ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಜೀವ ವೈವಿಧ್ಯ ದಿನಾಚರಣೆ

0
104

ದಾವಣಗೆರೆ, ಆ.17:ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಅವಶ್ಯಕತೆಯನ್ನು ಮೀರಿ ಉಪಯೋಗಿಸುತ್ತಿರುವುದರಿಂದ ಭೂಮಂಡಲದಲ್ಲಿರುವ ಜೀವಿಗಳು ನಶಿಸಿ ಜೀವವೈವಿದ್ಯತೆಯಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಹೇಳಿದರು.
ಮಂಗಳವಾರ ಮಹಾನಗರಪಾಲಿಕೆಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಜೀವವೈವಿದ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಜೀವವೈವಿದ್ಯತೆ ರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ “ಮಿಯಾವಾಕಿ” ಪದ್ಧತಿಯಲ್ಲಿ ನಗರ ಅರಣ್ಯೀಕರಣ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮ ಮುಂದಿನ ಪೀಳಿಗೆಗಾಗಿ ಹಾಗೂ ಜೀವವೈವಿದ್ಯತೆ ಸಂರಕ್ಷಿಸಲು ಪರಿಸರ ರಕ್ಷಿಸುವಂತಹ ಪ್ರಜ್ಞಾ ಪೂರ್ವಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ.ಪಿ.ಮುದಜ್ಜಿ ಮಾತನಾಡಿ, ಸ್ಥಳೀಯ ಜೀವವೈವಿದ್ಯ ನಿರ್ವಹಣಾ ಸಮಿತಿಯ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ನಗರದಲ್ಲಿ ಜೀವವೈವಿದ್ಯ ಕಾಪಾಡುವಲ್ಲಿ ಸಹಕಾರವಾಗುತ್ತಿದೆ. ಹಾಗೂ ಇನ್ನೂ ಮುಂದೆಯೂ ಜಲ ಮೂಲಗಳ ಸಂಸ್ಕರಣೆ, ಜನರಲ್ಲಿ ತಿಳುವಳಿಕೆ ಮಾಡಿಸುವುದು, ಹಾಗೂ ಹಸಿರೀಕರಣ ಕಾರ್ಯಕ್ರಮಗಳನ್ನು ಮುಂದುವರೆಸಬೇಕು ಎಂದು ತಿಳಿಸಿದರು.
ಈ ವೇಳೆ ಕಳೆದ ಜು.15 ರಿಂದ ಆ.18 ರವರೆಗೆ ಆಯೋಜಿಸಲಾದ ಅಭಿಯಾನದಲ್ಲಿ ನಗರದ ಸಾರ್ವಜನಿಕರು, ಗೃಹಣಿಯರು ಹಾಗೂ ವಿಧ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಹಾಗೂ ಪಾರಂಪರಿಕ ವೈದ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವೈದ್ಯ ನೇರ್ಲಿಗೆ ಗುರುಸಿದ್ದಪ್ಪ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾಪ್ರಕಾಶ್, ಜೀವವೈವಿದ್ಯ ಸಮಿತಿಯ ಅಧ್ಯಕ್ಷರುಗಳಾದ ಜಯಮ್ಮ, ಗುರುಸಿದ್ದಸ್ವಾಮಿ, ರೋಹಿಣಿ, ಗಿರೀಶ್ ದೇವರಮನಿ, ರಘುದೊಡ್ಡಮನಿ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here