ಜಿಲ್ಲಾ ಕ್ಷಯವೇದಿಕೆ ಸಭೆಯಲ್ಲಿ ಜಿಪಂ ಸಿಇಒ ನಂದಿನಿ ಅಭಿಮತ, ಕ್ಷಯಮುಕ್ತ ಗ್ರಾಮ ಘೋಷಣೆಗೆ ಸಲಹೆ

0
84

ಬಳ್ಳಾರಿ,ನ.09. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕ್ಷಯಮುಕ್ತ ಗ್ರಾಮಗಳನ್ನು ಗುರುತಿಸಿ ಅವುಗಳನ್ನು ಟಿಬಿಮುಕ್ತ ಗ್ರಾಮವೆಂದು ಘೋಷಿಸಬೇಕು ಮತ್ತು ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಕ್ಷಯವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ 237 ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚನೆ ನೀಡಿದ ಜಿಪಂ ಸಿಇಒ ನಂದಿನಿ ಅವರು ಪೋರ್ಟಬಲ್ ಎಕ್ಸರೇ ಮೂಲಕ ಸಿಬಿ ನ್ಯಾಟ್ ವಾಹನವನ್ನು ಸಿದ್ದಪಡಿಸಿ ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯಕ್ರಮವನ್ನು ಅನುಷ್ಟಾನ ಮಾಡಲು ಸೂಚಿಸಿದರು.
ಕ್ಷಯರೋಗವನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಶೀಘ್ರ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಮತ್ತು ಕ್ಷಯರೋಗಕ್ಕೆ ಸಂಬಂಧಿಸಿದಂತೆ ನೋಂದಣಿ,ವರದಿ ಮಾಡಿಕೊಳ್ಳುವಿಕೆ,ಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸೂಚಿಸಿದರು.
ಯಾವ ರೀತಿಯ ಲಕ್ಷಣಗಳು ಬಂದರೇ ಕ್ಷಯರೋಗ ಬರುವ ಸಾಧ್ಯತೆ ಇದೆ;ಅದನ್ನು ನಾವು ಹೇಗೆ ಗೊತ್ತು ಮಾಡಿಕೊಳ್ಳಬೇಕು ಎಂಬುದರ ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಹಡಗಲಿ,ಸಂಡೂರು,ಹರಪನಳ್ಳಿ,ಕೂಡ್ಲಿಗಿ ಮತ್ತು ಬಳ್ಳಾರಿ ತಾಲೂಕುಗಳಲ್ಲ್ಲಿ ಕ್ಷಯರೋಗ ಪತ್ತೆಹಚ್ಚುವಿಕೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ತಿಳಿಸಿದ ಅವರು ಮತ್ತು 15 ದಿನಗಳಿಗೊಮ್ಮೆ ಈ ಕುರಿತು ಸಭೆ ಕರೆದು ಪರಿಶೀಲನೆ ನಡೆಸಿ ನಿಗಾವಹಿಸಬೇಕು ಎಂದು ಅವರು ಸೂಚಿಸಿದರು.
ಹೆಚ್ಚು ಹೆಚ್ಚು ಕಫ ಪರೀಕ್ಷೆಯನ್ನು ಮಾಡುವ ಮೂಲಕ ರೋಗ ನಿರ್ಧಾರವನ್ನು ಕ್ರಮ ಕೈಗೊಳ್ಳುವುದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬರುವ ರೋಗಿಗಳಲ್ಲಿ ಶಂಕಿತರನ್ನು ಪರೀಕ್ಷೆ ಮಾಡುವ ಮೂಲಕ ಹಾಗೂ ಸಕಾಲದಲ್ಲಿ ಚಿಕಿತ್ಸೆ ನೀಡುವುದಕ್ಕೆ ಮುಂದಾಗಬೇಕು ಎಂದು ಹೇಳಿದ ಅವರು ಹಾಗೇಯೆ ಖಾಸಗಿ ವೈದ್ಯರು ತಮ್ಮ ಬಳಿ ಚಿಕಿತ್ಸೆಗೆ ಆಗಮಿಸುವ ರೋಗಿಗಳಲ್ಲಿ ಕಫ ಪರೀಕ್ಷೆಗೆ ಸೂಚಿಸುವುದು ಹಾಗೂ ಕ್ಷಯ ಖಚಿತವಾದ ನಂತರ ಅಗತ್ಯ ಮಾಹಿತಿಯನ್ನು ಇಲಾಖೆ ತಿಳಿಸಲು ಐಎಂಎ ಜೊತೆಯಲ್ಲಿ ಸಭೆ ಹಮ್ಮಿಕೊಳ್ಳಲು ತಿಳಿಸಿದರು.
6 ವರ್ಷದೊಳಗಿನ ಮಕ್ಕಳ ಹಾಗೂ ಇತರೆ ಶಂಕಿತರನ್ನು ತಕ್ಷಣವೇ ಕಫ ಪರೀಕ್ಷೆಗಾಗಿ ಮನವೊಲಿಸುವುದು ಮತ್ತು ಕಡ್ಡಾಯವಾಗಿ ಪರೀಕ್ಷೆಯನ್ನು ಮಾಡಿಸಲು ಸೂಚಿಸಿದ ಜಿಪಂ ಸಿಇಒ ನಂದಿನಿ ಅವರು ಕ್ಷಯರೋಗಕ್ಕೆ ಸಂಬಂಧಿತ ಕಾರ್ಯಕ್ರಮಗಳ ಕ್ರಿಯಾ ಯೋಜನೆ ರಚಿಸಿ ಅನುದಾನವನ್ನು ಆಯಾ ಕಾರ್ಯಕ್ರಮವಾರು ವೆಚ್ಚ ಭರಿಸಲು ಸೂಚಿಸಿದರು.
ಕ್ಷಯರೋಗದಿಂದ ಮುಕ್ತರಾದ ಕೆಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಇಂದ್ರಾಣಿ,ಡಿಎಚ್‍ಒ ಡಾ.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್ ಸೇರಿದಂತೆ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here