ಕೋಲಾರ, ಮೇ 24 ಜಿಲ್ಲೆಯಾದ್ಯಂತ ಎಲ್ಲಾ ಆಟೋ ಮತ್ತು ಕ್ಯಾಬ್ ಚಾಲಕರು ಸಂಘದಲ್ಲಿ ನೋಂದಣಿ ಮಾಡಿಸಿಲ್ಲದಿದ್ದರೂ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ನಗರದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ (ಆರ್.ಟಿ.ಓ ಕಛೇರಿ) ಹಮ್ಮಿಕೊಂಡಿದ್ದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಲಸಿಕಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಸೇರಿ ಇಡೀ ದೇಶ ಮಾರಕ ಕರೋನಾ ಸೋಂಕಿನಿಂದ ತತ್ತರಿಸಿದೆ. ಕೋವಿಡ್ 2ನೇ ಅಲೆ ಹೊಡೆತಕ್ಕೆ ಎಲ್ಲಾ ರಂಗಗಳು ಭಾರೀ ನಷ್ಟ ಅನುಭವಿಸಿವೆ. ಆದೇ ಕ್ಯಾಬ್ ಚಾಲಕರದ್ದು ಪ್ರತಿದಿನ ದುಡಿದರೆ ಮಾತ್ರ ಜೀವನ ಸಾಗಿಸಲು ಸಾಧ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ದಿನನಿತ್ಯ ಆಟೋ ಕ್ಯಾಬ್ಗಳಲ್ಲಿ ಯಾರೆಲ್ಲಾ ಸಂಚರಿಸುತ್ತಾರೆ, ಯಾರಿಗೆಲ್ಲಾ ಕರೋನಾ ಪಾಸಿಟಿವ್ ಇದೆ. ಮೊದಲ ಸಂಪರ್ಕ, ದ್ವಿತೀಯ ಸಂಪರ್ಕದ ಸೋಂಕಿತರು ಯಾರೆಲ್ಲಾ ಇರುತ್ತಾರೆ ಎಂದು ಚಾಲಕರಿಗೆ ತಿಳಿದಿರುವುದಿಲ್ಲ. ಈ ಕಾರಣದಿಂದಲೇ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಕಡ್ಡಾಯವಾಗಿ ಲಸಿಕೆ ನೀಡಿ ಅನುಕೂಲ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್, ನಗರಸಭೆ ಆಯುಕ್ತರಾದ ಆರ್.ಶ್ರೀಕಾಂತ್, ತಹಶೀಲ್ದಾರರಾದ ಶೋಭಿತಾ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ರಮ್ಯ ದೀಪಿಕಾ, ಕರ್ನಾಟಕ ರಾಜ್ಯ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಕೆ.ವಿ.ಸುರೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.