ಮಡಿಕೇರಿ ನಗರ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ: ಅಪ್ಪಚ್ಚು ರಂಜನ್

0
112

ಮಡಿಕೇರಿ ಮೇ 24 :-ಮಡಿಕೇರಿ ನಗರದ ಸುಮಾರು 150 ಕುಟುಂಬಗಳಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಪಾಸಿಟಿವ್ ಕುಟುಂಬದ ಬಡವರಿಗೆ ವೈಯಕ್ತಿಕವಾಗಿ ‘ಆಹಾರ ಕಿಟ್’ ವಿತರಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಪ್ರಕಟಿಸಿದ್ದಾರೆ.
ನಗರದ ನಗರಸಭೆ ಸಭಾಂಗಣದಲ್ಲಿ ಕೋವಿಡ್ 19 ನಿಯಂತ್ರಣ ಬಗ್ಗೆ ನಗರಸಭೆ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಆಹಾರ ಕಿಟ್‍ನಲ್ಲಿ 10 ಕೆ.ಜಿ.ಅಕ್ಕಿ, ಒಂದು ಕೆ.ಜಿ.ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ಸಾಂಬಾರು ಪದಾರ್ಥ ಹಾಗೂ ಉಪ್ಪು ಒಳಗೊಂಡಿರುತ್ತದೆ. ಈ ತಿಂಗಳ ಅಂತ್ಯದೊಳಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಮಡಿಕೇರಿ ನಗರದಲ್ಲಿ ಕೊರೊನಾ ಮುಕ್ತ ವಾರ್ಡ್‍ಗೆ ತಲಾ 2 ಲಕ್ಷ ರೂವನ್ನು ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದರು.
ಲಾಕ್‍ಡೌನ್ ಪರಿಣಾಮದಿಂದ ಇತ್ತೀಚೆಗೆ ಕೋವಿಡ್ 19 ಸೋಂಕಿತರು ಮತ್ತು ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ದಿಸೆಯಲ್ಲಿ ನಗರಸಭೆ ಸದಸ್ಯರು ಸ್ಥಳೀಯರಿಗೆ ಮಾಹಿತಿ ನೀಡಬೇಕು ಎಂದು ಶಾಸಕರು ತಿಳಿಸಿದರು.
ಹೋಂ ಕ್ವಾರಂಟೈನಲ್ಲಿರುವವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು, ಸಮಸ್ಯೆ ಇದ್ದಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಬೇಕು. ಆ ದಿಸೆಯಲ್ಲಿ ನಗರಸಭೆ ಸದಸ್ಯರು ಗಮನಿಸಬೇಕು ಎಂದು ಅಪ್ಪಚ್ಚು ರಂಜನ್ ಅವರು ನುಡಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಜೊತೆ ಕುಟುಂಬದವರು ತಂತ್ರಜ್ಞಾನದ ಮೂಲಕ ಮುಖಾಮುಖಿಯಾಗಿ ಮಾತನಾಡಲು ಅವಕಾಶ ಮಾಡಲಾಗುವುದು, ಜೊತೆಗೆ ಸಿಸಿ ಟಿವಿ ಅಳವಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಕೋವಿಡ್ 19 ಪಾಸಿಟಿವ್ ಬಂದವರನ್ನು ತಕ್ಷಣವೇ ಕ್ವಾರಂಟೈನ್‍ಗೆ ದಾಖಲಿಸಬೇಕು. ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆ ಮಾಡಬೇಕು. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಗರಸಭೆ ಸದಸ್ಯರಿಗೆ ಸಲಹೆ ಮಾಡಿದರು.
ವರ್ತಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣ ಪತ್ರವನ್ನು ಹಣ್ಣು, ತರಕಾರಿ ಮತ್ತಿತರ ಮಾರಾಟ ಸಂದರ್ಭದಲ್ಲಿ ಪ್ರದರ್ಶನ ಮಾಡಬೇಕು ಎಂದರು.
ಜೀವ ಇದ್ದರೆ ಜೀವನ, ಆ ನಿಟ್ಟಿನಲ್ಲಿ ಜೀವ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕು. ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಉತ್ತಮ ಹಾಗೂ ಬಿಸಿಯಾದ ಊಟ ಪೂರೈಸಲಾಗುತ್ತದೆ ಎಂದರು.
ಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈಗಾಗಲೇ ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದವರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಮನೆ ಪಡೆದವರು ಕೂಡಲೇ ಸ್ಥಳಾಂತರ ಆಗಬೇಕು. ಆ ನಿಟ್ಟಿನಲ್ಲಿ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಗಮನಹರಿಸುವಂತೆ ಶಾಸಕರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಕೋವಿಡ್ 19 ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಗರಸಭೆ ಸದಸ್ಯರು ಮಾದರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ಒಂದು ರೀತಿ ಸವಾಲು, ಆದ್ದರಿಂದ ವೈದ್ಯರು, ಶ್ರುಶ್ರೂಷಕರು ಮತ್ತಿತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ‘ನಮ್ಮ ಎಚ್ಚರ ನಮ್ಮ ಕೈಯಲ್ಲಿರಬೇಕು’. ಅಧಿಕಾರಿಗಳು ಸ್ಪಂದಿಸದಿದ್ದರೆ ಗಮನಕ್ಕೆ ತರಬೇಕು. ಸುಖಾಸುಮ್ಮನೆ ದೂರಬಾರದು ಸುನಿಲ್ ಸುಬ್ರಮಣಿ ಅವರು ಸಲಹೆ ಮಾಡಿದರು.
ಕೊರೊನಾ ನೆಪದಲ್ಲಿ ಸರ್ಕಾರ ಅಥವಾ ಜಿಲ್ಲಾಡಳಿತಕ್ಕೆ ಯಾರೂ ಸಹ ಮುಜುಗರ ಉಂಟುಮಾಡಬಾರದು. ಕೊರೊನಾ ಲಸಿಕೆಯನ್ನು ಅರ್ಹರು ಪಡೆಯಬೇಕು. ಸರ್ಕಾರದ ನಿರ್ದೇಶನವನ್ನು ಪ್ರತಿಯೊಬ್ಬರೂ ಚಾಚುತಪ್ಪದೆ ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರು ನುಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಮಾತನಾಡಿ ನಗರದಲ್ಲಿ ಕೋವಿಡ್ ಪರೀಕ್ಷೆಯನ್ನು ಅಶ್ವಿನಿ ಆಸ್ಪತ್ರೆ, ಮಹದೇವಪೇಟೆಯ ನಗರ ಆರೋಗ್ಯ ಕೇಂದ್ರ ಹಾಗೂ ಕೋವಿಡ್ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಜೊತೆಗೆ ಎರಡು ಸಂಚಾರಿ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿ ವಾರ್ಡ್‍ಗೂ ನಗರಸಭೆ ಸದಸ್ಯರು ಟಾಸ್ಕ್‍ಪೋರ್ಸ್ ಸಮಿತಿಯಲ್ಲಿ ಇರುವುದರಿಂದ ಹೋಂ ಕ್ವಾರಂಟೈನ್‍ನಲ್ಲಿ ಇರುವವವರ ಬಗ್ಗೆ ಗಮನಹರಿಸಬೇಕು. ಯಾವುದೇ ರೀತಿಯ ಕೋವಿಡ್ ಗುಣಲಕ್ಷಣಗಳು ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು. ಜ್ವರ, ನೆಗಡಿ, ತಲೆನೋವು, ಜೊತೆಗೆ ಮೈಕೈ ನೋವು, ಬೇಧಿ ಇದ್ದರೂ ಎಚ್ಚರ ವಹಿಸಬೇಕು. ನಿಮ್ಮ ವಾರ್ಡ್ ಕೊರೊನಾ ಮುಕ್ತ ವಾರ್ಡ್ ಮಾಡಲು ಪ್ರಯತ್ನಿಸಬೇಕು ಎಂದು ಡಿಎಚ್‍ಒ ಅವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಪ್ರತಿದಿನ ಗುರಿಗಿಂತ ಹೆಚ್ಚು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್ 19 ಪಾಸಿಟಿವ್ ಬಂದವರು ಮೊದಲ ಮತ್ತು 7 ದಿನದ ಅಂತರದಲ್ಲಿ ವಿಶೇಷ ಗಮನಹರಿಸಬೇಕು ಎಂದು ಡಾ.ಕೆ.ಮೋಹನ್ ಅವರು ಸಲಹೆ ಮಾಡಿದರು.
ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ಮಾತನಾಡಿ ಮಡಿಕೇರಿ ನಗರಕ್ಕೆ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ನಗರಸಭೆ ಸದಸ್ಯರು ಸಹಕಾರ ನೀಡಬೇಕಿದೆ ಎಂದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ವರ್ತರಿಗೆ ಕೋವಿಡ್ ಪರೀಕ್ಷೆಯನ್ನು ಸೋಮವಾರ ಏರ್ಪಡಿಸಲಾಗಿತ್ತು, 150 ಮಂದಿ ವರ್ತಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, 123 ಮಂದಿಗೆ ರ್ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ಒಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಹಾಗೆಯೇ 27 ಮಂದಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ಬರಬೇಕಿದೆ ಎಂದರು.
ನಗರಸಭೆ ಸದಸ್ಯರಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ, ಅಪ್ಪಣ್ಣ, ಸವಿತಾ ರಾಕೇಶ್, ಸತೀಶ್, ಶ್ವೇತಾ, ರಮೇಶ್, ರಾಜೇಶ್ ಯಲ್ಲಪ್ಪ, ಅಮಿನ್ ಮೊಹಿಸಿನ್, ಕಲಾವತಿ, ಬಸೀರ್ ಇತರರು ಹಲವು ಸಲಹೆ ನೀಡಿದರು. ತಹಶೀಲ್ದಾರ್ ಮಹೇಶ್ ಇತರರು ಇದ್ದರು.

LEAVE A REPLY

Please enter your comment!
Please enter your name here