ಸಂಡೂರು:ಜೂ:16 ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೂರ್ಣಪ್ರಮಾಣದಲ್ಲಿ ಶ್ರಮಿಸಬೇಕು, ಅದಕ್ಕಾಗಿ ಡ್ಯೂಟಿಗಳನ್ನು ಸರಿಯಾದ ರೀತಿಯಲ್ಲಿ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡಾಗ ಉತ್ತಮವಾಗುತ್ತದೆ ಎಂದು ನೂತನ ಬಳ್ಳಾರಿ ಜಿಲ್ಲಾ ನೂತನ ಎಸ್ಪಿ ಯಾದ ಶೋಭಾರಾಣಿ ವಿ.ಜೆ. ತಿಳಿಸಿದರು.
ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಸಂಡೂರು ಠಾಣೆಗೆ ಭೇಟಿ ನೀಡಿ ಪಿ.ಎಸ್.ಐ. ವೀರೇಶ್ ಡಿ. ಮಾಳಶೆಟ್ಟಿಯವರ ತಂಡ ಗಾರ್ಡ ಅಫ್ ಅನರ್ ಸ್ವೀಕರಿಸಿ ಠಾಣೆಗೆ ಭೇಟಿ ನೀಡಿ ಪೂರ್ಣ ಪರಿಶೀಲನೆ ನಡೆಸಿದರು, ಈ ಸಂದರ್ಭದಲ್ಲಿ ಮಹಿಳಾ ಪೋಲಿಸ್, ಹಾಗೂ ಠಾಣೆಯ ಎಲ್ಲಾ ರೀತಿಯ ನಿಯಮಗಳ ಬಗ್ಗೆ, ಡ್ಯೂಟಿಗಳನ್ನು ಅಲಾಟ್ ಮಾಡುವ ಬಗ್ಗೆ ನೂತನವಾಗಿ ಕಂಪ್ಯೂಟರ್ ಬಳಕೆಯ ಬಗ್ಗೆ, ಟ್ರಾಫಿಕ್ ನಿಯಮಗಳು ಮತ್ತು ಶಿಸ್ತುಪಾಲನೆಯ ಬಗ್ಗೆ ಹಾಗೂ ತರಬೇತಿಗಳ ಬಗ್ಗೆಯೂ ಸಹ ತಿಳಿಸಿದರು. ಪ್ರಮುಖವಾಗಿ ಸಂಡೂರು ತಾಲೂಕಿನಾದ್ಯಂತ ಕೈಗೊಂಡ ಕಾನೂನು ಸುವ್ಯವಸ್ಥೆಯ ಕ್ರಮಗಳನ್ನು ಪರಿಶೀಲನೆ ನಡೆಸಿದರು.
ತಾಲೂಕಿನ ಸಿ.ಪಿ.ಐ. ಕಛೇರಿ, ಚೋರನೂರು ಠಾಣೆ, ಸಂಡೂರು ಠಾಣೆಗಳಿಗೂ ಭೇಟಿ ನೀಡಿ ಮಾಹಿತಿ ಪಡೆದರು, ಅಲ್ಲದೆ ಸಂಡೂರು ತಾಲೂಕಿನ ಆರಾದ್ಯ ದೈವ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೂ ಸಹ ಭೇಟಿ ನೀಡಿ, ತಾಲೂಕಿನ ಭೌಗೋಳಿಕ ಲಕ್ಷಣ, ಠಾಣೆಯ ವ್ಯಾಪ್ತಿಗಳನ್ನು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಬರುವ ಸಂಡೂರು ಠಾಣೆಯ ವ್ಯಾಪ್ತಿಯ ಭೌಗೋಳಿಕ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಂಡೂರು ಠಾಣೆಯ ಪಿ.ಎಸ್.ಐ. ವೀರೇಶ್ ಡಿ. ಮಾಳಶೆಟ್ಟಿ, ಚೋರನೂರು ಪೋಲಿಸ್ ಠಾಣೆಯ ಪಿ.ಎಸ್.ಐ(ಕಾ&ಸು) ರೇವಣಸಿದ್ದಪ್ಪ, ಸಂಡೂರು ವೃತ್ತ ನಿರೀಕ್ಷಕ ಮಹೇಶ್ ಗೌಡ ಮತ್ತು ಡಿ.ವೈ.ಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿಗಳು, ಠಾಣೆಯ ಪೋಲಿಸರು ಉಪಸ್ಥಿತರಿದ್ದರು.