ಅಲೆಮಾರಿ/ಅರೆ ಅಲೆಮಾರಿ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವರ್ಗದವರನ್ನು ಗುರುತಿಸಿ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲ ಕೃಷ್ಣ ಅವರು ತಿಳಿಸಿದರು.
ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ. ಅಲೆಮಾರಿ/ ಅರೆ ಅಲೆಮಾರಿ / ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದಿಂದ ಸಾಲ ಸೌಲಭ್ಯ ಕೋರಿರುವ ಅರ್ಜಿದಾರರನ್ನು ಆಯ್ಕೆ ಮಾಡುವ ಸಂಬಂಧ ಅವರು ಇಂದು ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿ ಪಡಿಸಲು ವಿವಿಧ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿವೆ. ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ನೇರ ಸಾಲ ಯೋಜನೆ ಅಡಿ ಒಟ್ಟು 71 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 17 ಫಲಾನುಭವಿಗಳು, ಗಂಗಾ ಕಲ್ಯಾಣ ಯೋಜನೆ ಅಡಿ ಒಟ್ಟು 3 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 2 ಫಲಾನುಭವಿಗಳು, ಉದ್ಯಮ ಶೀಲತಾ ಸಾಲ ಸೌಲಭ್ಯ (2.00 ಲಕ್ಷ) ಯೋಜನೆ ಅಡಿ ಒಟ್ಟು 13 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 4 ಫಲಾನುಭವಿಗಳು , ಉದ್ಯಮ ಶೀಲತಾ ಸಾಲ ಸೌಲಭ್ಯ (3.50 ಲಕ್ಷ) ಯೋಜನೆ ಅಡಿ ಒಟ್ಟು 9 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 3 ಫಲಾನುಭವಿಗಳು, ದ್ವಿಚಕ್ರ ವಾಹನ ಯೋಜನೆ ಅಡಿ ಒಟ್ಟು 6 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 6 ಫಲಾನುಭವಿಗಳು, ಮೈಕ್ರೋ ಫೈನಾನ್ಸ್ ಯೋಜನೆ ಅಡಿ 2 ಗುಂಪುಗಳನ್ನು ಅಯ್ಕೆಯಾಗಿರುತ್ತದೆ ಎಂದರು
ಅದೇ ರೀತಿ ಪರಿಶಿಷ್ಟ ವರ್ಗದ ಸಮುದಾಯದವರಿಗೆ ನೇರ ಸಾಲ ಯೋಜನೆ ಅಡಿ ಒಟ್ಟು 82 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 5 ಫಲಾನುಭವಿಗಳು, ಉದ್ಯಮ ಶೀಲತಾ ಸಾಲ ಸೌಲಭ್ಯ (2.00 ಲಕ್ಷ) ಯೋಜನೆ ಅಡಿ ಒಟ್ಟು 40 ಅರ್ಜಿಗಳು ಸ್ವೀಕರಿಸಿದ್ದು ಅದರಲ್ಲಿ 2 ಫಲಾನುಭವಿಗಳು ಆಯ್ಕೆ ಮಾಡಲಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು
ಹಾಗೆಯೇ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತ ಕಾರ್ಯದರ್ಶಿ ಬಾಬು.ಎಂ, ಕೇಂದ್ರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ತುಷಾರಾಣಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವ್ಥಾಪಕ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದಶಕರಾದ ಸಿದ್ದಲಿಂಗೇಶ್, ಅಲೆಮಾರಿ ಅಭಿವೃದ್ಧಿ ಕೋಶದ ನಾಮ ನಿರ್ದೇಶಿತ ಸದಸ್ಯರುಗಳಾದ ನವರಂಗ್, ಗೋಪಾಲ್, ವಿಷಕಂಠ, ರವಿಕುಮಾರ್ ಹಾಗೂ ಇನ್ನಿತರರಿದ್ದರು.