ನೀವೊಂದು ಕನಸಿನ ಬೆನ್ನು ಹತ್ತಿರುತ್ತೀರಾ .ಆ ಕನಸು ನನಸಾಗಲು ಹಗಲಿರುಳು ಶ್ರಮಿಸುತ್ತೀರ. ಮೂರ್ನಾಲ್ಕು ವರ್ಷ ಶ್ರಮ ವಹಿಸಿ ಅದರ ಪ್ರತಿಫಲ ನಾಲಿಗೆಗೆ ರುಚಿಸುತ್ತಿರುವಾಗಲೇ ಆ ಕನಸು ಮಣ್ಣುಪಾಲಾದರೆ ..?
ಗೆಳತಿ ದೀಪಾ ( ಹೆಸರು ಬದಲಿಸಲಾಗಿದೆ )ಇತ್ತೀಚಿಗೆ ಬೇಸರದಲ್ಲಿ ಮಾತಾಡುತ್ತಿದ್ದಳು. ಕಾರಣ ಕೆದಕುತ್ತಾ ಹೋದಾಗ ತಿಳಿದದ್ದು ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಕ್ಲೋಸ್ ಆಗಿದೆಯಂತೆ . ಹಾಗಾಗಿ ಸೈಲೆಂಟ್ ಆಗಿ ಮೂಡ್ ಔಟ್ ಆದವಳಂತೆ ವರ್ತಿಸುತ್ತಿದ್ದಳು.
ಆಗಿದ್ದಿಷ್ಟೆ , ಸಮಾನ ಮನಸ್ಕರಾದ ಮೂರು ಜನ ಯುವತೊಯರಿ ಒಂದು ಇವೆಂಟ್ ಮ್ಯಾನೆಜ್ಮೆಂಟ್ ಸಂಬಂಧಿತ ಕಂಪನಿಯೊಂದನ್ನ ನಾಲ್ಕು ವರ್ಷದ ಕೆಳಗೆ ಕಾನೂನಾತ್ಮಕವಾಗಿ ಆರಂಭಿಸಿದ್ರು. ಇದರಡಿ ಸುಮಾರು ಹದಿನೈದು ಜನರಿಗೆ ಕೆಲಸ , ಅನ್ನ , ಹಣ ಎಲ್ಲಕ್ಕಿಂತ ಹೆಚ್ಚಾಗಿ ಬದುಕಿನ ಕನಸುಗಳು ರೆಕ್ಕೆ ಬಿಚ್ಚುವ ಭದ್ರತೆ ದೊರಕಿತ್ತು. ಮೊನ್ನೆ ಮಾರ್ಚ್ 21 ರ ವರೆಗೆ ಎಲ್ಲವೂ ಸರಿಯಿತ್ತು. ಲಾಕ್ ಡೌನ್ ಶುರುವಾದ ಮೊದಲ ದಿನ ಹಾಕಿದ ಕಂಪನಿ ಬಾಗಿಲು ಇಂದಿಗೂ ತೆರೆಯಲಾಗಲಿಲ್ಲ. ಮೊನ್ನೆ ಶಾಶ್ವತವಾಗಿ ಮುಚ್ಚಿಹೋಯಿತಲ್ಲದೆ ಆ ಮೂಲಕ ಬದುಕು ಕಂಡುಕೊಂಡಿದ್ದ ಹದಿನೈದು ಜನರ ಕನಸು ಗಾಳಿಯಲ್ಲಿ ತೇಲುವಂತೆ ಮಾಡಿದೆ.
ಈಗೀಗ ಸಣ್ಣ ಸ್ಟಾರ್ಟಪ್ ಕಂಪನಿಗಳು , ನವೀನ ಉದ್ಯಮಗಳು, ಸುಧಾರಿತ ಸೇವಾ ವಲಯಗಳ ಪ್ರಯೋಗಗಳು ಸಾಮಾನ್ಯ.
ಇಲ್ಲಿ ದೀಪಾ ಕೆಲಸ ಮಾಡುತ್ತಿದ್ದ ಕಂಪನಿ ಕೂಡಾ ಮದುವೆ , ಬರ್ತ್ ಡೇ , ಕಾರ್ಪೊರೇಟ್ ಕಂಪನಿಗಳ ವಿಭಿನ್ನ ಕಾರ್ಯಕ್ರಮಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಮಾಡಿಕೊಡುತ್ತಿತ್ತು. ಇಲ್ಲಿ ಕೆಲಸ ಮಾಡುವ ಅಷ್ಟೂ ಜನ ಯುವತಿಯರು ತಮ್ಮಲ್ಲೇ ಒಂದು ಮನೋಸ್ಥೈರ್ಯ ತಂದುಕೊಂಡು ಒಬ್ಬರಿಗೊಬ್ಬರು ಸಲಹೆ ಸಹಕಾರದಿಂದ ಆರ್ಡರ್ ಗಳನ್ನ ತೆಗೆದುಕೊಳ್ಳುವುದು , ಅದನ್ನ ಸರಿಯಾದ ಸಮಯಕ್ಕೆ ನಿರ್ವಹಿಸುವುದು , ಕಸ್ಟಮರ್ ಗಳ ನಿರೀಕ್ಷೆಯನ್ನರಿತು ಹಗಲಿರುಳು ಶ್ರಮಿಸಿ ತುಂಬಾ ಕ್ರಿಯೇಟಿವಿಟಿಯಿಂದ ನಡೆದಿತ್ತು ಒಂದು ಕನಸಿನ ಕಂಪನಿಯ ಕೆಲಸಗಳು.
ಇಲ್ಲಿ ದೀಪಾ ಒಬ್ಬ ಎಂಪ್ಲಾಯ್ , ಮಾಡೆಲಿಂಗ್ ಹಾಗೂ ಡಿಸೈನಿಂಗ್ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಛಲ ಹೊತ್ತು ಮೈಸೂರ ಮನೆಯಿಂದ ಬೆಂಗಳೂರು ಅಂಗಳಕ್ಕೆ ಬಂದಿದ್ದ ದೀಪಾ ಭವಿಷ್ಯದ ಕನಸುಗಳ ಸಾಕಾರದ ನಂಬಿಕೆಯಲ್ಲೇ ಈ ಕಂಪನಿಯಲ್ಲಿ ಇನ್ವಾಲ್ವ್ ಆಗಿದ್ಲು .
ಬರ್ತ್ ಡೇ ಗೆ ಕೇಕ್ ತಯಾರಿ , ಮದುವೆಗೆ ಬಟ್ಟೆ ಮ್ಯಾಚಿಂಗ್ , ಗ್ರಾಹಕರನಿರೀಕ್ಷೆಯಂತೆ ಕಾರ್ಯಕ್ರಮ ಆಯೋಜನೆ , ಮದುವೆಗಳಿಗೆ ಒಳ್ಳೊಳ್ಳೆ ಊಟ ಒದಗಿಸುವುದು. ಬರ್ತ್ ಡೇ ಪಾರ್ಟಿಗಳಿಗೆ ಭಿನ್ನ ಭಿನ್ನ ಖಾದ್ಯ ಇಡೀ ತಂಡ ಹುಮ್ಮಸ್ಸಿನಿಂದ ಕೆಲಸ ನಿರ್ವಹಿಸುತ್ತಿರುವಾಗಲೇ ಒಕ್ಕರಿಸಿದ್ದು ಕೊರೋನಾ.
ತಿಂಗಳು ಕಾದರು, ಎರಡು ತಿಂಗಳು , ಮೂರು ತಿಂಗಳು ಊಹೂಂ ..
ಎಷ್ಟೇ ಕಾದರೂ ಇನ್ನೂ ಪರಿಸ್ಥಿತಿ ನಿರ್ವಹಿಸಲು ಆಗುತ್ತಿಲ್ಲ. ಸಣ್ಣ ಕಂಪನಿ , ಎಲ್ಲರ ಸಂಬಳ ನಡೆಯಬೇಕು. ಕಛೇರಿಯ ತಿಂಗಳ ಬಾಡಿಗೆಯೇ 50,000 . ಆಗಲೇ ಇನ್ವೆಸ್ಟ್ ತಂದಿಟ್ಟುಕೊಂಡಿದ್ದ ಸಾಕಷ್ಟು ಸಾಮಾನುಗಳು ಹಾಗೇ ಉಳಿದುಕೊಂಡಿದ್ದವು. ಎಲ್ಲವನ್ನೂ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅನಿವಾರ್ಯತೆ ಬಲವಾದಾಗ ಬೇರೆ ದಾರಿ ಕಾಣದೆ ಕಂಪನಿಯನ್ನ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ . ಅದೂ ಸಾಧ್ಯವಾಗದಿದ್ದಾಗ ಕಂಪನಿಗೆ ಫಾರ್ಮಲಿಟಿ ಪ್ರಕಾರ ಬಾಗಿಲು ಹಾಕಿದ್ದಾರೆ.
ಅದನ್ನೇ ನಂಬಿಕೊಂಡಿದ್ದ ಅಷ್ಟು ಜನರ ಬದುಕು ಅತಂತ್ರವಾಗಿದೆ. ಕೊರೋನಾ ಅದೆಷ್ಟು ಜನರ ಬದುಕನ್ನ ಬೀದಿಗೆ ತಂದು ಬಿಟ್ತು ಅಲ್ವಾ ..??
ನಿನ್ನೆ ಮಾತಾಡ್ತಾ ಮಾತಾಡ್ತಾ ಎಲ್ಲವನ್ನೂ ಹಂಚಿಕೊಂಡ ಗೆಳತಿ ಕಂಪನಿ ಮುಚ್ಚಿದ ವಿಷಯ ಪ್ರಸ್ತಾಪಿಸಿ ಬೇಸರಗೊಂಡಳು..
ಜಗತ್ತೇ ಹೊಡೆತ ಅನುಭವಿಸುತ್ತಿರೋ ಈ ಕಾಲಘಟ್ಟದಲ್ಲಿ ಇದೆಲ್ಲ ಸಹಜಬಿಡು ಎಂದು ಹೇಳಬಹುದಷ್ಟೆ ಆದರೆ ಮತ್ತೊಂದು ಕನಸಿನ ಈಡೇರಿಕೆಗೆ ಅದೆಷ್ಟು ಶ್ರಮ ಬೇಕು ಅಲ್ವಾ ಎಂದು ಭಾವಿಸಿ ಸುಮ್ಮನಾದೆ …??
ಚಿತ್ರ : ಸಾಂದರ್ಭಿಕ
🗒🖋ರಾಮು ಅರಕೇರಿ ..