ಯರು ಅವರನ್ನು ಸನ್ಮಾನಿಸಿ ಶುಭಾಶಯಗಳನ್ನು ನಿತ್ಯ ಸಲ್ಲಿಸುತ್ತಿದ್ದಾರೆ. ಡಾ. ಶ್ರೀನಿವಾಸ್ ಎನ್. ಟಿ. ಅವರ ಸ್ನೇಹಿತರು , ಒಡನಾಡಿಗಳು , ಹಿತೈಷಿಗಳು, ಗುರುಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಂಬಂಧಿಕರು ಹಾಗೂ ತನ್ನ ತಂದೆಯಾದ ಮಾಜಿ ಶಾಸಕರು ದಿವಂಗತ ಎನ್. ಟಿ. ಬೊಮ್ಮಣ್ಣನವರ ಅಭಿಮಾನಿಗಳು ಹೀಗೆ ನಿತ್ಯ ಒಂದಲ್ಲಾ ಒಂದು ರೂಪದಲ್ಲಿ ಶುಭಾಶಯಗಳನ್ನು ಕೋರಿ ತಮಗೂ ಒಳಿತಾಗಲಿ ಮುಂದುವರೆಯಿರಿ ಎಂದೂ ಆಶೀರ್ವಾದ ಮಾಡಿದರು.
ಇತ್ತೀಚೆಗೆ ಮಾನ್ಯಶಾಸಕರಾದ ಡಾ.ಶ್ರೀನಿವಾಸ್ ಎನ್. ಟಿ. ಅವರನ್ನು ಕನ್ಯಾಕುಮಾರಿ ಕಣ್ಣನ್ನ್ ಅವರು ಭೇಟಿ ಮಾಡಿ ಶುಭಾಶಯಗಳನ್ನು ಕೋರಿದರು. ಅಷ್ಟೇ ಅವರು ಒಬ್ಬರಿಗೆ ಒಬ್ಬರು ಪ್ರೀತಿಯಿಂದ ಅಪ್ಪಿಕೊಂಡು ಸಂಡೂರಿನ ಎಸ್ ಆರ್ ಎಸ್ ರೆಸಿಡೆನ್ಸಿಯಲ್ ಜೂನೀಯರ್ ಪಿಯು ಕಾಲೇಜು ನಲ್ಲಿ ಓದುವ ವೇಳೆ ಕಷ್ಟ ಸುಖ ಮತ್ತು ತುಂಟಾಟಗಳನ್ನು ಹಾಗೇ ಒಮ್ಮೆ ನೆನಪಿಸಿಕೊಂಡು ಖುಷಿ ಪಟ್ಟರು. ಪಿಯು ಕಾಲೇಜು ನಲ್ಲಿ ಓದುವ ಸಂದರ್ಭದಲ್ಲಿ ಕೆಲವು ಸವಿನೆನಪುಗಳಿವೆ.
ಕಣ್ಣನ್ನ್ ಕನ್ಯಾಕುಮಾರಿ ಮೂಲದವರು. ಕಣ್ಣನ್ನ್ ಅವರು ಶಿಕ್ಷಣ ಪಡೆಯಲು ತೊಂಬತ್ತರ ಕಾಲಘಟ್ಟದಲ್ಲಿ ಕೆಂದ್ರ ಸರಕಾರದಿಂದ ದೊರೆತ ರಾಷ್ಟ್ರೀಯ ಫೆಲೋಶಿಪ್ ಸಹಾಯದಿಂದ ತಮಿಳುನಾಡಿನಿಂದ ಕರ್ನಾಟಕದ ಸಂಡೂರಿಗೆ ಶಿಕ್ಷಣ ಪಡೆಯಲು ವಲಸೆ ಬಂದಿದ್ದಾರೆ. ಕಣ್ಣನ್ನ್ ಅವರು 1992-93 ರಲ್ಲಿ ಎರಡು ವರ್ಷಗಳ ಕಾಲ ಸಂಡೂರಿನ ಎಸ್ ಆರ್ ಎಸ್ ರೆಸಿಡೆನ್ಸಿಯಲ್ ಜೂನೀಯರ್ ಪಿಯು ಕಾಲೇಜು ನಲ್ಲಿ ಕಣ್ಣನ್ನ್ ಹಾಗೂ ಡಾ. ಶ್ರೀನಿವಾಸ್ ಎನ್. ಟಿ. ಅವರು ವಾಲ್ಮೀಕಿ ಭವನ ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಾರೆ. ಪಿಯು ವಿದ್ಯಾಭ್ಯಾಸ ವೇಳೆ ಸಹಪಾಠಿಗಳಾಗಿ ಒಟ್ಟಿಗೆ ಶಿಕ್ಷಣ ಪಡೆಯುವ ವೇಳೆ ಇವರ ಮಧ್ಯೆ ತೀವ್ರವಾಗಿ ಸ್ನೇಹದ ತಿರುವು ಪಡೆದುಕೊಂಡಿದೆ.
ಕಣ್ಣನ್ನ್ ಮತ್ತು ಶ್ರೀನಿವಾಸ್ ಅವರು ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು. ಇಬ್ಬರ ಮಧ್ಯೆಯೂ ಮಧುರ ಕ್ಷಣಗಳಿವೆ. ಇಬ್ಬರೂ ಪಿಯು ಸಹಪಾಠಿಗಳಾಗಿರುವುದರಿಂದ ಓದು, ಆಟ ಮತ್ತು ಪಾಠಗಳ ನಡುವೆ ಒಟ್ಟೊಟ್ಟಿಗೆ ನಡೆಯುತಿತ್ತು. ತಮ್ಮ ಬಿಡುವಿನ ಸಮಯವನ್ನು ಕ್ರೀಡೆ ಮತ್ತು ಪ್ರವಾಸಕ್ಕೆ ಮೀಸಲು ಇಟ್ಟಿದ್ದರು. ಇವರು ಹೆಚ್ಚು ಕ್ರಿಯಾಶೀಲರಾಗಿ ಚಟುವಟಿಕೆಗಳಿಂದ ಕೂಡಿರುತ್ತಿದ್ದರು. ವಾಲಿಬಾಲ್ ಇಬ್ಬರಿಗೂ ನೆಚ್ಚಿನ ಕ್ರೀಡೆಯಾಗಿತ್ತು. ಗುಣ ಮತ್ತು ಸ್ವಭಾವ ಭಿನ್ನವಾಗಿತ್ತು. ಒಬ್ಬರನ್ನೂ ಒಬ್ಬರು ಬಿಟ್ಟು ಇರದ ಸ್ನೇಹ ಇವರದಾಗಿತ್ತು. ತುಂಗಭದ್ರ ,ಹಂಪಿ, ಸಂಡೂರು ಪ್ರದೇಶದಲ್ಲಿ ರಮಣಿಯ ತಾಣಗಳನ್ನು ವೀಕ್ಷಿಸಿ ಸಂತಸಪಡುತ್ತಿದ್ದರು.
ಒಬ್ಬರಿಗೆ ಒಬ್ಬರೂ ಬಿಟ್ಟು ಇರದ ಸ್ನೇಹ ಅವರದಾಗಿತ್ತು. ಇಬ್ಬರ ಸ್ನೇಹದಲ್ಲಿ ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕಾಗಿ ಜಗಳ ನಡೆಯುತಿತ್ತು. ಕೆಲವೊಮ್ಮೆ ದೊಡ್ಡ ತಿರುವು ಪಡೆದುಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ತಾವೇ ತಮಗೆ ಸಮಾಧಾನ ಮಾಡಿಕೊಂಡು ಆಟ ಪಾಠದಲ್ಲಿ ಎಂದಿನಂತೆ ತೊಡಗಿಸಿಕೊಳ್ಳುತ್ತಿದ್ದರು. ಅವರ ನಡುವೆ ಚೇಷ್ಠೆ, ಹಾಸ್ಯ, ತಮಾಷೆ, ತುಂಟಾಟ ಇತ್ತು. ಬೆಳಗಿನ ಜಾವ ಸಿಟ್ಟು ಇದ್ದರೇ ಸಂಜೆ ಕಡೆ ಪ್ರೀತಿ ಮೂಡುತಿತ್ತು.
ಕಣ್ಣನ್ನ್ ಮತ್ತು ಶ್ರೀನಿವಾಸ್ ಎನ್ ಟಿ ಅವರಲ್ಲಿ ದ್ರಾವಿಡ ಮೂಲದ ಭಾಷೆಗಳ ನಂಟು ಇದೆ. ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳನ್ನು ರಜಾ ದಿನಗಳಲ್ಲಿ ಬಿಡುವು ಇಲ್ಲದಂತೆ ನೋಡುತ್ತಿದ್ದರು. ಇಬ್ಬರಿಗೂ ಸಿನಿಮಾ ನೋಡುವ ಗೀಳು ಇತ್ತು. ಸಿನಿಮಾದಲ್ಲಿ ಬರುವ ಕಥಾನಾಯಕರ ಸಾಹಸ , ಖಳನಾಯಕರ ದರ್ಪ ಮತ್ತು ದೌರ್ಜನ್ಯ, ಹಾಸ್ಯ ಕಲಾವಿದರ ಚೇಷ್ಠೆ ಇತ್ಯಾದಿಯಾಗಿ ಗಮನಿಸಲು ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದರು.
ಹಾಗೆಯೇ ಸಿನಿಮಾ ಪಾತ್ರಗಳ ಹಾವ – ಭಾವಗಳನ್ನು ಅನುಕರಣೆ ಮಾಡುತ್ತಿದ್ದರು. ಬೆಳಿಗ್ಗೆಯಿಂದ ಸಂಜೆ ವರೆಗೂ ಸಿನಿಮಾ ನೋಡುವ ಹುಚ್ಚು ಇತ್ತು. ಕಥೆಯ ಸಂಭಾಷಣೆಯ ಕೆಲವು ತುಣುಕುಗಳನ್ನು ಮೈಗೂಡಿಸಿಕೊಂಡು ಸ್ಮೃತಿ ಪಠಲದಲ್ಲಿ ತಂದುಕೊಂಡು ಮೆಲಕು ಹಾಕುತ್ತಿದ್ದರು. ಕನ್ನಡ , ತೆಲುಗು ಮತ್ತು ತಮಿಳು ಸಿನಿಮಾಗಳನ್ನು ಹೊಸಪೇಟೆ ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡುತ್ತಿರುವುದನ್ನು ಇಬ್ಬರೂ ಹಂಚಿಕೊಂಡರು.
ದ್ರಾವಿಡರು ಮೂಲತಃ ಕಪ್ಪು ಜನಾಂಗದವರು. ಅವೈದಿಕ ಸಂಸ್ಕೃತಿಯ ಹಿನ್ನೆಲೆ ಉಳ್ಳವರು. ಇಬ್ಬರೂ ಕಪ್ಪು ಕುಲದವರು ಎಂದೂ ಹೇಳಿಕೊಂಡರು. ತೆಲುಗಿನಲ್ಲಿ ನಲಕುಲಮು (ಕಪ್ಪು ಕುಲ ) ವಿಚಾರ ಬರುತ್ತದೆ. ಕೆಲ ಒಮ್ಮೊಮ್ಮೆ ನಮ್ಮ ನಡುವೆಯೂ ಏನೂ ನಡೆದಿಲ್ಲ ಅನ್ನುವ ರೀತಿಯಲ್ಲಿ ಎಲ್ಲವನ್ನೂ ಮರೆತು ಬೆರೆಯುತ್ತಿದ್ದರು. ಕಣ್ಣನ್ನ್ ಅವರು 1992-93 ರಲ್ಲಿ ಶ್ರೀನಿವಾಸ್ ಎನ್. ಟಿ. ಅವರ ಸಹೋದರಿಯರಾದ ಸುವರ್ಣ ಹಾಗೂ ಗಂಗಮ್ಮ ಅವರ ವಿವಾಹದಲ್ಲಿ ಪಾಲ್ಗೊಂಡ ಸವಿನೆನಪುಗಳಿವೆ.
ಶ್ರೀನಿವಾಸ್ ಎನ್. ಟಿ. ಅವರು ಕೆಲವು ವಿಚಾರದಲ್ಲಿ ಸರಿ- ತಪ್ಪುಗಳನ್ನು ಗುರುತಿಸಿ ತೀರ್ಮಾನ ತಕೊಳ್ಳುವುದರಲ್ಲಿ ನಾಯಕತ್ವ ವಹಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವುದರ ಬಗ್ಗೆ ಕಣ್ಣನ್ನ್ ಅವರು ಮೆಚ್ಚಿಕೊಂಡರು. ಶ್ರೀನಿವಾಸ್ ಎನ್. ಟಿ. ಅವರ ಸಹಾಯ ಮನೋಭಾವ ಹಾಗೂ ಗುಣ ಸ್ವಭಾವವನ್ನು ಮೆಚ್ಚಿದ ಕಣ್ಣನ್ನ್ ಅವರು ಸಂತಸ ವ್ಯಕ್ತಪಡಿಸಿ ಕೊಂಡಾಡಿದರು.
ಪಿಯು ನಂತರ ಇಬ್ಬರೂ ಉನ್ನತ ಶಿಕ್ಷಣ ಪಡೆದರು. ಶ್ರೀನಿವಾಸ್ ಎನ್. ಟಿ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಪದವಿ ಪಡೆದರು. ಕಣ್ಣನ್ನ್ ಅವರು ಇಂಜಿನಿಯರಿಂಗ್ ಪದವಿ ಪಡೆದರು. ಶ್ರೀನಿವಾಸ್ ಎನ್. ಟಿ. ಅವರು ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿನಲ್ಲಿ ಜನಿಸಿದರು. ಆದರೆ ಉನ್ನತ ಶಿಕ್ಷಣಕ್ಕಾಗಿ ಮೈಸೂರು – ದೆಹಲಿ ಪ್ರದೇಶಗಳ ಕಡೆ ತೆರಳಿ ವೈದ್ಯಕೀಯ ಕ್ಷೇತ್ರದಲ್ಲಿ ಪದವಿಗಳನ್ನು ಗಳಿಸಿ ತುಮಕೂರು ನಗರದಲ್ಲಿ ನೆಲೆ ನಿಂತು ಅಕ್ಷರ ಫೌಂಡೇಶನ್ ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾದರು. ಡಾ. ಶ್ರೀನಿವಾಸ್ ಎನ್. ಟಿ. ಅವರು ತಮ್ಮ ಜೀವನದ ಹದಿನೈದು ವರ್ಷಗಳ ವೈದ್ಯಕೀಯ ಲೋಕದ ಬದುಕಿನ ಪಯಣದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಬಡ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಿಕೊಟ್ಟು ಜನತೆಯಿಂದ ಬಡವರ ಕಣ್ಣಪ್ಪ ಎಂದೂ ಹೆಸರು ಪಡೆದುಕೊಂಡರು.
ಕಣ್ಣನ್ನ್ ಅವರು ಊಟಿ ನಲ್ಲಿ ಎಲೆಕ್ಟ್ರಾನಿಕ್ ಡಿಪ್ಲೊಮಾ ಇಂಜಿನಿಯರ್ ಪದವಿ ಮುಗಿಸಿ ಚೆನ್ನೈ ಮೂಲದ ಬಿಜಿಲಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಿಜಿಲಿ ಮೀಟರ್ ಕಾರ್ಖಾನೆಯಲ್ಲಿ ಮೊದಲು ಕೆಲಸ ಮಾಡಿದ ಅನುಭವ ಕಣ್ಣನ್ನ್ ಅವರಿಗೆ ಇದೆ. ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭ ಇದೆ. ವಿಂಟ್ ಪಾರ್ಮ್ ನಲ್ಲಿ ಕೆಲಸ ಮಾಡಿದರು. ಆ ಮೂಲಕ
ಹದಿನೇಳು ವರ್ಷ ಕಾಲ ಕೆಲಸ ಮಾಡಿದ ಅನುಭವ ಇದೆ. ಉದ್ಯೋಗ ಮತ್ತು ದುಡಿಮೆ ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿಬಿಎ, ಎಂಬಿಎ ಕೋಸ್೯ ಶಿಕ್ಷಣವನ್ನು ಮದ್ರಾಸ್ ವಿಶ್ವವಿದ್ಯಾಲಯ ದೂರಶಿಕ್ಷಣ ಕೇಂದ್ರ ಮೂಲಕ ಪಡೆದುಕೊಂಡರು. ಕೆಲವು ವರ್ಷಗಳ ಕಾಲ ವಿಂಡ್ ಮಿಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಆನಂತರ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದರು.
ಆಂಧ್ರಪ್ರದೇಶ , ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ಕಡೆ ತೆರಳಿದ ಕಣ್ಣನ್ನ್ ಅವರು ಮೀಟರ್ ಸರ್ವೀಸ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಕಣ್ಣನ್ನ್ ಅವರು ಕರ್ನಾಟಕದಲ್ಲಿ ನೆಲೆನಿಂತಿದ್ದಾರೆ. 2011ರಲ್ಲಿ ತುಮಕೂರು ಅಕ್ಷರ ಫೌಂಡೇಶನ್ ಗೆ ಕಣ್ಣನ್ನ್ ಅವರು ಭೇಟಿ ನೀಡಿದಾಗ ಡಾ.ಶ್ರೀನಿವಾಸ್ ಎನ್. ಟಿ. ಅವರು ಕಣ್ಣನ್ನ್ ಅವರ ಕಣ್ಣನ್ನು ತಪಾಸಣೆ ಮಾಡಿ ಕಣ್ಣಡಕ ಕೊಟ್ಟಿರುವುದನ್ನು ಖುಷಿಯಿಂದ ಹಂಚಿಕೊಂಡರು.
ಕಣ್ಣನ್ನ್ ಅವರು ಚಿತ್ರದುರ್ಗದಲ್ಲಿ ನೆಲೆ ನಿಂತು ಕೆಲಸ ಮಾಡುವ ವೇಳೆ ತಮ್ಮಣ್ಣ ಎನ್ ಟಿ ಅವರ ಸಹಾಯದಿಂದ ಒಂದು ಬಾಡಿಗೆ ಮನೆ ಇಡಿದು ತಮ್ಮ ಕೆಲಸ ಕಾರ್ಯನಿಮಿತ್ತವಾಗಿ ಆಫೀಸ್ ಗೆ ಬಳಸಿಕೊಂಡ ಸಹಾಯವನ್ನು ನೆನಪಿಸಿಕೊಂಡರು.
ಜಗಳೂರು ಭಾಗದಲ್ಲಿ ಕಣ್ಣನ್ನ್ ಅವರು ವಿಂಡ್ ಮಿಲ್ ಸರ್ವೀಸ್ ಇಂಜಿನಿಯರ್ ಆಗಿ ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ವಿಂಡ್ ಮಿಲ್ ಕ್ವಾಲಿಟಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಣ್ಣನ್ನ್ ಅವರು ಪ್ರೀತಿಯಿಂದ ನೆನಪುಮಾಡಿಕೊಂಡು ಕರ್ನಾಟಕದ ಜನತೆಯ ಪ್ರೀತಿ ಮತ್ತು ಅಭಿಮಾನ ಬಗ್ಗೆ ಹೆಮ್ಮೆ ಪಟ್ಟರು.
ನಾನು ನನ್ನ ಜೀವನದಲ್ಲಿ ಇಂಜಿನಿಯರ್ ಆಗಿ ಎತ್ತರಕ್ಕೆ ಬೆಳೆದೆ. ಆದರೆ ನನ್ನ ಬಾಲ್ಯದ ಗೆಳೆಯ ಡಾ.ಶ್ರೀನಿವಾಸ್ ಎನ್. ಟಿ. ಅವರು ಮೂಲತಃ ವೈದ್ಯರಾಗಿ ಕರ್ನಾಟಕದ ಸರಕಾರದಲ್ಲಿ ಶಾಸಕರಾಗಿ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು. ನಾನು ಎಲ್ಲೇ ಇದ್ದರೂ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರ ಕೆಲಸ ಕಾರ್ಯಗಳಿಗೆ ನನ್ನದೇ ಆದ ನೆಲೆಯಲ್ಲಿ ಸಹಕಾರ ಮಾಡುವ ಮೂಲಕ ಅವರ ಪರವಾಗಿ ನಿಲ್ಲುವೇ ಎಂಬ ಮಾತನ್ನು ಹಂಚಿಕೊಂಡರು.
The post ದ್ರಾವಿಡರ ಕಣ್ಣನ್ನ್ ಮತ್ತು ಡಾ.ಶ್ರೀನಿವಾಸ್ ಎನ್. ಟಿ.ಅವರ ಜೀವನ ಕಥನ.. appeared first on Hai Sandur kannada fortnightly news paper.
]]>The post ಅಪ್ರತಿಮ ಸಂಘಟನಾ ಚತುರೆ, ಬರಹಗಾರ್ತಿ, ಡಾ.ವಸುಂಧರಾ ಭೂಪತಿ appeared first on Hai Sandur kannada fortnightly news paper.
]]>ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನಲ್ಲಿ ಎರಡು ವರ್ಷ ವೈದ್ಯ ವೃತ್ತಿ ನಡೆಸಿದ ನಂತರ ವಸುಂಧರಾ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬೆಂಗಳೂರಿನಲ್ಲಿ ತಮ್ಮ ವೃತ್ತಿ ಮತ್ತು ಕೌಟುಂಬಿಕ ಜೀವನ ಸಾಗಿಸಿದ್ದಾರೆ. ಪತಿ ದಿವಂಗತ ಯು. ಭೂಪತಿ ಅವರು ಕಾನೂನು ತಜ್ಞರಾಗಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿನ ಸೇವೆಗಾಗಿ ಹೆಸರಾದವರು.
ವಸುಂಧರಾ ಭೂಪತಿ ಅವರು ಸದಾ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಅವರ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ 1000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆರೋಗ್ಯ, ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳ ರೂಪಗಳಲ್ಲಿ ಬೆಳಕು ಕಾಣುತ್ತಿವೆ.
ವಸುಂಧರಾ ಭೂಪತಿ ಅವರ ಅರವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿದ್ದು, ಹೀಗೆ ವೈವಿಧ್ಯಪೂರ್ಣವಾಗಿ, ಅನೇಕ ಮರುಮದ್ರಣಗಳನ್ನು ಕಂಡು ಜನಪ್ರಿಯವಾಗಿವೆ.
ವೈದ್ಯಕೀಯ ಸಾಹಿತ್ಯ: ಹಣ್ಣುಗಳಲ್ಲಿ ಔಷಧಿಯ ಗುಣಗಳು, ಏಡ್ಸ್! ಪ್ರಳಯ ಎದುರಿಸಲು ಸಿದ್ಧರಾಗಿ, ಆರೋಗ್ಯ – ಆಯುರ್ವೇದ, ಔಷಧೀಯ ಗುಣವುಳ್ಳ ಸೊಪ್ಪು ತರಕಾರಿಗಳು, ಪುಷ್ಪೌಷಧಿ, ಸ್ತ್ರೀ ಆರೋಗ್ಯ ರಕ್ಷಣೆಯ ಸೂತ್ರಗಳು, ಆರೋಗ್ಯ – ಆನಂದ, ವೈದ್ಯಲೋಚನ, ಸೌಂದರ್ಯವರ್ಧಕಗಳು ಏಕೆ ಬೇಕು?, ಸ್ತ್ರೀ ಆರೋಗ್ಯ-ಆರೈಕೆ ಮನೆಯಂಗಳದಲ್ಲಿ ಔಷಧಿವನ, ಆಹಾರ ಮತ್ತು ಆರೋಗ್ಯ, ಆರೋಗ್ಯ- ಆರೈಕೆ ನಿಮ್ಮ ಕೈಯಲ್ಲಿ, ಆರೋಗ್ಯ ದೀಪಿಕಾ, ಹೂವು ಮತ್ತು ಆರೋಗ್ಯ, ಸಾಮಾನ್ಯ ಕಾಯಿಲೆಗಳಿಗೆ ಮನೆ ಮದ್ದು, ಗಣೇಶನ ಪೂಜೆಗೆ 21 ಪತ್ರೆಗಳು ಹಾಗೂ ಆಯುರ್ವೇದ, ಆರೋಗ್ಯವಂತರಾಗಿ
ಹರೆಯದ ಸಮಸ್ಯೆಗಳು ಮತ್ತು ಆಪ್ತಸಲಹೆ,
ಹಿರಿಯ ನಾಗರಿಕರ ಆರೋಗ್ಯಕ್ಕೆ ಆಯುರ್ವೇದ, ಮಹಿಳೆ ಜೀವನ ವಿಜ್ಞಾನ ಲೈಂಗಿಕತೆ ಮತ್ತು ಆಯುರ್ವೇದ, ಆರೋಗ್ಯ ಸಂಗಾತಿ (ಎರಡು ಭಾಗಗಳಲ್ಲಿ), ಆರೋಗ್ಯ ವೈವಿಧ್ಯ, ಸಂಬಾರ ಪದಾರ್ಥಗಳು ಹಾಗೂ ಆರೋಗ್ಯ, ಮೊಗ್ಗು ಅರಳುವಾಗ, ಆರೋಗ್ಯ ಸಂಗಾತಿ, ಬದುಕು ಬದಲಿಸಿದ ವಿಜ್ಞಾನ, ಆಹಾರ ಸಿರಿ, ಅನುದಿನದ ಆರೋಗ್ಯ ಮುಂತಾದವು.
ವಿಚಾರ ಸಾಹಿತ್ಯ: ಮಹಿಳೆ ಮತ್ತು ವೈಜ್ಞಾನಿಕ ಅರಿವು, ಮಹಿಳೆ ಮತ್ತು ಮೌಢ್ಯ
ಕಥಾ ಸಂಕಲನ:ಪ್ರೀತಿ, ರೆಕ್ಕೆ ಮೂಡಿದರೆ? (ವಿಜ್ಞಾನ ಕಥಾ ಸಂಕಲನ)
ಕವನ ಸಂಕಲನ: ಸಂಕ್ರಾಂತಿ, ಜೀವಸರಪಳಿಯ ಗೂಡು (ಪರಿಸರ ಗೀತೆಗಳ ಸಂಕಲನ)
ಅಂಕಣ: ಭೂಮಿಗಾಥೆ, ಜೀವಸಿರಿ
ನಾಟಕ: ವಿಜ್ಞಾನಮಯಿ (ವಿಜ್ಞಾನ ನಾಟಕಗಳು), ನವವಿಧ ನಾಟಕಗಳು, ಬದುಕು ಬದಲಿಸಿದ ವಿಜ್ಞಾನ
ಜೀವನ ಚರಿತ್ರೆ: ಸಿ.ವಿ. ರಾಮನ್, ಶ್ರೀನಿವಾಸ ರಾಮಾನುಜಮ್, ಕೊಡಗಿನ ಗೌರಮ್ಮ, ಪಂಡಿತ್ ತಾರನಾಥ್, ಯಲ್ಲಪಗಡ ಸುಬ್ಬರಾವ್, ಚರಕ, ಸುಶ್ರುತ.
ಇಂಗ್ಲಿಷ್: Medicinal Plants in Your Yard
ಹಿಂದಿ: ಅಪ್ನಾ ಸ್ವಾಸ್ಥ್ಯ ಅಪ್ನೆ ಹಾತ್
ಸಂಪಾದಿತ ಕೃತಿಗಳು: ಆರೋಗ್ಯ ಚಿಂತನೆ ಮಾಲಿಕೆಗಳು, ವಿವಿಧ ಲೇಖಕಿಯರ ಕೃತಿಗಳು
ವಸುಂಧರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು. ಅವರು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಆಕಾಶವಾಣಿಯಲ್ಲಿ ಮತ್ತು ದೂರದರ್ಶನದಲ್ಲಿ ಆರೋಗ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ನೂರು ಫೋನ್-ಇನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ಆಕಾಶವಾಣಿ ವೈದ್ಯಲೇಖಕರ ಜೀವನ ಸಾಧನೆ ಕುರಿತು ರೇಡಿಯೋ ಸಂದರ್ಶನ ನಡೆಸಿದ್ದಾರೆ. ಎಫ್ ಎಮ್ ರೇಡಿಯೋದಲ್ಲಿ ಸಂಜೀವಿನಿ, ಹೆಲ್ತ್ ಟಿಪ್, ಲಂಚ್ ಬಾಕ್ಸ್ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ದೂರದರ್ಶನ ಹಾಗೂ ಈ ಟಿವಿ, ಉದಯ, ಚಂದನ, ಕಸ್ತೂರಿ ಟಿವಿಗಳಲ್ಲಿ ಓ ಸಖಿ, ಹಲೋ ಡಾಕ್ಟರ್, ಫೋನ್- ಇನ್ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮಂದಾಕಿನಿ ಮತ್ತು ಕಾಡ ಹಾದಿಯ ಹೂವುಗಳು ಚಲನಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಕರ್ನಾಟಕದಾದ್ಯಂತ ಹಲವಾರು ಸಂಘ- ಸಂಸ್ಥೆಗಳ ಮೂಲಕ ಸಾರ್ವಜನಿಕ ಉಪನ್ಯಾಸಗಳು ಹಾಗೂ ಚರ್ಚೆಗಳ ಮುಖಾಂತರ ಜನರಿಗೆ ಆರೋಗ್ಯ ಮಾಹಿತಿ ಸಂಹವನವನ್ನು ನಡೆಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಗುಲ್ಬರ್ಗಾ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ರೋಗಿಗಳಿಗೆ ಆರೋಗ್ಯ ತಿಳುವಳಿಕೆ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಎಂಬ ಕಾರ್ಯಕ್ರಮ ನಡೆಸಿದ್ದಾರೆ. ಬದುಕಿನ ಎಲ್ಲ ರೀತಿಯ ಜನರಿಗೆ ವಿವಿಧ ರೀತಿಯ ವಿಜ್ಞಾನ ತಿಳುವಳಿಕೆಯ ನೂರಾರು ಕಾರ್ಯಕ್ರಮ ಮಾಡಿದ್ದಾರೆ.
ವಸುಂಧರಾ ಭೂಪತಿ ಅವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದವರು. ಅವರು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದವರು. ಇದಲ್ಲದೆ ಕರ್ನಾಟಕ ಜ್ಞಾನ ಆಯೋಗದ ಅಧ್ಯಯನ ತಂಡದ ಸದಸ್ಯೆಯಾಗಿ, ರಚನಾ-ಪರಿಸರವಾದಿ ಸಂಸ್ಥೆಯ ಆರೋಗ್ಯ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ, ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ,
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥ ಪ್ರಕಟಣಾ ಸಮಿತಿ ಸದಸ್ಯೆಯಾಗಿ, ನವದೆಹಲಿ ಐಡಿಪಿಡಿ ರಾಷ್ಟ್ರ ಸಮಿತಿ ಸದಸ್ಯೆಯಾಗಿ, ಕರ್ನಾಟಕ ರಾಜ್ಯ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಸದಸ್ಯೆಯಾಗಿ, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟ್ ಉಪಾಧ್ಯಕ್ಷೆಯಾಗಿ, ಕನ್ನಡ ಸಂಘರ್ಷ ಸಮಿತಿ, ಮಹಿಳಾ ವಿಭಾಗದ ಸಂಚಾಲಕಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದಿದ್ದಾರೆ.
ವಸುಂಧರಾ ಭೂಪತಿ ಅವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ನಡೆಸಿದ ಕಾರ್ಯಕ್ರಮಗಳೂ ಅಪಾರ. ಲೇಖಕಿಯರು ರಚಿಸಿದ ಪರಿಸರಗೀತೆಗಳ ಆಡಿಯೋ ಸಿಡಿ ಜೀವಸರಪಳಿಯ ಗೂಡು ಪ್ರಕಟಣೆ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ವ್ಯವಸ್ಥೆ, ಅನುಪಮಾ ಪ್ರಶಸ್ತಿ ಪುರಸ್ಕೃತ ಲೇಖಕಿಯರ ಸಾಕ್ಷ್ಯಚಿತ್ರಗಳ ನಿರ್ಮಾಣ, “ಅವಳು ಅವಳೇ” ದ್ವನಿಸಾಂದ್ರಿಕೆ ನಿರ್ಮಾಣ, ಕಸಾಪ ಸಹಯೋಗದೊಂದಿಗೆ ಸಾಧಕರೊಡನೆ ಸಂವಾದ, ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯಮಟ್ಟದ ಪ್ರಥಮ ಮಹಿಳಾ ಪ್ರಕಾಶನ ಕಾರ್ಯಗಾರ ಆಯೋಜನೆ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.
ವಸುಂಧರಾ ಭೂಪತಿ ಅವರಿಗೆ ಎಚ್ಐವಿ/ಏಡ್ಸ್ ಕುರಿತಾದ ಲೇಖನಕ್ಕೆ ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಲೇಖಕಿ ಪುರಸ್ಕಾರ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಶ್ರೇಷ್ಠ ವಿಜ್ಞಾನ ಸಂಹವನಕಾರ ಪ್ರಶಸ್ತಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಪ್ರಶಸ್ತಿ, ಡಾ|| ಪಿ.ಎಸ್ ಶಂಕರ್ ವೈದ್ಯ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಕೃಪೆ: ಕನ್ನಡ ಸಂಪದ
The post ಅಪ್ರತಿಮ ಸಂಘಟನಾ ಚತುರೆ, ಬರಹಗಾರ್ತಿ, ಡಾ.ವಸುಂಧರಾ ಭೂಪತಿ appeared first on Hai Sandur kannada fortnightly news paper.
]]>The post ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ: appeared first on Hai Sandur kannada fortnightly news paper.
]]>ಕಗ್ಗತ್ತಲ ರಾತ್ರಿಯಲ್ಲಿ, ಗೋರಿಗಳ ಮಧ್ಯದಲ್ಲಿ, ಕಾನನದ ನಡುವಿನಲಿ, ಹೆಣಗಳ ಅಸ್ಥಿ ಪಂಜರದ ಕಲ್ಪನೆಯನ್ನು ನೆನಪಿಸಿಕೊಂಡರೆ ಸಾಕು ಮೈಮನ ಒಮ್ಮೆ ರೋಮಾಂಚನಗೊಳ್ಳುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಸ್ಮಶಾನಕ್ಕೆ ಮಧ್ಯ ರಾತ್ರಿ ಹೋಗುತ್ತಾರೆಂದರೆ ನಾವೆಲ್ಲರೂ ನೀನಗೇನೂ ದೆವ್ವ, ಭೂತ ಮೆಟ್ಕೊಂಡಿದ್ಯಾ? ಎಂದು ಹೇಳುತ್ತೇವೆ. ಆದರೆ ಇಲ್ಲಿ ನಾವು ವಿಶೇಷ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
ಈಕೆ ನೀಲಮ್ಮ, ವಯಸ್ಸು 63. ವಾಸ ಮೈಸೂರಿನ ಲಿಂಗಾಂಬುದಿ ಪಾಳ್ಯದ ಸ್ಮಶಾನದಲ್ಲಿ ಅಂದಾಜು 3000 ಅಸ್ಥಿಪಂಜರದ ನಡುವೆ. ನೀಲಮ್ಮ ಇದುವರೆಗೂ ಸಾವಿರಾರು ದೇಹವನ್ನು ಮಣ್ಣು ಮಾಡಿದ್ದಾರೆ. ಗುಂಡಿ ತೋಡಿ, ಸತ್ತ ದೇಹಕ್ಕೆ ಮುಕ್ತಿ ನೀಡಿದ್ದಾರೆ.
ಸ್ವಾವಲಂಬಿಯಾಗಿ ಬದುಕಬೇಕೆಂಬುದು ನನ್ನ ಇಚ್ಛೆ:
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಎಂತಹದ್ದೋ ಕೆಲಸ ಮಾಡುವ ಸಂದರ್ಭಗಳು ಬದುಕಿನಲ್ಲಿ ಸಾಮಾನ್ಯ. ಆದರೆ ಎಂಥದ್ದೇ ಪರಿಸ್ಥಿತಿ ಬಂದರೂ ಅದನ್ನು ಧೈರ್ಯದಿಂದ ಮೆಟ್ಟಿನಿಂತ ಛಲಗಾತಿ ನೀಲಮ್ಮ. ಹಗಲು – ರಾತ್ರಿ ಎನ್ನದೆ ಬಡವ ಬಲ್ಲಿದನೆಂಬ ಭೇದವಿಲ್ಲದೆ ಸದಾ ಕಾಯಕದಲ್ಲಿ ನಿರತರಾಗಿರುವ ಈ ಮಹಿಳೆಯ ಛಲ ಎದೆಗಾರಿಕೆ ಅಂತರವನ್ನು ಅಚ್ಚರಿಗೊಳಿಸದೇ ಇರಲಾರದು. ‘ಎಲ್ಲರ ಬದುಕು ಇಲ್ಲಿಗೆ ಬಂದು ಮುಗಿದರೆ, ನನ್ನ ಬದುಕು ಇಲ್ಲಿ ನೆಲೆ ಕಟ್ಟಿಕೊಟ್ಟಿದೆ’ ಎಂದು ಹೇಳುವ ನೀಲಮ್ಮ, ಸತ್ತವರಿಗೆ ಗುಂಡಿ ತೋಡುವ ಹೂಳುವ ಕೆಲಸದಲ್ಲಿ ಕಳೆದ ಎರಡು ದಶಕಗಳಿಂದೀಚೆಗೆ ನಿರತರಾಗಿದ್ದಾರೆ.
ಕಳೆದ 21 ವರ್ಷದ ಕೆಳಗೆ ಉದ್ಯೋಗ ಆರಂಭಿಸಿದ ಈಕೆಗೆ ಈ ಕೆಲಸ ಜೀವನದ ದಾರಿ ತೋರಿಸಿಕೊಟ್ಟಿದೆ. ‘ಸ್ಮಶಾನದಲ್ಲಿಯೇ ಜೀವನ ಮಾಡಿ ಇಬ್ಬರು ಗಂಡು ಮಕ್ಕಳನ್ನು ನೆಲೆಗೆ ತಂದಿದ್ದೇನೆ. ಅವರನ್ನು ಮದುವೆ ಮಾಡಿದ್ದೇನೆ. ಮೊಮ್ಮಕ್ಕಳು, ಸೊಸೆ ನನ್ನ ಜೊತೆಯಲ್ಲೇ ಇದ್ದಾರೆ. ಮಕ್ಕಳು ಈಗ ಈ ಕೆಲಸ ಬೇಡ ಬಂದು ನಮ್ಮೊಟ್ಟಿಗೆ ಇರು ಎಂದು ಹೇಳುತ್ತಾರೆ. ಆದರೆ ನಾನು ದುಡಿಯುತ್ತಿದ್ದೇನೆ, ನನ್ನ ಕೈಲಾಗುವವರೆಗೂ ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ನನ್ನ ಇಚ್ಛೆ ಎಂದು ಹೇಳುತ್ತಾರೆ.
ಯಾವ ಭಯವೂ ನನ್ನನ್ನು ಕಾಡುತ್ತಿಲ್ಲ:
ನೀಲಮ್ಮ ಮೂಲತಃ ಎಚ್ ಡಿ ಕೋಟೆ ತಾಲೂಕಿನ ಸರಗೂರು ಹೋಬಳಿಯ ಕೊತ್ತೇಗಾಲದವರು. ಮದುವೆಯಾಗಿ ಮೈಸೂರಿಗೆ ಬಂದರು. ಮೈಸೂರಿನಲ್ಲಿ ಗಂಡ ಮೊದಲು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಯಾವುದು ಅವರ ಕೈ ಹತ್ತಲಿಲ್ಲ. ಕಡೆಗೆ ಯಾರೋ ಈ ಸ್ಮಶಾನದಲ್ಲಿ ಕೆಲಸ ಹಚ್ಚಿದರು. ಪತಿಯ ಜೊತೆಗೆ ಬಂದ ನೀಲಮ್ಮ ಯಜಮಾನರು ಗುಂಡಿ ತೆಗೆಯುವ ಕೆಲಸ ಮಾಡಲು ಸಹಾಯ ಮಾಡಿದರು. ಹಾಗೆಯೇ ನನಗೂ ಈ ಉದ್ಯೋಗ ಕರಗತವಾಯಿತು. ಅವರು ಹೋಗಿ ದಶಕಗಳೇ ಕಳೆದಿವೆ. ಆದರೆ ನಾನು ಈ ಕಾಯಕ ಮುಂದುವರಿಸಿದೆ. ಇಲ್ಲಿ ಒಬ್ಬಳೇ ಇರುತ್ತೇನೆ. ರಾತ್ರಿ ಇರುತ್ತೇನೆ. ಯಾವ ಭಯವೂ ನನ್ನನ್ನು ಕಾಡುತ್ತಿಲ್ಲ ಎನ್ನುತ್ತಾರೆ ಗಟ್ಟಿಗಿತ್ತಿ ನೀಲಮ್ಮ. ನೀಲಮ್ಮ ಓದಿರುವುದು ಕೇವಲ 5ನೇ ತರಗತಿ ಮಾತ್ರ. ಆದರೆ ಅವರ ಮಾತು ಯಾವ ತತ್ತ್ವಜ್ಞಾನಿಗೂ ಕಡಿಮೆ ಇಲ್ಲದಂತಹದ್ದು. ಆಳವಾದ ಜೀವನ ಸಾರ ಇವರಲ್ಲಿ ಹುದುಗಿ ಹೋಗಿದೆ. ಬಾಯಿ ಬಿಟ್ಟರೆ ಸಾಕು ಬಸವಣ್ಣನವರು ಬೋಧಿಸುತ್ತಿದ್ದ ಸರಳತೆ, ಸಮಾನತೆ, ಸಾರ್ಥಕತೆ, ಕಾಯಕ ಮುಂತಾದ ತತ್ತ್ವಗಳೇ ಇವರ ಬಾಯಿಂದ ನುಡಿ ಮುತ್ತುಗಳಂತೆ ಹೊರಬರುತ್ತದೆ.
ಕಾಲವೇ ಎಲ್ಲದಕ್ಕೂ ಉತ್ತರ ನೀಡಿದೆ:
ನಾನು ಈ ಸ್ಮಶಾನದಲ್ಲಿ ಬದುಕುತ್ತಿರುವಾಗ ಈ ಹಿಂದೆ ಅವಮಾನ ಮಾಡಿದರು. ಎಲ್ಲವನ್ನೂ ಸಹಿಸಿಕೊಂಡು ನಾನು ಶಾಂತಿ ನೆಮ್ಮದಿಯ ಬದುಕಬೇಕಾಗಿತ್ತು. ಅದು ಸಿಕ್ಕಿದ್ದು ಈ ಸ್ಮಶಾನದಲ್ಲಿಯೇ. ಮೊದಲು ಎಲ್ಲರಂತೆ ಒಡವೆ ಹಾಕಿಕೊಳ್ಳಬೇಕು, ನಾನು ರೇಷ್ಮೆ ಸೀರೆಯುಟ್ಟು ತಿರುಗಬೇಕು ಎಂದೆನಿಸುತ್ತಿತ್ತು. ಆದರೆ ಈಗ ಆ ಭಾವನೆಯೇ ಇಲ್ಲ. ಎಲ್ಲವೂ ನಷ್ಟವೇ ಎನಿಸುತ್ತದೆ. ಎಲ್ಲದಕ್ಕೂ ಏಕೆ ಆಸೆ ಪಡಬೇಕು ? ಹಣಕ್ಕಾಗಿ, ಚೂರು ಜಾಗಕ್ಕಾಗಿ, ಹೆಣ್ಣಿಗಾಗಿ ಏಕೆ ಬಡಿದಾಡಬೇಕು ? ಕೊಲೆ ಮಾಡಬೇಕು. ಒಂದಲ್ಲ ಒಂದು ದಿನ ಈ ಜಾಗಕ್ಕೆ ಬರಲೇಬೇಕು ಎನ್ನುತ್ತಾರೆ. ನಾನು ಇರುವುದು ನನ್ನ ಸ್ವಂತ ಮನೆಯಲ್ಲಿ. ನನ್ನನ್ನು ಇಲ್ಲಿಂದ ಖಾಲಿ ಮಾಡು ಎಂದು ಯಾರೂ ಹೇಳುವುದಿಲ್ಲ. ನನ್ನನ್ನು ನೋಡಲು ಈಗ ಸಂಬಂಧಿಕರು, ಬಂಧು ಬಳಗದವರು ಸ್ಮಶಾನಕ್ಕೆ ಬರುತ್ತಾರೆ. ಇಲ್ಲಿಗೆ ಬಂದವರಿಗೆ ನಾನು ಇದನ್ನೇ ಹೇಳುತ್ತೇನೆ. ಅವರೆಲ್ಲರೂ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ಈ ಹಿಂದೆ ಹುಚ್ಚಿ ಎಂದು ಹೀಯಾಳಿಸುತ್ತಿದ್ದರು ಆದರೆ ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಿದೆ.
ಜೆಎಸ್ಎಸ್ ಕಾಲೇಜಿನಲ್ಲಿ ದೇಹದಾನ:
ಮನುಷ್ಯ ಬದುಕಿದ್ದಾಗ ಕಾಡುವ ದೆವ್ವ, ಭೂತ ಈ ಸ್ಮಶಾನದಲ್ಲೆಲ್ಲೂ ನನಗೆ ಕಾಣಿಸಲೇ ಇಲ್ಲ. ಎಷ್ಟೋ ಬಾರಿ ಮಧ್ಯರಾತ್ರಿ ಹೆಣಕ್ಕೆ ಗುಂಡಿ ತೋಡಿದ್ದು ನೆನಪಿದೆ. ಯಾವುದಕ್ಕೂ ಹಿಂಜರಿಯುವುದಿಲ್ಲ. ಮಾನವ ಬದುಕಿದ್ದಾಗ ಹತ್ತಾರು ಕಾವಲುಗಾರರನ್ನು ಇಟ್ಟುಕೊಂಡಿರುತ್ತಾರೆ. ಆದರೆ ನನ್ನನ್ನು ಕಾಯಲು ನನ್ನ ಮನೆಯ ಮುಂದೆಯೇ ಸಾವಿರಾರು ಅಸ್ಥಿಪಂಜರಗಳು ಜೀವಂತವಾಗಿದೆ. ಶ್ರೀಮಂತೆ ಯಾರೆಂದು ನೀವೇ ಲೆಕ್ಕ ಹಾಕಿ. ನಾನು ಬದುಕಿರುವವರೆಗೂ ಈ ಕಾಯಕ ಮುಂದುವರೆಸಿಕೊಂಡು ಹೋಗಿಯೇ ತೀರುತ್ತೇನೆ. ಹೆಣ್ಣು ಎಂದು ಯಾರು ನನ್ನನ್ನು ಕೀಳಾಗಿ ನೋಡಿಲ್ಲ. ನನ್ನ ಬೆನ್ನ ಹಿಂದೆ ನೋಡಿದವರಿಗೂ ಸಹ ನಾನೇ ಗುಂಡಿ ತೋಡಿ ಮಣ್ಣು ಮಾಡಿದ್ದೇನೆ ಎಂದು ನಗುತ್ತಾರೆ ನೀಲಮ್ಮ. ಇನ್ನು ನೀಲಮ್ಮ ದೇಹವನ್ನು ಮಣ್ಣು ಮಾಡುವುದರೊಂದಿಗೆ ದೇಹದಾನ ಮಾಡುವಂತೆ ಪ್ರೇರೆಪಿಸುವವರಲ್ಲಿಯೂ ಮೊದಲಿಗರು. ಅಲ್ಲದೇ ತಮ್ಮ ಕುಟುಂಬದವರನ್ನು ಜೊತೆಗೂಡಿ ಮೈಸೂರಿನ ಜೆ ಎಸ್ಎಸ್ ಕಾಲೇಜಿನಲ್ಲಿ ದೇಹದಾನ ಮಾಡಿದ್ದಾರೆ.
ಅನೇಕ ಪತ್ರಿಕೆಗಳಲ್ಲಿ ಇವರ ಕಥೆ ಪ್ರಕಟ:
ನೀಲಮ್ಮ ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ ವೀರಬಾಹುವಿನ ಪಾತ್ರ ಮಾಡಿದ ಎಂ.ಪಿ. ಶಂಕರ್ ಅವರ ದೈತ್ಯ ದೇಹವನ್ನು ಹೆಚ್ಚು ಸ್ಮರಣೆಗೆ ತಂದುಕೊಳ್ಳುತ್ತಾರೆ. ಆದರೆ ಯಾವುದೇ ಹಿನ್ನೆಲೆಯಿಲ್ಲದ, ನೀಲಮ್ಮನಂತಹ ಒಬ್ಬ ಸಾಧಾರಣ ಗೃಹಿಣಿ ಸ್ಮಶಾನ ಹೊಕ್ಕು ಗುಣಿ ತೋಡಲು ಗುದ್ದಲಿ ಹಿಡಿದಿರುವುದು ಒಂದು ಅದ್ಭುತವೇ ಸರಿ. ನೀಲಮ್ಮನ ನಿಷ್ಕಾಮ ಕರ್ಮವನ್ನು ಅರಸಿಕೊಂಡು ನಾಡಿನಾದ್ಯಂತ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅನೇಕ ಪತ್ರಿಕೆಗಳು ಅವರ ಕತೆಯನ್ನು ಪ್ರಕಟಿಸಿವೆ.
ಇಂದಿನ ಹೆಣ್ಣು ಮಕ್ಕಳಿಗೆ ಮಾದರಿ
ಬದುಕಬೇಕು ಅಂತ ಬಂದೆ. ಬದುಕೋಕೆ ಸ್ಮಶಾನ ಆದ್ರೇನು, ಕಾಡಾದ್ರೇನು? ದೆವ್ವಗಳ ಜೊತೆ ಬೇಕಾದ್ರೂ ಬದುಕ್ತೀನಿ. ಗುಂಡಿ ತೋಡೋದು ಸ್ವಲ್ಪ ಕಷ್ಟನೇ. ದಪ್ಪಗಿರೋರು, ಸಣ್ಣಗಿರೋರು ಬೇರೆ ಬೇರೆ ಸೈಜಿನೋರು ಇರ್ತಾರಲ್ಲಾ? ಅವರ್ಗೆ ತಕ್ಕನಂಗೆ ವಡೀಬೇಕು ಅಲ್ವ್ರಾ? ಯಾವ ಸೈಜು ವಡೀಬೇಕಂತ, ಬಂದವರು ಹೇಳ್ತಾರೆ. ಹಂಗೆ ವಡೀತೀನಿ. ಒಂದೊಂದ್ ಸಲ ನನ್ನೆಷ್ಟೆತ್ತರ ವಡದ್ರೆ ಸಾಕಾ ಅಂತ ಕೇಳ್ತೀನಿ… ಆಗ ನಾನೇ ಗುಂಡಿ ಒಳಗೆ ಕುಂತು ನೋಡಿ, ಗುಂಡಿ ಎಷ್ಟು ಆಳಬೇಕು ಅಂತ ಅಂದಾಜು ಮಾಡ್ಕಂಡು ವಡೀತೀನಿ. ಗುಂಡಿ ಒಳಗೆ ಕೂತ್ರೆ ನಾನೇನು ಸತ್ತೋಯ್ತೀನಾ? ಹೂಳೋ ಆಳಿನ ಭುಜದೆತ್ತರ ಗುಂಡಿ ವಡೆದು ಅದರೊಳಗೆ ಇನ್ನೊಂದು ಗುಂಡಿ ವಡೀಬೇಕು. ಬ್ಯಾಡವ್ವೋ ನನ್ನ ಸ್ಥಿತಿ ಎನ್ನುತ್ತಾರೆ ನೀಲಮ್ಮ, ಈಕೆಯ ಸಾಧನೆಗೆ ಅದೆಷ್ಟೋ ಪ್ರಶಸ್ತಿಗಳು ಅರಸಿ ಬಂದಿದೆ. ನೀಲಮ್ಮನಂತಹ ಇಂತಹ ಸಾಧಕರು ನಮ್ಮ ಇಂದಿನ ಹೆಣ್ಣು ಮಕ್ಕಳಿಗೆ ಮಾದರಿ.
ಸಂಗ್ರಹ.
The post ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ: appeared first on Hai Sandur kannada fortnightly news paper.
]]>The post ಚಿತ್ರರಂಗ, ರಂಗಭೂಮಿ ಮತ್ತು ಸಾಹಿತ್ಯಲೋಕದ ಮಹಾನ್ ಸಾಧಕ; ಚಿ.ಸದಾಶಿವಯ್ಯ ಮಹಾನುಭಾವರ ಸಂಸ್ಮರಣೆ ದಿನ appeared first on Hai Sandur kannada fortnightly news paper.
]]>ಕನ್ನಡ ಚಿತ್ರರಂಗದ ಮಹಾನ್ ಚಿತ್ರಕಥಾ ಸಾಹಿತಿ ಮತ್ತು ಗೀತರಚನಕಾರರಾದ ಚಿ. ಸದಾಶಿವಯ್ಯನವರು 1908ರ ಏಪ್ರಿಲ್ 8ರಂದು ಜನಿಸಿದರು. ಬಾಲ್ಯದಲ್ಲೇ ಸಾಹಿತ್ಯ ಮತ್ತು ನಾಟಕದ ಗೀಳು ಹಚ್ಚಿಕೊಂಡರು. ಅ.ನ.ಕೃ ಅವರ ಆಪ್ತ ಮಿತ್ರರಾಗಿದ್ದ ಸದಾಶಿವಯ್ಯನವರು ಹಲವಾರು ನಾಟಕ ಹಾಗೂ ಕಾದಂಬರಿಗಳನ್ನೂ ಬರೆದರು. ಕನ್ನಡ ಚಿತ್ರರಂಗದ ಮಹಾನ್ ಸಾಹಿತಿ ಚಿ. ಉದಯಶಂಕರ್ ಹಾಗೂ ಪ್ರಸಿದ್ಧ ಚಿತ್ರ ನಿರ್ಮಾಪಕ ದತ್ತುರಾಜ್ ಚಿ. ಸದಾಶಿವಯ್ಯನವರ ಮಕ್ಕಳು.
ನಲವತ್ತರ ದಶಕದಲ್ಲಿ ಸದಾಶಿವಯ್ಯನವರು ರಚಿಸಿದ ‘ಮಾಂಗಲ್ಯ’ ನಾಟಕವು ರಾಜ್ಯದ ಅನೇಕ ಕಡೆ ಯಶಸ್ವಿ ಪ್ರದರ್ಶನ ಕಂಡಿತ್ತು. ಬಿ.ಎ. ಅಯ್ಯಂಗಾರರ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ಸಂಸ್ಥೆಯ ಒಡನಾಟ ಹೊಂದಿದ್ದ ಸದಾಶಿವಯ್ಯನವರು ತೆನಾಲಿ ರಾಮಕೃಷ್ಣ ನಾಟಕದಲ್ಲಿ ಕೃಷ್ಣದೇವರಾಯನ ಪಾತ್ರಕ್ಕೆ ಪ್ರಸಿದ್ಧರಾಗಿದ್ದರು. ಆ ದಿನಗಳಲ್ಲಿ ಅವರು ಕಲಾ ಕುಸುಮ ಎಂಬ ಹವ್ಯಾಸಿ ನಾಟಕ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಜೀವನ ನಿರ್ವಹಣೆಗಾಗಿ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಗಣಿತ ಮತ್ತು ಕನ್ನಡ ಅಧ್ಯಾಪಕರಾಗಿದ್ದ ಸದಾಶಿವಯ್ಯನವರು ತಾವು ಕಲಿಸುತ್ತಿದ್ದ ಶಾಲೆಯಲ್ಲಿಯೂ ಕನ್ನಡ ರಂಗಭೂಮಿಯ ವಾತಾವರಣವನ್ನು ನಿರ್ಮಿಸಿದ್ದರು. ಶಾಲೆಯಲ್ಲಿಯೇ ಕನ್ನಡ ರಂಗಮಂದಿರ ಎಂಬ ಹವ್ಯಾಸಿ ತಂಡವನ್ನು ಕಟ್ಟಿ ‘ಮಕ್ಕಳೇ ದೇವರು’, ‘ಶಿವಾಜಿಯ ಬಾಲ್ಯ’, ‘ಶಿವಮಂಗಳ’ ಮೊದಲಾದ ಪ್ರಸಿದ್ಧ ನಾಟಕಗಳನ್ನು ಬರೆದು ರಂಗದ ಮೇಲೆ ಪ್ರಸ್ತುತಪಡಿಸಿದ್ದರು.
ಕೆ. ಸದಾಶಿವಯ್ಯನವರಿಗೆ ಆ ದಿನಗಳಲ್ಲಿ ಬಿ.ಎಸ್. ಗರುಡಾಚಾರ್ ಮತ್ತು ಬಿ.ಆರ್.ಪಂತುಲು ಆತ್ಮೀಯರಾಗಿದ್ದರು. ಪಂತುಲು ಅವರು ತಮ್ಮ ‘ಮೊದಲ ತೇದಿ’ ಚಿತ್ರದಲ್ಲಿ ಸದಾಶಿವಯ್ಯನವರಿಗೆ ಚಿತ್ರಸಾಹಿತಿಯಾಗುವ ಅವಕಾಶ ಕಲ್ಪಿಸಿದರು. ಆರು ತಿಂಗಳು ಶಾಲೆಯ ಕೆಲಸಕ್ಕೆ ರಜೆ ಹಾಕಿ, ಚಿತ್ರದ ಸಾಹಿತ್ಯ ರಚನೆ ಮತ್ತು ಸಹ-ನಿರ್ದೇಶನದ ಹೊಣೆಗಳನ್ನು ಅವರು ನಿರ್ವಹಿಸಿದರು. ಚಿತ್ರಗಳಲ್ಲಿ ಹೆಚ್ಚಿನ ಅವಕಾಶ ದೊರಕಿತಾದರೂ, ಕುಟುಂಬದ ಜವಾಬ್ದಾರಿಯ ನಿರ್ವಹಣೆಗಾಗಿ ಅವರು ಶಿಕ್ಷಕ ವೃತ್ತಿಗೇ ಹಿಂತಿರುಗಿದರು. ಗರುಡಾಚಾರ್ಯರ ತಮ್ಮ ಬಿ.ಎಸ್.ರಂಗಾ ಅವರು ತಮ್ಮ ಭಕ್ತ ಮಾರ್ಕಾಂಡೇಯ ಚಿತ್ರದಲ್ಲಿ ಸದಾಶಿವಯ್ಯನವರಿಗೆ ಅವಕಾಶ ಕೊಟ್ಟರು. ಈ ಬಾರಿ ಜೀವನಕ್ಕೆ ಅಗತ್ಯವಾದ ಕೆಲಸವನ್ನು ಚಿತ್ರರಂಗದಿಂದಲೇ ತಾವು ಒದಗಿಸುವುದಾಗಿ ಹೇಳಿ ಬಲವಂತದಿಂದ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಡಿಸಿದರು. ಬಿ.ಎಸ್.ರಂಗಾ ಅವರು ನಿರ್ಮಿಸಿದ ಅಮರಶಿಲ್ಪಿ ಜಕಣಾಚಾರಿ ಸದಾಶಿವಯ್ಯನವರಿಗೆ ಪ್ರಸಿದ್ಧಿ ತಂದು ಕೊಟ್ಟ ಚಿತ್ರ. ಈ ಚಿತ್ರದ ಗೀತೆಗಳೆಲ್ಲ ಜನಪ್ರಿಯವಾದವು.
‘ಒಂದರಿಂದ ಇಪ್ಪತ್ತರವರೆಗೂ ಉಂಡಾಟ, ಉಂಡಾಟ; ಇಪ್ಪತ್ತೊಂದರಿಂದ ಮೂವತ್ತರವರೆಗೂ ಭಂಡಾಟ, ಭಂಡಾಟ’ ಎಂದು ‘ಮೊದಲ ತೇದಿ’ ಚಿತ್ರದಲ್ಲಿ ಚಿ. ಸದಾಶಿವಯ್ಯನವರು ಬರೆದ ಹಾಡು ಅಂದು ಕನ್ನಡಿಗರೆಲ್ಲರ ಮನೆ ಮನೆ ಮಾತಾಗಿ ಹೋಗಿತ್ತು. ಇಪ್ಪತ್ತರ ಶತಮಾನದಲ್ಲಿ ಹಲವು ರೀತಿಯ ಸಂಬಳಗಳ ಕೆಲಸ ಮಾಡಿ ಕೈಗೆ ಹತ್ತದ ಸಂಬಳದ ಇತಿ ಮಿತಿಗಳಲ್ಲಿ ಬದುಕಿನ ಬವಣೆ ಸಾಗಿಸಿದ ಪ್ರತಿಯೋರ್ವರಿಗೂ ಈ ಹಾಡಿನ ಸಾಹಿತ್ಯ ನಮ್ಮದು ಎಂದು ಆಪ್ತವಾಗಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ.
ಕನ್ನಡ ಚಿತ್ರಗೀತೆಗಳಲ್ಲಿನ ಕಾವ್ಯಮಯ ಗುಣಗಳನ್ನು ಅಭ್ಯಸಿಸುವವರು ಒಮ್ಮೆ ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರಕ್ಕಾಗಿ ಸದಾಶಿವಯ್ಯನವರು ರಚಿಸಿದ ಹಾಡುಗಳ ಬಗ್ಗೆ ಇಣುಕಬೇಕು. ಬದುಕು, ಪರಿಸರ, ಕಲೆ ಇವುಗಳ ಸಮ್ಮೇಳವನ್ನು ಚಿತ್ರದ ಚೌಕಟ್ಟಿಗೆ ಮೋಹಕವಾಗಿಯೋ ಎಂಬಂತೆ ಕಳೆಕಟ್ಟಿಕೊಡುವ ‘ಚೆಲುವಾಂತ ಚೆನ್ನಿಗನೆ ನಲಿದಾಡು ಬಾ, ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ’ ಗೀತೆ ಕನ್ನಡದ ಅಪೂರ್ವ ಚಿತ್ರಗೀತೆಗಳಲ್ಲೊಂದು. ಅಮರಶಿಲ್ಪಿ ಜಕಣಾಚಾರಿ ಚಿತ್ರದ ಈ ಗೀತೆಯಲ್ಲದೆ ‘ನಿಲ್ಲು ನೀ ನಿಲ್ಲು ನೀ ನೀಲವೇಣಿ’, ‘ಏನೋ ಎಂತೋ ಜುಮ್ಮೆಂದಿತು ತನುವು’ ಅಂತಹ ಗೀತೆಗಳು ಮತ್ತು ಚಿತ್ರಕಥೆ ಕೂಡಾ ಚಿ. ಸದಾಶಿವಯ್ಯನವರದ್ದೇ.
‘ಕನಸಿನಾ ದೇವಿಯಾಗಿ ಮನಸಿನಾ ನಲ್ಲೆಯಾಗಿ ಅಂದವೇ ರೂಪಗೊಂಡ ತರುಣಿ ಯಾರಿದು?’, ‘ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು ಮಧ್ಯರಾತ್ರಿ ತುಂಬು ಚಳಿಯ ತುಂಬುತಿರುವುದು’ ಎಂಬಂತಹ ವಿಶಿಷ್ಟ ನೆಲೆಯ ಚಿತ್ರಗೀತೆಗಳನ್ನು ಕೂಡಾ ಸದಾಶಿವಯ್ಯನವರು ಬರೆದರು. ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್. ಜಾನಕಿ ಮತ್ತು ಚಿತ್ರರಂಗದಲ್ಲಿ ಪ್ರಪ್ರಥಮವಾಗಿ ರಾಜ್ ಕುಮಾರ್ ಅವರು ಹಾಡಿದ ‘ತುಂಬಿತು ಮನವ ತಂದಿತು ಸುಖವ’ ಗೀತೆಯಲ್ಲಿ ‘ಹುಣ್ಣಿಮೆ ಚಂದಿರ ತಾ ನಗಲು ಉಕ್ಕುವುದೇತಕೆ ಆ ಕಡಲು’ ಎಂಬಂತಹ ಸುಂದರ ಉಪಮೆಗಳನ್ನು ರಾರಾಜಿಸುವಂತೆ ಮಾಡಿದ ಕವಿವರೇಣ್ಯರು ಚಿ. ಸದಾಶಿವಯ್ಯನವರು. ‘ಭಕ್ತ ಮಾರ್ಕಂಡೇಯ’ ಚಿತ್ರದ ‘ಹರ ಹರ ಸುಂದರ ಸಾಂಬ ಸದಾಶಿವ’, ಮೂರೂವರೆ ವಜ್ರಗಳು ಚಿತ್ರದ ‘ಕೃಷ್ಣ ಎಂದರೆ ಭಯವಿಲ್ಲ’, ‘ಮಾಯಾ ಬಜಾರ್’ ಚಿತ್ರದ ‘ಆಹಾ ನನ್ನ ಮದ್ವೆಯಂತೆ’, ‘ಜಗದೇಕವೀರನ ಕಥೆ’ ಚಿತ್ರದ ‘ಶಿವಶಂಕರಿ ಶಿವಾನಂದನ ಲಹರಿ’, ‘ಕನ್ಯಾರತ್ನ’ ಚಿತ್ರದ ‘ಎಲ್ಲಿಹರೋ ನಲ್ಲೋ’, ‘ಪ್ರತಿಜ್ಞೆ’ಯ ‘ಕಾಯೇ ದೀನ ಶರಣ್ಯೇ’ ಮುಂತಾದ ನೂರಾರು ಸವಿಗೀತೆಗಳನ್ನು ಸದಾಶಿವಯ್ಯನವರು ಕನ್ನಡ ಚಿತ್ರರಸಿಕರ ಹೃದಯಾಳದಲ್ಲಿ ಉಳಿಯುವಂತೆ ಮತ್ತು ಕನ್ನಡಿಗರು ಸಂತಸದಿಂದ ಉಲಿಯುವಂತೆ ಮಾಡಿದ್ದಾರೆ. ಆ ಕಾಲದ ಹಲವಾರು ಚಿತ್ರಗಳ ಯಶಸ್ಸಿಗೆ ತಮ್ಮ ಚಿತ್ರಕಥೆ ಮತ್ತು ಹಾಡುಗಳ ಮೂಲಕ ಚಿ. ಸದಾಶಿವಯ್ಯನವರು ಅಪಾರವಾದ ಕೊಡುಗೆ ನೀಡಿದ್ದಾರೆ.
ಇದು 1963ರ ಮಾತು. ಆಗಷ್ಟೇ ಪ್ರಭಾತ್ ಸಂಸ್ಥೆಯವರ, ದಾಮಲೆಯವರ ನಿರ್ದೇಶನ, ವಿಷ್ಣು ಪಂತ ಪಗ್ನಿಸ್ ಅಭಿನಯದ ಮರಾಠಿ ಚಿತ್ರ ‘ಸಂತ ತುಕಾರಾಂ’ ಬಿಡುಗಡೆಯಾಗಿ ಜಯಭೇರಿ ಹೊಡೆದಿತ್ತು. ‘ಜಯತು ಜಯ ವಿಠ್ಠಲಾ’ ಎಂಬುದು ಆ ದಿನಗಳಲ್ಲಿ ತುಂಬ ಜನಪ್ರಿಯವಾಗಿದ್ದ ಮರಾಠಿ ಗೀತೆ. ಈ ಚಿತ್ರವನ್ನೇ ರಾಜಕುಮಾರ್ ನಾಯಕತ್ವದಲ್ಲಿ ಕನ್ನಡದಲ್ಲಿ ಮೂಡಿಸಬೇಕೆಂದು ಹೊರಟವರು ನಿರ್ದೇಶಕ ಸುಂದರ ನಾಡಕರ್ಣಿಯವರು. ಆ ಚಿತ್ರದ ‘ಜಯತು ಜಯ ವಿಠ್ಠಲ’ ಗೀತೆಯನ್ನು ಅದೇ ಭಾವದೊಂದಿಗೆ ತಮ್ಮ ಸಿನಿಮಾದಲ್ಲಿ ಅಳವಡಿಸಬೇಕೆಂಬುದು ನಾಡಕರ್ಣಿ ಅವರ ಆಶಯ. ಆದರೆ ಕನ್ನಡದಲ್ಲಿ ಆ ಹಾಡನ್ನು ಅವರಿನ್ನೂ ಸಿದ್ಧಗೊಳಿಸಿಕೊಂಡಿರಲಿಲ್ಲ! ಆಗ ನಾಡಕರ್ಣಿಯವರಿಗೆ ಒಂದು ಉಪಾಯ ಹೊಳೆಯಿತು. ಹಾಡು ಸಿದ್ಧವಿಲ್ಲ ಎಂಬ ಕಾರಣಕ್ಕೇ ಚಿತ್ರೀಕರಣ ಮುಂದೂಡುವುದು ಬೇಡ ಎಂದು ನಿರ್ಧರಿಸಿ ಮರಾಠಿ ಗೀತೆಯ ಗ್ರಾಮಾಪೋನ್ ರೆಕಾರ್ಡನ್ನೇ ತಂದು ರಾಜ್ಕುಮಾರ್ ಅವರಿಗೆ ಕೇಳಿಸಿದರು. ‘ಈ ಹಾಡಿನ ಭಾವಾರ್ಥ ಗ್ರಹಿಸಿ ನೀವು ಹಾಗೇ ತುಟಿಚಲನೆಯೊಂದಿಗೆ ಅಭಿನಯಿಸಿಬಿಡಿ. ಈಗ ಚಿತ್ರೀಕರಣ ಮುಗಿಸಿಬಿಡೋಣ. ನಂತರ ಹಾಡು ಬರೆಸಿದರಾಯ್ತು’ ಅಂದರು ನಾಡಕರ್ಣಿ. ನಿರ್ದೇಶಕರ ಮಾತು ಮತ್ತು ಮನಸ್ಸನ್ನು ಅರಿತವರಂತೆ, ಸಾಕ್ಷಾತ್ ತುಕಾರಾಮನೇ ಒಪ್ಪುವಂತೆ ಹಾಡಿನ ದೃಶ್ಯದಲ್ಲಿ, ಒಂದು ಪದವೂ ಗೊತ್ತಿಲ್ಲದಿದ್ದರೂ ಡಾ. ರಾಜ್ ಅಭಿನಯಿಸಿಬಿಟ್ಟರು. ನಂತರ, ಮರಾಠಿ ಗೀತೆಯ ಟ್ಯೂನನ್ನು ಕನ್ನಡಕ್ಕೆ ಹೊಂದುವಂತೆ ಬದಲಾಯಿಸಿದ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ‘ನನ್ನ ಕೆಲಸವೂ ಮುಗಿಯಿತು’ ಎಂದರು. ಈಗ ನಿಜವಾದ ಸವಾಲು ಎದುರಾದದ್ದು ಚಿ. ಸದಾಶಿವಯ್ಯನವರಿಗೆ. ಏಕೆಂದರೆ, ಅವರು ಚಿತ್ರೀಕರಣವಾದ ದೃಶ್ಯದ ರಷಸ್ ನೋಡಿ, ನಾಯಕನ ತುಟಿ ಚಲನೆಯನ್ನೇ ಇಂಚಿಂಚಾಗಿ ಗಮನಿಸಿ, ಅದಕ್ಕೆ ಸರಿಯಾಗಿ ಹೊಂದುವಂಥ ಪದ ಬಳಸಿ ಹಾಡು ಬರೆಯಬೇಕಿತ್ತು! ಅದೂ ಆ ದಿನಗಳಲ್ಲಿ ತುಂಬಾ ಜನಪ್ರಿಯವಾಗಿದ್ದ ಮರಾಠಿಯ ‘ಜಯತು ಜಯ ವಿಠ್ಠಲಾ’ಕ್ಕೆ ಸರಿಸಮವಾಗಿ ನಿಲ್ಲುವಂತೆ! ಎಂಥ ಪ್ರತಿಭಾವಂತರನ್ನೂ ಬೆಚ್ಚಿ ಬೀಳಿಸುವ ಕೆಲಸವದು; ಆ ಸವಾಲನ್ನು ಗಂಭೀರವಾಗಿ ಸ್ವೀಕರಿಸಿದ ಸದಾಶಿವಯ್ಯನವರು ಇಂದೂ ಕನ್ನಡ ನಾಡಿನಲ್ಲಿ ಭಿಕ್ಷುಕರಿಂದ ಮೊದಲ್ಗೊಂಡು, ಮಹಾನ್ ಭಕ್ತರಿಗೂ ಹೃದಯ ತಲುಪುವಂತೆ, ಯಾವುದೇ ನಿರ್ಭಾವುಕನನ್ನೂ ಮಾಧುರ್ಯದ ಭಾವುಕತೆಗೆ ತಲುಪಿಸಬಲ್ಲ ‘ಜಯತು ಜಯ ವಿಠ್ಠಲ’ ಗೀತೆಯನ್ನು ಬರೆದರು. ನಂತರ, ಹಾಡನ್ನು ಜತೆಗಿಟ್ಟುಕೊಂಡೇ ರಷಸ್ ನೋಡಿದ ಗಾಯಕ ಪಿ.ಬಿ. ಶ್ರೀನಿವಾಸ್, ಆ ವಿಠ್ಠಲನಿಗೂ ಅನುಮಾನ ಬಾರದ ರೀತಿಯಲ್ಲಿ ರಾಜ್ಕುಮಾರ್ರ ತುಟಿ ಚಲನೆಗೆ ಠಾಕುಠೀಕಾಗಿ ಹೊಂದಿಕೆಯಾಗುವಂತೆ ಮಧುರವಾಗಿ ಹಾಡಿಬಿಟ್ಟರು. ಕನ್ನಡದ ಗೀತಲಾಲಿತ್ಯ, ಸದಾಶಿವಯ್ಯನವರ ಪದವೈಭವ, ವಿಜಯಭಾಸ್ಕರ್ರ ಮಧುರ ಸಂಗೀತ, ಪಿ.ಬಿ. ಶ್ರೀನಿವಾಸ್ ಅವರ ಜೇನ್ದನಿ ಮತ್ತು ರಾಜ್ಕುಮಾರ್ ಅವರ ಅನನ್ಯ ಅಭಿನಯ ಮರಾಠಿ ಹಾಡನ್ನು ಹಿಂದಿಕ್ಕಿತು. ಈ ಘಟನೆಯ ಬಗ್ಗೆ ಓದಿದಾಗ ಎಂಥೆಂಥ ಪ್ರತಿಭಾವಂತರು ನಮ್ಮ ನಾಡಿನಲ್ಲಿದ್ದರು ಎಂದು ನೆನೆದು ಹೃದಯ ತುಂಬುತ್ತದೆ.
ಈ ಮಹಾನ್ ಪ್ರತಿಭೆಗಳ ಪ್ರತಿನಿಧಿಯಂತಿದ್ದು ಕನ್ನಡ ಚಿತ್ರರಂಗವನ್ನು ಸ್ವತಃ ಬೆಳಗಿದ್ದೂ ಅಲ್ಲದೆ ತಮ್ಮ ಮಗ ಚಿ. ಉದಯಶಂಕರ್ ಅವರನ್ನು ಕನ್ನಡ ಚಿತ್ರರಂಗದ ಮಹಾನ್ ಸಾಹಿತಿಯಾಗಿ ಕೊಡುಗೆ ಕೊಟ್ಟ ಚಿ. ಸದಾಶಿವಯ್ಯನವರು ಕನ್ನಡ ಕಲಾಲೋಕದಲ್ಲಿ ಪ್ರಾತಃಸ್ಮರಣೀಯರೆನಿಸಿದ್ದಾರೆ.
ಚಿ. ಸದಾಶಿವಯ್ಯನವರು 1982ರ ಜನವರಿ 14ರಂದು ಈ ಲೋಕವನ್ನಗಲಿದರು.
ಕೃಪೆ:-‘ಕನ್ನಡ ಸಂಪದ’
The post ಚಿತ್ರರಂಗ, ರಂಗಭೂಮಿ ಮತ್ತು ಸಾಹಿತ್ಯಲೋಕದ ಮಹಾನ್ ಸಾಧಕ; ಚಿ.ಸದಾಶಿವಯ್ಯ ಮಹಾನುಭಾವರ ಸಂಸ್ಮರಣೆ ದಿನ appeared first on Hai Sandur kannada fortnightly news paper.
]]>