ಗದಗ : ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನವನ್ನು ಗದಗ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ಖಾಸಗಿ ಸುದ್ದಿ ವಾಹಿನಿಗಳ ಹಾಗೂ ದಿನಪತ್ರಿಕೆಗಳ ಕಚೇರಿಗಳಿಗೆ ತೆರಳಿ ಮಾಧ್ಯಮದಲ್ಲಿ ಸರಿಗನ್ನಡ ಬಳಕೆ ಮಾಡುವಂತೆ ಹಕ್ಕೊತ್ತಾಯ ಮಾಡಲಾಯಿತು.
ಕರ್ನಾಟಕದ ಜನ ಕನ್ನಡದ ಪತ್ರಿಕೆ, ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಟ ಮಾಹಿತಿಗಾಗಿ ಅವಲಂಬಿಸುತ್ತಾರೆ. ಅಷ್ಟೇ ಮುಖ್ಯವಾಗಿ ತಮ್ಮ ಕನ್ನಡ ಓದು ಬರಹ ಕೌಶಲವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮವನ್ನು ಅನುಸರಿಸುತ್ತಾರೆ. ಜನಮಾನ್ಯರು -ಭಾಷೆ- ಮಾಧ್ಯಮ ಪರಸ್ಪರ ಬೆಸುಗೆಯಾಗಿ ಬದುಕಿನ ಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ. ಈ ದಿಸೆಯಲ್ಲಿ ಮಾಧ್ಯಮದ ಸಹಕಾರ ಪ್ರಮುಖವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮಹಾಂತೇಶ ವಾಲಿ ಹಾಗೂ ಅನಿಲಕುಮಾರ್ ಕುಟುಕನಕೇರಿ ಹಕ್ಕೊತ್ತಾಯ ಅಭಿಯಾನದಲ್ಲಿ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರತಿನಿಧಿಗಳಾಗಿ ಅಪ್ರೆಂಟಿಸ್ಗಳಾದ ಶ್ವೇತಾ ಚೆನ್ನಳ್ಳಿ , ಕಮಲಾ ದೊಡ್ಡಮನಿ , ಮಹಾಂತೇಶ ಅಗಸನಕೊಪ್ಪ ಇದ್ದರು.