ಹಗರಿಬೊಮ್ಮನಹಳ್ಳಿ : ಆಶಾ ಕಾರ್ಯಕರ್ತೆಯರಿಗೆ ಏನೇ ಬಿರುದು, ಸನ್ಮಾನ ನೀಡಿದರೂ ಅವರ ಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ ಎಂಬುದನ್ನು ಸರ್ಕಾರಗಳು ಅರಿಯಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಪ್ರಮೋದ್ ಹೇಳಿದರು.
ಪಟ್ವಣದ ವಿಶ್ವಕರ್ಮ ಭವನದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಕನಿಷ್ಟ ವೇತನಕ್ಕೆ ಹಗಲಿರುಳು ದುಡಿಯುವ ವರ್ಗ ಏಕೈಕ ವರ್ಗ ಆಶಾ ಕಾರ್ಯಕರ್ತೆಯರು ಮಾತ್ರ. ಪ್ರೋತ್ಸಾಹ ಧನದ ಹೆಸರಿನಲ್ಲಿ ನಿತ್ಯ ನಿರಂತರ ಶೋಷಣೆ ನಡೆಯುತ್ತಿದೆ. ಕಳೆದ 10 – 15 ವರ್ಷಗಳಿಂದ ದುಡಿಯುತ್ತಿದ್ದರೂ ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ. ಕನಿಷ್ಟ ಕಾರ್ಮಿಕರೆಂದು ಪರಿಗಣಿಸಲು ಮೀನಾಮೇಷ ಎಣಿಸುತ್ತಿದೆ. ಜೀವನ ಪೂರ್ತಿ ಅಭದ್ರತೆಯಿಂದ ಕೂಡಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದರು.
ರಾಜ್ಯ ಸಮಿತಿ ಸದಸ್ಯೆ ಎ.ಶಾಂತಾ ಮಾತನಾಡಿ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ನ್ಯಾಯಬದ್ಧ ಕಾರ್ಮಿಕ ಹಕ್ಕುಗಳಿಂದ ಎಲ್ಲಾ ಸರ್ಕಾರಗಳು ವಂಚಿತರನ್ನಾಗಿ ಮಾಡಿವೇ ಎಂದು ಕಿಡಿಕಾರಿದರು.
ಸಮ್ಮೇಳನದಲ್ಲಿ ವಿವಿಧ ಗೊತ್ತುವಳಿಗಳನ್ನು ಮಂಡಿಸಲಾಯಿತು. ಬಳಿಕ ನೂತನ ತಾಲೂಕು ಸಮಿತಿಯನ್ನು ಚುನಾಯಿಸಲಾಯಿತು.
ನೂತನ ಸಮಿತಿ ಚುನಾಯಿತರಾದವರು.
ಮಂಜುಳಾ ಬಿ.ಜಿ.ಹಳ್ಳಿ ( ಅಧ್ಯಕ್ಷೆ)
ಅನ್ನಪೂರ್ಣ ( ಕಾರ್ಯದರ್ಶಿ)
ಜಯಲಕ್ಷ್ಮಿ, ಲಕ್ಷ್ಮೀದೇವಿ, ನಾಗರತ್ನ, ಕೆ.ಎಂ.ಪ್ರತಿಭಾ, ಗಂಗಮ್ಮ, ಮಧುಮಾಲತಿ, ಎಚ್.ಮಂಜುಳಾ (ಉಪಾಧ್ಯಕ್ಷರುಗಳು), ನಾಲ್ವರನ್ನು ಜಂಟಿ ಕಾರ್ಯದರ್ಶಿಯಾಗಿ, 14 ಆಶಾಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚುನಾಯಿಸಲಾಯಿತು.
ತಾಲೂಕು ಅಧ್ಯಕ್ಷೆ ಕೆ.ಎಸ್.ಗೌರಮ್ಮ ಪ್ರಥಮ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಲಕ್ಷ್ಮೀದೇವಿ, ಕಾರ್ಯಕರ್ತೆ ಜಯಲಕ್ಷ್ಮಿ ಇದ್ದರು.