ಕೊರೋನ ಹಿನ್ನೆಲೆಯಲ್ಲಿ ವೇತನ ಸಿಗದೆ ಜೀವನ ನಿರ್ವಹಣೆಗೆ ಪರದಾಡುತ್ತಿದ್ದ ಖಾಸಗಿ ಶಾಲೆ ಶಿಕ್ಷಕನೊಬ್ಬ ಕಷ್ಟ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪದ ನಿವಾಸಿ ಚಂದ್ರಶೇಖರ್(39) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕ. ಮಂಚೇನಹಳ್ಳಿಯ ಅನುದಾನಿತ ಆಚಾರ್ಯ ಪ್ರೌಢಶಾಲೆಯಲ್ಲಿ ಚಂದ್ರಶೇಖರ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಟ್ಯುಟೋರಿಯಲ್ ಕೂಡ ನಡೆಸುತ್ತಿದ್ದರು. ಆದರೆ, ಕೊರೋನ ಹಾವಳಿ ಶುರುವಾದ ಬಳಿಕ ಶೇಖರ್ ಅವರ ಆದಾಯದ ಮೂಲ ಸಂಪೂರ್ಣವಾಗಿ ಬಂದ್ ಆಗಿತ್ತು
ಕೊರೋನ ಹಿನ್ನೆಲೆಯಲ್ಲಿ ಚಂದ್ರಶೇಖರ್ ಕರ್ತವ್ಯ ನಿರ್ವಹಿಸುತ್ತಿದ್ದ ಆಚಾರ್ಯ ಶಿಕ್ಷಣ ಸಂಸ್ಥೆ ಬಾಗಿಲು ಮುಚ್ಚಿದೆ. ಇತ್ತ ವಿದ್ಯಾರ್ಥಿಗಳಿಲ್ಲದೆ ಸ್ವಂತದ ಟ್ಯುಟೋರಿಯಲ್ ಕೂಡ ಬಂದ್ ಆಗಿತ್ತು. ನೆಚ್ಚಿಕೊಂಡಿದ್ದ ಆದಾಯದ ಮೂಲಗಳು ಕೈಕೊಟ್ಟ ನಂತರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಶೇಖರ್ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಾವಿಗೆ ಆಚಾರ್ಯ ಶಿಕ್ಷಣ ಸಂಸ್ಥೆಯೇ ಕಾರಣ ಅಂತ ಡೆತ್ನೋಟ್ ಕೂಡ ಬರೆದಿಟ್ಟಿದ್ದಾರೆ.
ನಾನು ಆಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದೇನೆ ಆದರೆ, ಶಾಲೆಯ ಆಡಳಿತ ಮಂಡಳಿ ಮಾತ್ರ ನನ್ನ ಸೇವೆಯನ್ನು ಪರಿಗಣಿಸಿಲ್ಲ. ಇಷ್ಟು ವರ್ಷಗಳ ಸೇವೆಯ ಬಳಿಕವೂ ಆಡಳಿತ ಮಂಡಳಿ ನನಗೆ ಅನುದಾನಿತ ಶಿಕ್ಷಕನಾಗಿ ಅನುಮೋದನೆ ನೀಡಲಿಲ್ಲ. ಹೀಗಾಗಿ ನನ್ನ ಸಾವಿಗೆ ಆಚಾರ್ಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೇ ನೇರ ಹೊಣೆ ಅಂತ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.