ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ

0
64

ಶಿವಮೊಗ್ಗ, ಮೇ 29 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ ಇವರ ಸಹಯೋಗದೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ-1, ಘಟಕ-2 ರ ವಿಶೇಷ ವಾರ್ಷಿಕ ಶಿಬಿರದಲ್ಲಿ ಮೇ 26 ರಂದು ವಿಶ್ವ ಸ್ಕಿಜೋಪ್ರೇನಿಯಾ ದಿನಾಚರಣೆಯನ್ನು ಆಚರಿಸಲಾಯಿತು.

ಘೋಷವಾಕ್ಯ “ಸಮಾಜದ ದಯಾಳುತನದ ಶಕ್ತಿಯ ಆಚರಣೆ”(ಸೆಲಿಬ್ರೇಟಿಂಗ್ ದಿ ಪವರ್ ಆಫ್ ಕಮ್ಯುನಿಟಿ ಕೈಂಡ್‍ನೆಸ್) ಎಂಬ ಘೋಷವಾಕ್ಯದಡಿ ಈ ವರ್ಷ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಮಾ, ಮನೋವೈಧ್ಯರು ಡಾ. ಸಂತೋಷ್. ಎಂ.ಎನ್, ಸಹ್ಯಾದ್ರಿ ಕಾಲೇಜಿನ ಬಿಎಸ್‍ಡಬ್ಲ್ಯೂ ಪ್ರಾಧ್ಯಾಪಕರಾದ ರವಿ.ಎಂ.ಡಿ, ಸಹ್ಯಾದ್ರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಕಾಶ್ ಮರಗನಹಳ್ಳಿ, ಮನೋಸಾಮಾಜಿಕ ಕಾರ್ಯಕರ್ತ ಶ್ರೀಧರ್.ಎನ್, ಸಹ್ಯಾದ್ರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಲವ.ಜಿ.ಆರ್ ಮತ್ತಿತರರು ಉಪಸ್ಥಿತರಿದ್ದರು.
(ಫೋಟೊ ಇದೆ)

ಸ್ಕಿಜೋಫ್ರೇನಿಯಾ ರೋಗ ಲಕ್ಷಣ ಮತ್ತು ಚಿಕಿತ್ಸಾ ವಿಧಾನ:
ಸ್ಕಿಜೋಫ್ರೇನಿಯಾ ರೋಗಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯ, ಅಸಾಧ್ಯ ಎಂದು ಎಲ್ಲರೂ ಹೇಳುವ ಕಾಲವಿತ್ತು. ಅಂತಹ ರೋಗಿಗಳನ್ನು ಮಾನಸಿಕ ಅಸ್ಪತ್ರೆಗೆ ಸೇರಿಸಿ ಆತನನ್ನು ಜೀವನಪಯರ್ಂತ ಅಲ್ಲೇ ಇಡಬೇಕು ಎನ್ನುತ್ತಿದ್ದರು. ಈ ಕಾಯಿಲೆ ವ್ಯಕ್ತಿಯನ್ನು ಸಾಯುವವರೆಗೆ ಕಾಡುತ್ತದೆ ಎಂದೂ ನಂಬಲಾಗುತ್ತಿತ್ತು. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಪರಿಣಾಮಕಾರಿ ಹಾಗೂ ಸರಳ ಔಷಧಿಗಳ ಅವಿಷ್ಕಾರದಿಂದ ರೋಗಿಗಳನ್ನು ಆಸ್ಪತ್ರೆಗೆ ಸೇರಿಸದೆ, ಅವರನ್ನು ಮನೆಯಲ್ಲೇ ಇಟ್ಟು, ಮನೆಯವರ ನೆರವಿನಿಂದ ಚಿಕಿತ್ಸೆ ಪಡೆದರೆ ಫಲ ಅದ್ಭುತ. ಕಾಯಿಲೆ ಬೇಗ ವಾಸಿಯಾಗುವುದಲ್ಲದೆ ಮತ್ತೆ ಬರುವ ಸಂಭವ ಕಡಿಮೆಯಾಗುತ್ತದೆ. ರೋಗಿ ಪರಾವಲಂಬಿಯಾಗದೆ, ಉದ್ಯೋಗಸ್ತನಾಗಿ, ಉಪಯುಕ್ತ ಪ್ರಜೆಯಾಗಿ ಬಾಳಲು ಒತ್ತಾಸೆ ನೀಡುತ್ತದೆ ಎಂದು ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ ಸ್ಕಿಜೋಫ್ರೇನಿಯಾ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲೇ ಚಿಕಿತ್ಸೆ ನಡೆಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ಖಾಸಗಿ ಚಿಕಿತ್ಸಾಲಯಗಳ ಸಾಧಾರಣ ವೈದ್ಯರ ನೆರವಿನಿಂದಲೇ ಚಿಕಿತ್ಸೆ ಮುಂದುವರೆಸುವುದು ಈಗ ಜನಪ್ರಿಯವಾಗುತ್ತಿದೆ.
ಸ್ಕಿಜೋದ್ರೇನಿಯಾ ಖಾಯಿಲೆಯ ಅಂಕಿ ಅಂಶಗಳು:
•ಭಾರತದಲ್ಲಿ ಸುಮಾರು 20 ಮಿಲಿಯನ್ ಜನರು ಸ್ಕಿಜೋಫ್ರೇನಿಯಾ ಖಾಯಿಲೆಗೆ ಒಳಗಾಗಿರುತ್ತಾರೆ.
•ಬೆಂಗಳೂರು – ಸುಮಾರು 10 ಸಾವಿರ ಜನರು ಸ್ಕಿಜೋಫ್ರೇನಿಯಾ ಖಾಯಿಲೆಗೆ ಒಳಗಾಗಿರುತ್ತಾರೆ.
•ಶಿವಮೊಗ್ಗ – ಸುಮಾರು 600 ಜನರು ಸ್ಕಿಜೋಫ್ರೇನಿಯಾ ಖಾಯಿಲೆಗೆ ಒಳಗಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸ್ಕಿಜೋಫ್ರೇನಿಯಾ ಕಾಯಿಲೆಯಲ್ಲಿ ಮನಸ್ಸಿನ ಕ್ರಿಯೆಗಳಲ್ಲಿ ಮುಖ್ಯವಾಗಿ ಆಲೋಚನೆ, ಭಾವನೆಗಳು ಮತ್ತು ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇದನಾ ಕ್ರಿಯೆ ಏರುಪೇರಾಗುತ್ತದೆ.
ಅಸ್ತವ್ಯಸ್ತ ಆಲೋಚನೆ : ಅಂದರೆ ಸ್ಕಿಜೋಫ್ರೇನಿಯಾ ರೋಗಿಯ ಆಲೋಚನೆ ಸ್ಪಷ್ಟವಾಗಿರುವುದಿಲ್ಲ. ತರ್ಕಬದ್ದವಾಗಿರುವುದಿಲ್ಲ. ಅಸಂಬದ್ಧವಾಗಿರುತ್ತದೆ. ಅರ್ಥಹೀನವಾಗಿರುತ್ತದೆ. ವಿಚಿತ್ರವಾಗಿರುತ್ತದೆ. ಆತ ವ್ಯಕ್ತಪಡಿಸುವ ನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ವಿನಾಕಾರಣ ಆತ ಸಂಶಯ ಪೀಡಿತನಾಗಬಹುದು.
ಭಾವನೆಗಳ ಏರುಪೇರು : ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ವಿಪರೀತ ಕೋಪ, ದುಃಖ, ಸಂತೋಷ ಪ್ರಕಟಿಸಬಹುದು. ವಿನಾಕಾರಣ ನಗುವುದು, ಅಳುವುದು ಅಥವಾ ಯಾವುದೇ ಭಾವನೆ ತೋರಿಸದೆ ನಿರ್ಲಿಪ್ತನಂತಿರಬಹುದು.
ಅಸಹಜ ಹಾಗೂ ವಿಚಿತ್ರ ಅನುಭವಗಳು : ಸ್ಕಿಜೋಫ್ರೇನಿಯಾ ರೋಗಿಯು ಭ್ರಮಾಧೀನನಾಗಿರುತ್ತಾನೆ. ಕಣ್ಣು ನೋಡುವುದೊಂದಾದರೆ ಆತ ಅರ್ಥಮಾಡಿಕೊಳ್ಳುವುದು ಇನ್ನೊಂದಾಗುತ್ತದೆ. ಆತನ ಪ್ರಜ್ಞಾಸ್ಥಿತಿ ನೂರಕ್ಕೆ ನೂರು ಸರಿ ಇದ್ದರೂ ಹಗಲಿನಲ್ಲೂ ಹಗ್ಗವನ್ನು ಕಂಡು ಹಾವೆಂದು ಭೀತನಾಗಬಹುದು. ನೆರಳನ್ನು ಕಂಡು ಭೂತ/ಕಳ್ಳ ಎಂದು ಹೇಳಬಹುದು. ಹಾಗೆಯೇ ಕೇಳಿದ ಧ್ವನಿಗಳು, ಗ್ರಹಿಸಿದ ವಾಸನೆಯನ್ನು, ಸ್ಪರ್ಶವನ್ನು ತಪ್ಪು ತಪ್ಪಾಗಿ ವಿಶ್ಲೇಷಿಸುತ್ತಾನೆ.
ದೈಹಿಕ ಕ್ರಿಯೆಗಳ ಏರುಪೇರು : ರೋಗಿಯ ಹಸಿವು ಮತ್ತು ಆಹಾರ ಸೇವನೆ ಅಸ್ತವ್ಯಸ್ತವಾಗುತ್ತದೆ. ಮನಸ್ಸಿಗೆ ಬಂದರೆ ತಿನ್ನುವುದು, ಇಲ್ಲದಿದ್ದರೆ ದಿನಗಟ್ಟಲೆ ಉಪವಾಸವಿರಬಹುದು. ಯಾವ ವಸ್ತುವನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದೆಂದು ಆತನಿಗೆ ಗೊತ್ತಾಗುವುದಿಲ್ಲ. ಈ ಎಲ್ಲಾ ರೋಗ ಚಿಹ್ನೆಗಳು ಪ್ರತಿಯೊಬ್ಬ ರೋಗಿಯಲ್ಲೂ ಇರದೆ ಇರಬಹುದು. ಸಾಮಾನ್ಯವಾಗಿ ಮಂಕುತನ ಜಡತ್ವ, ಗಲಾಟೆ ಹಾಗೂ ಉದ್ರೇಕಾವಸ್ಥೆ ಅಥವಾ ಅತಿ ಸಂಶಯ/ಅನುಮಾನ ಪ್ರವೃತ್ತಿ ಸ್ಥಿತಿ ಕಾಣುತ್ತದೆ.

ಸ್ಕಿಜೋಪ್ರೇನಿಯಾ ಯಾರಿಗೆ ಜಾಸ್ತಿ ಬರುವ ಸಂಭವ ?
•ಇದು ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ.
•ಪದೇ ಪದೇ ಬರುವ ತೀವ್ರತರವಾದ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಕಾಯಿಲೆ ಬರಬಹುದು.
•ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನ, ಶ್ರೀಮಂತರು ಹಾಗೂ ಬಡವರು ಎಲ್ಲಾ ಬುಡಕಟ್ಟಿಗೆ ಸೇರಿದವರು ಸಮಾನವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ.

ಸ್ಕಿಜೋಪ್ರೇನಿಯಾ ಕಾಯಿಲೆಗೆ ಸದ್ಯಕ್ಕೆ ಲಭ್ಯವಿರುವ ಚಿಕಿತ್ಸಾ ಕ್ರಮಗಳು:

ಔಷಧಗಳು : ಈ ಕಾಯಿಲೆಗೆ ಔಷಧ ಕೊಡಲೇಬೇಕು. ಮಾತ್ರೆ ಅಥವಾ ಸೂಜಿಮದ್ದಿನ ರೂಪದಲ್ಲಿ ಅನೇಕ ಬಗೆಯ ಶಮನಕಾರಿ ಚುಚ್ಚುಮದ್ದುಗಳಿವೆ.
1.ಕ್ಲೋರ್ ಪೆÇ್ರಮಜಿನ್, 2.ಹಾಲೋಪೆರಿಡಾಲ್, 3.ರೆಸ್ಬಿರಿಡಾನ್, 4.ಜಿಪ್ರಾಸಿಡಾನ್, 5.ಒಲಾಂಜಿಪಿನ್ ಇತ್ಯಾದಿ

ಪ್ರತಿರೋಗಿಗೆ ಎಷ್ಟು ಪ್ರಮಾಣದ ಔಷಧಿಯ ಅಗತ್ಯವಿದೆಯೆಂದು ಆತನನ್ನು ಪರೀಕ್ಷಿಸುವ ವೈದ್ಯರು ನಿರ್ಧರಿಸುತ್ತಾರೆ.
ಕಾಯಿಲೆ ಕಾಣಿಸಿಕೊಂಡ ಕೆಲವೇ ವಾರಗಳೊಳಗೆ ಔಷಧೋಪಚಾರವನ್ನು ಪ್ರಾರಂಭಿಸಿದರೆ ಕಾಯಿಲೆ ಬೇಗ ಹಾಗೂ ಪೂರ್ತಿ ಹತೋಟಿಗೆ ಬರುತ್ತದೆ. ವೈದ್ಯರನ್ನು ಆಗ್ಗಿಂದಾಗ್ಗೆ ಕಂಡು ಸಲಹೆ ಮಾರ್ಗದರ್ಶನ ಪಡೆಯಬೇಕು. ಮನೆಯವರಿಂದ ಸರಿ ಪ್ರಮಾಣದ ಪ್ರೀತಿ, ವಿಶ್ವಾಸ, ಆಸರೆ ದೊರಕಬೇಕು.

ರೋಗಿ ವಾಸಿಸುವ ಕುಟುಂಬದ, ಕೆಲಸ ಮಾಡುವ ಪರಿಸರ ಚೆನ್ನಾಗಿಲ್ಲದಿದ್ದರೆ (ಅಥವಾ) ಆತನಿಂದ ವಿಪರೀತ ನಿರೀಕ್ಷೆ ಮಾಡುತ್ತಿದ್ದರೆ, ಯಾವುದೇ ಅಹಿತಕರ ವಾತಾವರಣವಿದ್ದರೆ ಕಾಯಿಲೆ ವಾಸಿಯಾಗದು ಹಾಗೂ ಮರುಕಳಿಸಬಹುದು.

ಕೆಲಸ-ಮನೋರಂಜನೆ-ರೋಗಿಯ ಸಾಮಥ್ರ್ಯಕ್ಕೆ ಅನುಗುಣವಾಗಿ ಆತನ ಆತ್ಮವಿಶ್ವಾಸ, ಸ್ವಾವಲಂಬನೆ ಪೆÇ್ರೀತ್ಸಾಹಿಸತಕ್ಕಂತಹ ಕೆಲಸ ಸಿಗಬೇಕು. ಮದ್ಯ, ಮಾದಕ ವಸ್ತು, ವಜ್ರ್ಯ – ರೋಗಿ ಯಾವುದೇ ಕಾರಣಕ್ಕಾಗಿ ಮದ್ಯಪಾನ ಮಾಡುವುದು ಗಾಂಜಾ, ಅಫೀಮು ಇತ್ಯಾದಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಕಾಯಿಲೆ ವಾಸಿಯಾಗದೆ ಜಾಸ್ತಿಯಾಗಬಹುದು. ಸ್ಕಿಜೋಪ್ರೇನಿಯಾ ರೋಗಿ ಯಾವುದೇ ರೀತಿ ಆಹಾರ ಪಥ್ಯ ಮಾಡಬೇಕಿಲ್ಲ. ಕ್ರಮವಾದ ಆಹಾರ ಮತ್ತು ಉತ್ತಮ ನಿದ್ರೆ ಮಾಡಬೇಕು.

ಸ್ಕಿಜೋಪ್ರೇನಿಯಾ ಕಾಯಿಲೆಗೆ ತುತ್ತಾದವರಿಗೆ ಔಷಧೋಪಚಾರದ ಅವಶ್ಯಕತೆ ಎಷ್ಟು ಇದೆಯೋ ಅμÉ್ಟೀ ಮುಖ್ಯವಾಗಿ ಕೌಟುಂಬಿಕ ಬೆಂಬಲ ಹಾಗೂ ಪ್ರೀತಿ ಕಾಳಜಿಯ ಅವಶ್ಯಕತೆ ಇದ್ದು, ಈ ಅಂಶಗಳು ದೊರೆತರೆ ವ್ಯಕ್ತಿಯು ಸ್ಕಿಜೋಫ್ರೇನಿಯಾದಂತಹ ತೀವ್ರ ಮಟ್ಟದ ಮಾನಸಿಕ ಖಾಯಿಲೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಸಾಮರಸ್ಯದ ಜೀವನ ನಡೆಸಬಹುದಾಗಿದೆ.
ಮನೋಚೈತನ್ಯ, ಕಾರ್ಯಕ್ರಮ :

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಕಾರ್ಯಕ್ರಮದಿಂದ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯ್ದ ದಿನಗಳಂದು ಮಾನಸಿಕ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ, ಔಷಧೋಪಚಾರ ಹಾಗೂ ಆಪ್ತ ಸಮಾಲೋಚನೆ ಸೌಲಭ್ಯಗಳನ್ನು ಮನೋಚೈತನ್ಯ ಕಾರ್ಯಕ್ರಮದಡಿ ನೀಡಲಾಗುತ್ತಿದೆ.
ರಾಷ್ಟ್ರೀಯ ಟೆಲಿ -ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ
•ವ್ಯಥೆಗೆ ಒಳಪಟ್ಟವರು
•ಪರೀಕ್ಷಾ ಒತ್ತಡಕ್ಕೊಳಗಾದವರು
• ಕೌಟುಂಬಿಕ ಸಮಸ್ಯೆಗೊಳಗಾದವರು
•ಆತ್ಮಹತ್ಯೆ ಆಲೋಚನೆಗಳು
•ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು
•ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು
•ಜ್ಞಾಪಕ ಶಕ್ತಿ ತೊಂದರೆಯುಳ್ಳವರು
•ಆರ್ಥಿಕ ಒತ್ತಡದಲ್ಲಿರುವವರು
•ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು.
ಶುಲ್ಕ ರಹಿತ ದೂರವಾಣಿ ಸಂಖ್ಯೆ: 14416 ಕರೆ ಮಾಡಿ ಸಲಹೆ ಪಡೆಯಬಹುದು.

LEAVE A REPLY

Please enter your comment!
Please enter your name here