ಮಡಿಕೇರಿ ಜ.21:-ಕರ್ನಾಟಕ ಲೋಕ ಸೇವಾ ಆಯೋಗದಿಂದ ಜನವರಿ 23 ಮತ್ತು 24 ರಂದು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್ ರೂಪ ಅವರು ಮಾಹಿತಿ ಪಡೆದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಹಿತಿ ಪಡೆದು ಮಾತನಾಡಿದ ಅವರು, ಈಗಾಗಲೇ ನೋಡಲ್ ಅಧಿಕಾರಿಗಳು ಮತ್ತು ರೂಟ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕರ್ನಾಟಕ ಲೋಕ ಸೇವಾ ಆಯೋಗದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಿದರು.
ಪರೀಕ್ಷೆಯು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಜೋಸೆಫರ ಶಾಲೆ, ಸಂತ ಮೈಕಲ್ ಶಾಲೆ ಮತ್ತು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕೇಂದ್ರದಲ್ಲಿ ಸ್ಯಾನಿಟೆಸರ್ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವಂತೆ ನಿರ್ದೇಶನ ನೀಡಿದರು.
ಜನವರಿ 23 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಹಾಗೆಯೇ 24 ರಂದು ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲೀಷ್ ಪತ್ರಿಕೆ ಮತ್ತು ಸಾಮಾನ್ಯ ಜ್ಞಾನ ಪತ್ರಿಕಾ ಪರೀಕ್ಷೆ ನಡೆಯಲಿದೆ.
ಡಿಡಿಪಿಐ ಮಚ್ಚಾಡೋ ಅವರು ಪರೀಕ್ಷೆ ಸಂಬಂಧ ಹಲವು ಸಲಹೆ ನೀಡಿದರು. ತಹಶೀಲ್ದಾರ ಮಹೇಶ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ, ಬಿಇಒ ಗುರುರಾಜ್, ಇನ್ಸ್ಪೆಕ್ಟರ್ ಮೇದಪ್ಪ, ಸಂತ ಜೋಸೆಫರ ಶಾಲೆ, ಸಂತ ಮೈಕಲರ ಶಾಲೆ ಮತ್ತು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಇತರರು ಇದ್ದರು.