ಗದಗ ನ.೧೮ : ಗದಗ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹರಡುವಿಕೆ ಇತ್ತಿಚಿನ ಕೆಲವು ದಿನಗಳಿಂದ ಕಡಿಮೆ ಆಗುತ್ತಿರುವುದು ತಿಳಿದುಬಂದಿದೆ. ಸೋಂಕು ಕಡಿಮೆ ಆಗಿದೆ ಎಂದು ಸೋಂಕು ನಿಯಂತ್ರಣ ಹಾಗೂ ತಪಾಸಣೆ ಕಾರ್ಯದಲ್ಲಿ ನಿಧಾನಗತಿ ಮಾಡದೇ, ನಿರಂತರವಾಗಿ ಮುಂದುವರೆಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗದಗ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಕೋರೊನಾ ಸೋಂಕು ನಿಯಂತ್ರಣ ಕುರಿತು ಜರುಗಿದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಸಾರ್ವಜನಿಕರಲ್ಲಿ ಸೋಂಕಿ ನಿಯಂತ್ರಣದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಸಬೇಕು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋರೊನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳನ್ವಯ ಪ್ರತಿಯೊಬ್ಬರು ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಕಡ್ಡಾಯವಾಗಿದ್ದು ಈ ಕುರಿತು ಜಾಗೃತಿ ಮೂಡಿಸಿ ಮಾಸ್ಕ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸದ್ದಲ್ಲಿ ದಂಡ ವಿಧಿಸಲು ಕ್ರಮ ಜರುಗಿಸಬೇಕು ಎಂದರು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷಿಸುವ ಕಾರ್ಯದ ವೇಗವನ್ನು ಹೆಚ್ಚಿಸಬೇಕು. ಹೊಂ ಕ್ವಾರಂಟೈನ್ ನಲ್ಲಿರುವವರನ್ನು ನಿಯಮಿತವಾಗಿ ಮನೆಗೆ ಭೇಟಿ ನೀಡಿ ನಿಗಾವಹಿಸಬೇಕು.
ಸರ್ಕಾರದ ಆದೇಶದೊಂದಿಗೆ ಪದವಿ ಕಾಲೇಜು ತರಗತಿಗಳು ಆರಂಭವಾಗಿವೆ. ಕಾಲೇಜಿಗೆ ಆಗಮಿಸುವ ಎಲ್ಲ ವಿಧ್ಯಾರ್ಥಿಗಳು ಕೋವಿಡ್-೧೯ ಸೋಂಕು ಪರೀಕ್ಷೆಗೆ ಒಳಗಾಗಿ ವರದಿ ಬಂದ ನಂತರದಲ್ಲಿ ಕಾಲೇಜಿನ ತರಗತಿಗಳಿಗೆ ಹಾಜರಾಗಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಧಿತ ಕಾಲೇಜುಗಳಿಗೆ ತೆರಳಿ ಕಾಲೇಜು ವಿಧ್ಯಾರ್ಥಿಗಳ ಸೋಂಕು ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹ ಪಡೆದು ತಕ್ಷಣ ವರದಿ ನೀಡಬೇಕು. ಕೊವಿಡ್-೧೯ ಸೋಂಕು ಪರೀಕ್ಷೆಗೆ ಸರ್ಕಾರವು ಉಚಿತ ಪರೀಕ್ಷೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೋಂಕು ತಪಾಸಣೆಗಾಗಿ ಹಣ ನೀಡಬಾರದು. ಈ ಕುರಿತು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕೋರೋನಾ ತಪಾಸಣೆ ಹಾಗೂ ಚಿಕಿತ್ಸೆ ಉಚಿತವಾಗಿ ಸರ್ಕಾರ ನೀಡುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಕ್ರಮ ಜರುಗಿಸಲು ಹೇಳಿದರು.
ಗದಗ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕೂ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕು ತಪಾಸಣೆ, ಚಿಕಿತ್ಸೆ ಉಚಿತವಾಗಿ ನಿಡಲಾಗುತ್ತಿದೆ. ಸೋಂಕಿನ ಲಕ್ಷಣಗಳಿರುವ ಸಾರ್ವಜನಿಕರು ತಪಾಸಣೆಗೆ ಒಳಗಾಗಿ ಸೋಂಕು ನಿಯಂತ್ರಣಕ್ಕೆ ಸಹಕರಿಸುವಂತೆ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಬಸರೀಗಿಡದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ.ಕರಿಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ, ಜಿಮ್ಸ್ ಮೆಡಿಕಲ್ ಸುಪರಿಡೆಂಟ್ ಡಾ.ರಾಜಶೇಖರ ಮ್ಯಾಗೇರಿ, ಆರ್ಸಿಹೆಓ ಡಾ.ಗೋಜನೂರ, ಸಹಾಯಕ ಡ್ರಗ್ ಕಂಟ್ರೋಲರ್ ಸಂಗಣ್ಣ, ಹಿರಿಯ ಲ್ಯಾಬ್ ತಂತ್ರಜ್ಞ ಬಸವರಾಜ ಲಮಾಣಿ, ಮೈಕ್ರೋ ಬಯಾಲಾಜಿಸ್ಟ್ ಪ್ರತೀಕ್ ಹುರಕಡ್ಲಿ, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ.ಪ್ರವೀಣ ನಿಡಗುಂದಿ, ಡಾ.ಜಿ.ಎಸ್.ಪಲ್ಲೇದ ಸೇರಿದಂತೆ ಇತರರು ಹಾಜರಿದ್ದರು.