ಬಳ್ಳಾರಿ/ಹೊಸಪೇಟೆ,ಫೆ.23: ಹೊಸಪೇಟೆ ತಾಲೂಕಿನ ಅಗ್ನಿ ಶಾಮಕ ಠಾಣೆಯ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಹೊಸಪೇಟೆ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾದ ಪರಸಪ್ಪ ಅವರ ನೇತೃತ್ವದಲ್ಲಿ ಹೊಸಪೇಟೆಯ ಬಿ.ಎಸ್.ಎನ್.ಎಲ್. ಕಚೇರಿ, ನಗರದ ವಾಲ್ಮೀಕಿ ಪ್ರೌಢ ಶಾಲೆ, ನಗರದ ಕೇಂದ್ರಿಯ ಬಸ್ ನಿಲ್ದಾಣ ಮತ್ತು ನಗರದ ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಉಪನ್ಯಾಸ ಹಾಗೂ ಅಣುಕು ಪ್ರದರ್ಶನವನ್ನು ನೀಡಿದರು. ಉಪನ್ಯಾಸ ಸ್ಥಳದಲ್ಲಿ ಮೌನಾಚರಣೆ ಮಾಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹಾಗೂ ಇತರರು ಭಾಗವಹಿಸಿದ್ದರು.