ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗೆ ಅತ್ಯಂತ ಉಪಯುಕ್ತವಾಗಿದ್ದು, ರೈತರು ತಪ್ಪದೇ ಹೆಸರು ನೊಂದಾಯಿಸಿಕೊಂಡು ವಿಮೆ ಹಣ ಪಾವತಿಸುವಂತೆ ಅಪರ ಜಿಲ್ಲಾಧಿಕಾರಿ ಡಾ:ಎಚ್.ಎಲ್ ನಾಗರಾಜ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಮಳವಳ್ಳಿ ತಾಲ್ಲೂಕಿನ ಶೆಟ್ಟಿಹಳ್ಳಿಯ ಮಲ್ಲೇಗೌಡ ಎಂಬ ರೈತ 2022-23 ಮುಂಗಾರು ಹಂಗಾಮಿನಲ್ಲಿ ಭತ್ತ ನೀರಾವರಿಯ 1.98 ಹೆಕ್ಟೇರ್ ಪ್ರದೇಶಕ್ಕೆ 3409 ವಿಮಾ ಕಂತು ಪಾವತಿಸಿ ಬೆಳೆ ಕಟಾವು ಫಲಿತಾಂಶದ ಅನ್ವಯ ಕಡಿಮೆ ಇಳುವರಿಯ ವಿಮಾ ಮಾರ್ಗಸೂಚಿ ಅನ್ವಯ 1,15,100/- ರೂ ವಿಮಾ ಹಣ ಪಡೆದಿರುತ್ತಾರೆ. ಬೆಳೆ ವಿಮೆ ಬಿತ್ತನೆಯಿಂದ ಕೊಯ್ಲು ಆಗುವವರೆಗೂ ವಿಮೆಗೆ ಬೆಳೆ ಒಳಪಡುತ್ತದೆ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕಿದೆ. ಕೃಷಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರು ಬೆಳೆ ವಿಮೆ ನೊಂದಾಯಿಸಿಕೊಳ್ಳುವಂತೆ ಮಾಡಿ ಎಂದರು.
ರೈತರು ವಿಮಾ ಮೊತ್ತದ ಶೇ.2 ರಷ್ಟು ಪಾವತಿ ಮಾಡಬೇಕಿದ್ದು, ಭತ್ತ ನೀರಾವರಿಗೆ ಎಕರೆಗೆ- ರೂ 755/-, ಹೆಕ್ಟೇರಿಗೆ- ರೂ1865/-, ಮುಸುಕಿನ ಜೋಳ ನೀರಾವರಿ ಎಕರೆಗೆ- ರೂ 522/-, ಹೆಕ್ಟೇರಿಗೆ- ರೂ1290/-, ಮುಸುಕಿನ ಜೋಳ ಮಳೆಆಶ್ರಿತ ಎಕರೆಗೆ- ರೂ 453/-, ಹೆಕ್ಟೇರಿಗೆ- ರೂ1130/-, ರಾಗಿ ನೀರಾವರಿ ಎಕರೆಗೆ- ರೂ 411/-, ಹೆಕ್ಟೇರಿಗೆ- ರೂ1015/-, ರಾಗಿ ಮಳೆಆಶ್ರಿತ ಎಕರೆಗೆ- ರೂ 344/-, ಹೆಕ್ಟೇರಿಗೆ- ರೂ850/-,ಹುರಳಿ ಮಳೆಆಶ್ರಿತ ಎಕರೆಗೆ- ರೂ 166/-, ಹೆಕ್ಟೇರಿಗೆ- ರೂ410/- ವಿಮಾ ಕಂತು ಪಾವತಿಸಲು ಆಗಸ್ಟ್ 16 ಕೊನೆಯ ದಿನಾಂಕವಾಗಿರುತ್ತದೆ ಎಂದರು.
ನೆಲಗಡಲೆ ಮಳೆಆಶ್ರಿತ ಎಕರೆಗೆ- ರೂ 441/-, ಹೆಕ್ಟೇರಿಗೆ- ರೂ1090/-, ಅಲಸಂದೆ ಮಳೆಆಶ್ರಿತ ಎಕರೆಗೆ- ರೂ 243/-, ಹೆಕ್ಟೇರಿಗೆ- ರೂ 600/-, ಟೊಮ್ಯಾಟೋ ಎಕರೆಗೆ- ರೂ 2863/-, ಹೆಕ್ಟೇರಿಗೆ- ರೂ7075/-, ಎಲೆಕೋಸು ಎಕರೆಗೆ- ರೂ 1523/-, ಹೆಕ್ಟೇರಿಗೆ- ರೂ3775/-ವಿಮಾ ಕಂತು ಪಾವತಿಸಲು ಜುಲೈ 15 ಕೊನೆಯ ದಿನಾಂಕವಾಗಿರುತ್ತದೆ ಹಾಗೂ ತೊಗರಿ( ಮಳೆ ಆಶ್ರಿತ) ಎಕರೆಗೆ- ರೂ 388/-, ಹೆಕ್ಟೇರಿಗೆ- ರೂ960/-ವಿಮಾ ಕಂತು ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ ಎಂದರು.
ಕೃಷಿ ವಿಮೆ ವಿವರ ಕುರಿತ ಕರಪತ್ರವನ್ನು ಕೃಷಿ ಇಲಾಖೆ ಅವರು ಹೊರತಂದಿದ್ದು, ಕರಪತ್ರಗಳು ಜಿಲ್ಲೆಯ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ, ಹಾಲಿನ ಡೈರಿ, ರೈತ ಸಂಪರ್ಕ ಕೇಂದ್ರ, ರೈತರು ಹೆಚ್ಚು ಸೇರುವ ಸ್ಥಳಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಿ. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರೈತರು ಬ್ಯಾಂಕ್ಗೆ ಬಂದಾಗ ಸೌಜನ್ಯದಿಂದ ವರ್ತಿಸಿ ಅವರಿಗೆ ಅಗತ್ಯ ಮಾಹಿತಿ ನೀಡಿ ವಿಮೆ ನೊಂದಣಿಗೆ ಪ್ರೋತ್ಸಾಹಿಸಿ ಎಂದರು.