ಬಳ್ಳಾರಿ ಫೆ 08 : ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಹತ್ತು ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ನಗರದ ಸರ್ಕಾರಿ ಪ್ರೌಢ ಶಾಲೆ ಹೆಡ್ ಮಾಸ್ಟರ್ ಅವರನ್ನು ಬಂಧಿಸಿದ ಘಟನೆ ಇಂದು ನಡೆದಿದೆ.
ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಅಭಿದಾ ಬೇಗಂ ಬಂಧಿತರು. ಎಸಿಬಿ ಡಿಎಸ್ಪಿ ಸೂರ್ಯನಾರಾಯಣ ರಾವ್ ಹಾಗೂ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಶೌಚಾಲಯ ನಿರ್ಮಿಸಿದ್ದು, ಕಾಮಗಾರಿ ಪೂರ್ಣಗೊಂಡಿರುವ ಕುರಿತು ದೃಢೀಕರಣ ಪತ್ರ ನೀಡಲು ಅಭಿದಾ ಬೇಗಂ ಅವರು ಗುತ್ತಿಗೆದಾರ ಮಹ್ಮದ್ ಜುಲ್ಫೀಕರ್ ಎನ್ನುವವರಿಗೆ 10ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು. ಒಪ್ಪಂದಂತೆ ದೂರುದಾರ ಹಣ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.