ಕುಡಿಯುವ ನೀರಿಗೆ ಆದ್ಯತೆ-ಯೋಜನೆಗಳ ಪ್ರಗತಿ ಸಾಧಿಸಲು ಸಂಸದರ ಸೂಚನೆ

0
18

ಶಿವಮೊಗ್ಗ, ಮಾರ್ಚ್ 01:ಕುಡಿಯುವ ನೀರಿಗೆ ಆದ್ಯತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸುವಂತೆ ಸಂಸದರಾದ ಬಿ.ವೈ ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಗತಿಯಲ್ಲಿರುವ ಕಾಮಗಾರಿಗೆ ಚುನಾವಣೆ ಅಡಚಣೆ ಆಗುವುದಿಲ್ಲ. ಆದ್ದರಿಂದ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು.
ವಿಕಲಚೇತನರಿಗೆ ವಾಹನ ನೀಡಿರಿ : ವಿಕಲಚೇತನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಮಂಜೂರಾದ ರೆಟ್ರೋವ್ಹೀಲ್ ಫಿಟ್ಟೆಡ್ ಮೋಟಾರ್ ಸೈಕಲ್‍ಗಳನ್ನು ಚುನಾವಣೆ ಆಗುವವರೆಗೆ ಕಾಯದೆ ಮಾರ್ಚ್ 5 ಅಥವಾ 6 ರಂದು ಕಾರ್ಯಕ್ರಮ ಆಯೋಜಿಸಿ ನೀಡುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗವಿಕಲ ಕಲ್ಯಾಣಾಧಿಕಾರಿ ಚಂದ್ರಪ್ಪ ಮಾತನಾಡಿ ಪ್ರಸ್ತುತ 53 ವಾಹನಗಳು ಸಿದ್ದವಿದ್ದು ನೀಡಲಾಗುವುದು. ರಾಜ್ಯ ಸರ್ಕಾರದಿಂದ 140 ವಾಹನಗಳಿಗೆ ಮಂಜೂರಾತಿ ದೊರೆತಿದೆ. ಹಾಗೂ ಕೇಂದ್ರ ಸರ್ಕಾರದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಜಿಲ್ಲೆಯ ವಿಕಲಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಸಾಧನ ಸಲಕರಣೆ ವಿತರಿಸುವ ಶಿಬಿರವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.
ಬಿಎಸ್‍ಎನ್‍ಎಲ್ ನೆಟ್‍ವರ್ಕ್ : ಮೊಬೈಲ್ ನೆಟ್‍ವರ್ಕ್ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು ಕೇಂದ್ರ ಸರ್ಕಾರ ಗುಡ್ಡಗಾರು, ನೆಟ್‍ವರ್ಕ್ ಇಲ್ಲದ ಸುಮಾರು 252 ಗ್ರಾಮಗಳಿಗೆ ನೆಟ್‍ವರ್ಕ್ ಟವರ್ ಸ್ಥಾಪಿಸಲು ಮಂಜೂರಾತಿ ನೀಡಿದೆ. ಇದುವರೆಗೆ 161 ಕಡೆ ಕೆಲಸ ಆರಂಭಿಸಲು ಸಿದ್ದವಾಗಿದೆ. 44 ಪ್ರಗತಿಯಲ್ಲಿದ್ದು ಮತ್ತು 14 ಕಾಮಗಾರಿ ಪೂರ್ಣಗೊಂಡಿದೆ. ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರು ಸಹಕರಿಸಬೇಕು. ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರೂ ಪ್ರಗತಿ ಏನೂ ಸಾಲದು. ಆದ್ದರಿಂದ ಅರಣ್ಯ ಮತ್ತು ಮೆಸ್ಕಾಂ ಅಧಿಕಾರಿಗಳು ಸಮನ್ವಯದೊಂದಿಗೆ ಸಹಕರಿಸಬೇಕು. ಅಪರ ಜಿಲ್ಲಾಧಿಕಾರಿಗಳು ಈ ಕಡೆ ವಿಶೇಷ ಗಮನ ಹರಿಸಬೇಕೆಂದರು.

ಕುಡಿಯುವ ನೀರು ಯಾವತ್ತಿಗೂ ಮೊದಲನೇ ಆದ್ಯತೆ. ಜಲಜೀವನ ಮಿಷನ್ ಅಡಿಯಲ್ಲಿ ಒಟ್ಟು 126 ಓವರ್‍ಹೆಡ್ ಟ್ಯಾಂಕ್‍ಗೆ ಮಂಜೂರಾತಿ ದೊರೆತಿದೆ. ಸೊರಬ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಗುತ್ತಿಲ್ಲ. ಹೊಸನಗರದ ಬ್ರಹ್ಮೇಶ್ವರದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಕ್ಕಪಕ್ಕ ಇರುವ ಜಾಗದಲ್ಲಿ ಬೋರ್ ಕೊರೆಸಿ 5 ಇಂಚು ನೀರು ಬಿದ್ದಿದ್ದು ಅರಣ್ಯ ಇಲಾಖೆಯವರು ಬೋರ್ ಮುಚ್ಚಿಹಾಕಿರುವುದು ಸರಿಯಲ್ಲ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದರು.

ರೈಲ್ವೇ ಇಲಾಖೆಯವರು ಭದ್ರಾವತಿ ಆರ್‍ಓಬಿ ಕೆಲಸವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಈ ತಿಂಗಳ ಕೊನೆಗೆ ಕೆಲಸ ಮುಗಿಸಿ ಹಸ್ತಾಂತರಿಸಬೇಕು. ವಿದ್ಯಾನಗರ ಆರ್‍ಓಬಿ ಗೆ ಅಂಡರ್‍ಪಾಸ್ ಮಾಡುವ ಬಗ್ಗೆ ಶೀಘ್ರದಲ್ಲಿ ಪರಿಶೀಲಿಸಿ ಕೆಲಸ ಶುರು ಮಾಡಬೇಕೆಂದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 62 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಅರ್ಜಿ ಹಾಕುವಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. 995 ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿ ಆಗಿದೆ. ಮೊದಲನೇ ಸ್ಟೇಜ್‍ನಲ್ಲಿ 23 ಸಾವಿರ ಅಭ್ಯರ್ಥಿಗಳು ಹಾಗೂ ಎರಡನೇ ಸ್ಟೇಜ್‍ನಲ್ಲಿ 1976 ಅಭ್ಯರ್ಥಿಗಳ ಅನುಮೋದನೆಯಾಗಿದೆ ಆಗಿದೆ. ಎಲ್ಲ ಅಭ್ಯರ್ಥಿಗಳ ಅನುಮೋದನೆಗೆ ಅಪರ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ ಮಾತನಾಡಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2018-19 ನೇ ಸಾಗಿಗೆ ರೂ.4 ಕೋಟಿ ಅನುದಾನ ಬಿಡುಗಡೆಯಾಗಿದ್ದು 122 ಕಾಮಗಾರಿ ಅನುಮೋದನೆಗೊಂಡು 3.4 ಕೋಟಿ ವೆಚ್ಚವಾಗಿದ್ದು 113 ಕಾಮಗಾರಿ ಪೂರ್ಣವಾಗಿದೆ. 2019-20 ನೇ ಸಾಲಿನಲ್ಲಿ 5.4 ಕೋಟಿ ಬಿಡುಗಡೆಯಾಗಿದ್ದು 3.8 ಕೋಟಿ ಖರ್ಚಾಗಿದೆ. 2020-21 ರಲ್ಲಿ 6.6 ಕೋಟಿ ಬಿಡುಗಡೆಯಾಗಿದು 4.2 ಕೋಟಿ ಖರ್ಚಾಗಿದೆ ಎಂದು ಮಾಹಿತಿ ನೀಡಿದರು.

ಸಂಸದರು, ಆದರ್ಶ ಗ್ರಾಮ ಯೋಜನೆಯಡಿ ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಬೇಕು. ಕೆಲವು ತಾಲ್ಲೂಕುಗಳಲ್ಲಿ ಪ್ರಗತಿ ಕಡಿಮೆ ಇದ್ದು ಸಮಿತಿ ನಾಮ ನಿರ್ದೇಶಿತ ಸದಸ್ಯರು ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೊರಬ ಶೇ.70 ಮತ್ತು ಶಿಕಾರಿಪುರ ಶೇ.87 ಪ್ರಗತಿ ಸಾಧಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 41333, ಹಿಂಗಾರಿನಲ್ಲಿ 258 ರೈತರು ನೋಂದಣಿಯಾಗಿದ್ದು ಇದೀಗ ಮಧ್ಯಂತರ ಪರಿಹಾರವಾಗಿ 16956 ರೈತರು ಒಟ್ಟು 6.96 ಕೋಟಿ ಪಡೆದಿದ್ದಾರೆ. 2023-24 ನೇ ಸಾಲಿಗೆ ಮಣ್ಣು ಮಾದರಿ ಸಂಗ್ರಹಣೆ ಗುರಿ 5 ಸಾವಿರ ಇದ್ದು 7251 ಮಾದರಿ ಸಂಗ್ರಹಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಮೃತ ಯೋಜನೆಯಡಿ ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಮೊತ್ತವನ್ನು ನಿಗದಿತ ಅವಧಿಯೊಳಗೆ ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ತಿಳಿಸಿದ ಅವರು ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಡಿಎಂಎಫ್ ಟಿ ಕ್ರಿಯಾ ಯೋಜನೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

ಸ್ಮಾರ್ಟ್‍ಸಿಟಿ ಎಂ.ಡಿ ಮಾಯಣ್ಣಗೌಡ, ಸ್ಮಾರ್ಟ್ ಸಿಟಿ ಯೋಜನೆಯಡಿ 2 ಕಾಮಗಾರಿಗಳು ಬಾಕಿ ಇವೆ. 2024 ರ ಜೂನ್ ಮಾಹೆಗೆ ಸ್ಮಾರ್ಟ್‍ಸಿಟಿ ಯೋಜನೆ ಮುಕ್ತಾಯಗೊಳ್ಳಲಿದ್ದು 10ವರ್ಷ ಎಎಂಸಿ ಇರಲಿದೆ. ತುಂಗಾ ನದಿಯಲ್ಲಿ ಬೇಸಿಗೆ ಕಾಲ ಸೇರಿದಂತೆ ಎಲ್ಲ ಕಾಲದಲ್ಲಿ ಬೋಟಿಂಗ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪ್ಯಾಚ್‍ವರ್ಕ್ ಕಳಪೆಯಾಗಿದ್ದು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರದಲ್ಲಿ ಇದನ್ನು ಗುಣಮಟ್ಟದೊಂದಿಗೆ ಸರಿಪಡಿಸಬೇಕೆಂದರು.

ಸಭೆಗೆ ಹಾಜರಾಗದ ಕೆಆರ್‍ಐಡಿಎಲ್ ಕಾರ್ಯಪಾಲಕ ಇಂಜಿನಿಯರ್‍ರವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸುರೇಶ್, ನಾಗರತ್ನ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಎಸ್‍ಪಿ ಮಿಥುನ್ ಕುಮಾರ್, ಎಡಿಸಿ ಸಿದ್ದಲಿಂಗರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here