ಸಂಡೂರು :ಸೆ: 24: ಶಾಲೆಗಳು ಪ್ರಾರಂಭದಿಂದ ಮುಂಬರುವ ಪರೀಕ್ಷೆಗಳವರೆಗೆ ಕರೋನಾ ನಿಯಮ ಪಾಲನೆ ಹಾಗೂ ವಿದ್ಯಾರ್ಥಿಗಳಿಗೆ ಉಂಟುಮಾಡಿರುವ ಜಾಗೃತಿಯ ಬಗ್ಗೆ ಪೂರ್ಣ ಪರಿಶೀಲನೆ ಇದಾಗಿದೆ ಎಂದು ಲೋಕಾಯುಕ್ತ ಅಧಿಕಾರಿ ಮಹದ್ಮದ್ ರಫಿಕ್ ತಿಳಿಸಿದರು.
ಅವರು ತಾಲೂಕಿನ ಭುಜಂಗನಗರ ಕ್ಲಸ್ಟರ್ನ ದೋಣಿಮಲೈ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಭುಜಂಗನಗರ ಗ್ರಾಮದ ಪ್ರೌಢಶಾಲೆಗಳು ಹಾಗೂ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಶಾಲೆಗಳಲ್ಲಿ ಕೈಗೊಳ್ಳಬೇಕಾಗಿರುವ ಅಂಶಗಳನ್ನು ಸಂಗ್ರಹಿಸಿದರು ಅದರಲ್ಲಿ ವಿದ್ಯಾರ್ಥಿಗಳಿಗೆ ತಾಪಮಾನ ಪರೀಕ್ಷೆಯ ಕಡತ, ಸ್ಯಾನಿಟೈಸರ್ ಮಾಡಿರುವ ಬಗ್ಗೆ, ಐಸೋಲೇಷ್ನ್ ಕೊಠಡಿ, ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡುವಲ್ಲಿ ವಿದ್ಯಾರ್ಥಿಗಳ ತಂಡ ರಚನೆ ಮತ್ತು ಅದರ ಪಾಲನೆಯ ಬಗ್ಗೆ ವಿದ್ಯಾರ್ಥಿಗಳಿಂದ ನೇರವಾಗಿ ಖುದ್ದು ಮಾಹಿತಿ ಸಂಗ್ರಹ, ಪ್ರತಿ ತಂಡದಲ್ಲಿ 20 ವಿದ್ಯಾರ್ಥಿಗಳು ಮಾತ್ರ ಇರುವ ಬಗ್ಗೆ ಕ್ರಮ, ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ತಾಪಮಾನ ಪರೀಕ್ಷೆ, ಪಾಲಕರಿಗೆ ಪೂರ್ಣ ಮಾಹಿತಿ ನೀಡಲಾಗಿದೆಯೋ ಇಲ್ಲವೋ ಎನ್ನುವ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ವಿರೇಶ್ ಅವರು ಮಾಹಿತಿ ನೀಡಿ ಪ್ರಮುಖವಾಗಿ ಪ್ರಥಮವಾಗಿ ವಿದ್ಯಾರ್ಥಿ ಪಾಲಕರಿಗೆ ಪೂರ್ವಬಾವಿ ಸಭೆ ನಡೆಸಿರುವುದು, ಮಕ್ಕಳಿಗೆ ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅವರನ್ನು ಕೊಠಡಿಯ ಹೊರಬಾಗದಲ್ಲಿಯೇ ಪರೀಕ್ಷೆ ಮಾಡಿದ ಮಾಹಿತಿ, ಸಾಮಾಜಿಕ ಅಂತರದ ಬಗ್ಗೆ ಪೂರ್ಣ ವರದಿ ನೀಡಿದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ಕರೋನಾ ಬಗ್ಗೆ ಕ್ವಿಜ್ ರೀತಿಯ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕಾರ್ಯವನ್ನು ಸಹ ಮಾಡಿದರು.
ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಸಿದ್ದಣ್ಣ ಯಳವಾರ್, ನಾಗೇಶ್, ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.