ಬಳ್ಳಾರಿ, ಸೆ 09 ಮಕ್ಕಳಿಗೆ ಹೊರಗಿನ ತಿಂಡಿ ತಿನಿಸದೆ ಮನೆಯಲ್ಲೇ ತಯಾರಿಸಿದ ಆಹಾರ ತಿಂಡಿತಿನಿಸು, ಸೊಪ್ಪು, ತರಕಾರಿ, ಹಾಲು, ಮೊಟ್ಟೆ ಹಾಗೂ ಇನ್ನೀತರ ಪೌಷ್ಠಿಕಾಂಶಗಳಿರುವ ಆಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರ್ಜುನ್ ಎಸ್.ಮಲ್ಲೂರ್ ಹೇಳಿದರು.
ನಗರದ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪೌಷ್ಠಿಕತೆಯನ್ನು ಹೊಗಲಾಡಿಸಲು ಮನೆಯ ಪಕ್ಕ ಇರುವ ಜಾಗದಲ್ಲೇ ತರಕಾರಿಗಳನ್ನು ಬೆಳೆಸಿ ನೈಸರ್ಗಿಕವಾಗಿ ದೊರೆಯುವಂತ ತರಕಾರಿ, ಹಣ್ಣು, ಧವಸ ಧಾನ್ಯಗಳಿಂದ ತಯಾರಿಸಿದ ಆಹಾರ ಮಕ್ಕಳಿಗೆ ನೀಡಬೇಕು ಎಂದು ಅವರು ಸಲಹೆ ನೀಡಿದರು.ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸುವ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಇದೇ ಸಂದರ್ಭದಲ್ಲಿ ಅವರು ಅನಾವರಣ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸದೃಢ, ಆರೋಗ್ಯವಂತ, ಬುದ್ಧಿವಂತ ಮಕ್ಕಳನ್ನು ಕೊಡುಗೆ ನೀಡಿದರೆ ದೇಶದ ಪ್ರಗತಿ ಸಾಧ್ಯ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.ಅಂಗನವಾಡಿಗೆ ಬರುವ ಪ್ರತಿ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ಮಕ್ಕಳಿಗೆ ಉತ್ತಮವಾದ ಆರೋಗ್ಯ ಮತ್ತು ಶಿಕ್ಷಣ ನೀಡುವುದು ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಯರ ಮತ್ತು ತಂದೆ ತಾಯಿಗಳ ಜವಬ್ದಾರಿ ಎಂದರು.ದೇಶದ ಪ್ರಗತಿಯನ್ನು ಮಾನವ ಸಂಪನ್ಮೂಲದಿಂದ ಅಳೆಯಲಾಗುತ್ತಿದ್ದು ಒಂದು ವೇಳೆ ಮಾನವ ಸಂಪನ್ಮೂಲ ಚೆನ್ನಾಗಿ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆವರಣದಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಸಾಮಗ್ರಿಗಳನ್ನ ಪ್ರದರ್ಶನಕ್ಕಿಡಲಾಗಿತ್ತು.
ಕಾರ್ಯಕ್ರಮದ ನಂತರ ತಜ್ಞವೈದ್ಯರು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆರೋಗ್ಯ ತಪಾಸಣೆ ಆರೋಗ್ಯ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ನಾಗಾರಾಜ್ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಮಕ್ಕಳ ತಜ್ಞರಾದ ಡಾ.ಸಂಜಯ್, ಪ್ರಭಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಉಷಾ.ಎಸ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಇತರರು ಇದ್ದರು.