ಚೈಲ್ಡ್‍ಲೈನ್ ಸಲಹಾ ಸಮಿತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಪ್ರಗತಿ ಪರಿಶೀಲನಾ ಸಭೆ. ಬಾಲ್ಯವಿವಾಹ ಕುಟುಂಬದವರು ಸೇರಿ ಸಹಕರಿಸಿದ ಎಲ್ಲರೂ ಮೇಲೂ ಪ್ರಕರಣ ದಾಖಲಿಸಿ:ಜಿಲ್ಲಾಧಿಕಾರಿ ನಕುಲ್

0
64

ಬಳ್ಳಾರಿ,ಅ.20. ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ಕಡಿವಾಣಕ್ಕೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಬಾಲ್ಯವಿವಾಹಕ್ಕೆ ಯತ್ನಿಸಿದ ಎರಡು ಕಡೆಯ ಕುಟುಂಬಗಳು ಹಾಗೂ ಇದಕ್ಕೆ ಸಹಕರಿಸಿದ ಪುರೋಹಿತರು, ಕಲ್ಯಾಣಮಂಟಪದವರು,ಮದುವೆ ಆಮಂತ್ರಣ ಮುದ್ರಿಸಿದ ಮುದ್ರಕ, ಅಡುಗೆ ಮಾಡಿದವರು ಸೇರಿದಂತೆ ಈ ಕಾರ್ಯಕ್ಕೆ ಸಹಕರಿಸಿದವರೆಲ್ಲರೂ ಮೇಲೂ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚೈಲ್ಡ್‍ಲೈನ್ ಸಲಹಾ ಸಮಿತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ 247 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ. 16 ಪ್ರಕರಣಗಳು ದಾಖಲಿಸಲಾಗಿದೆ ಮತ್ತು 231 ವೈಯಕ್ತಿಕ ಬಾಲ್ಯವಿವಾಹಗಳಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಮಾಹಿತಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಕುಲ್ ಅವರು ಬಾಲ್ಯವಿವಾಹ ನಡೆಸಲು ಯತ್ನಿಸಿದವರ ಕುಟುಂಬಗಳ ವಿಷಯದಲ್ಲಿ ಫಾಲೋಅಪ್ ಅಗತ್ಯ ಎಂಬುದನ್ನು ಪ್ರತಿಪಾದಿಸಿದರು.
ನಿರಂತರ ನಿಗಾವಹಿಸಬೇಕು;ಒಂದು ವೇಳೆ ಬಾಲ್ಯವಿವಾಹ ಮಾಡಿದ್ದು ಕಂಡುಬಂದಲ್ಲಿ ಎರಡು ಕುಟುಂಬಗಳು ಹಾಗೂ ಇದಕ್ಕೆ ಸಹಕರಿಸಿದವರ ಮೇಲೆ ಮತ್ತು ಅಲ್ಲಿನ ಗ್ರಾಮಲೆಕ್ಕಿಗ, ಅಂಗನವಾಡಿ ಕಾರ್ಯಕರ್ತೆ, ಪಿಡಿಒ, ಸಂಬಂಧಿಸಿದ ಪೋಲಿಸ್ ಪೇದೆ ಅವರನ್ನು ಹೊಣೆಗಾರಿಕೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅತ್ಯಂತ ಮುತುವರ್ಜಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದರು. ಬಾಲ್ಯವಿವಾಹ ತಡೆದ ಕುಟುಂಬಗಳೊಂದಿಗೆ ಟೆಲಿಕೌನ್ಸೆಲಿಂಗ್ ಮಾಡಿ ಎಂದು ಅವರು ಸಲಹೆ ನೀಡಿದರು.

ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಿ:

ಗ್ರಾಪಂ ಮಟ್ಟದಲ್ಲಿಯೂ ಬಾಲ್ಯವಿವಾಹ ತಡೆ ಮತ್ತು ಚೈಲ್ಡ್‍ಲೈನ್ ಸಲಹಾ ಸಮಿತಿಗೆ ಸಂಬಂಧಿಸಿದ ಸಮಿತಿಗಳು ರಚಿಸಬೇಕು. ಈ ಕುರಿತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿ;ಈ ವಿಷಯದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಬೇಕು ಎಂದು ಡಿಸಿ ನಕುಲ್ ಅವರು ಹೇಳಿದರು.
ಬಾಲ್ಯವಿವಾಹ, ಮಕ್ಕಳ ರಕ್ಷಣೆ, ಪೋಕ್ಸೊ ಕಾಯ್ದೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಪಂಗಳ ಕಸತ್ಯಾಜ್ಯ ವಾಹನಗಳಲ್ಲಿ ಆಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಪೋಕ್ಸೊ ಕಾಯ್ದೆ ಗಂಭೀರವಾಗಿ ಪರಿಗಣಿಸಿ:

ಅಧಿಕಾರಿಗಳು ಪೋಕ್ಸೊ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿ ನಕುಲ್ ಅವರು ಸೂಚಿಸಿದರು.
ಪೋಕ್ಸೊ ಅಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರದೊಳಗೆ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಸಲ್ಲಿಸುವಂತೆ ಸಿಡಿಪಿಒಗಳಿಗೆ ಸೂಚಿಸಿದ ಅವರು, ವರದಿ ಯಾರ್ಯಾರು ನೀಡಿದ್ದಾರೆ;ಇನ್ಯಾರು ಬಾಕಿ ಇವೆ ಎಂಬುದರ ವರದಿಯನ್ನು ಸಲ್ಲಿಸುವಂತೆ ಸಮಿತಿಯವರಿಗೆ ತಿಳಿಸಿದರು.

ವಿಶೇಷ ಪಾಲನಾ ಯೋಜನೆ ಅಡಿ 24.6ಲಕ್ಷ ಖರ್ಚು:

ವಿಶೇಷ ಪಾಲನಾ ಯೋಜನೆ ಅಡಿ ಶೈಕ್ಷಣಿಕ,ಪೌಷ್ಠಿಕ ಆಹಾರ ಹಾಗೂ ಚಿಕಿತ್ಸೆ ಸಲುವಾಗಿ 18 ವರ್ಷದೊಳಗಿನ ಎಚ್‍ಐವಿ ಸೊಂಕಿತ ಮತ್ತು ಬಾಧಿತ 1203 ಮಕ್ಕಳಿಗೆ ಕಳೆದ ಏಪ್ರಿಲ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ 24.06ಲಕ್ಷ ರೂ.ಖರ್ಚು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಈ ಮಕ್ಕಳಿಗೆ ತಲಾ ಮಾಸಿಕ 1ಸಾವಿರದಂತೆ ಮಕ್ಕಳ ಖಾತೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಡಿಎಚ್‍ಒ ಅವರು ಎಚ್‍ಐವಿ ಸೊಂಕಿತ ಮತ್ತು ಬಾಧಿತ ಮಕ್ಕಳ ವಿವರ ಒದಗಿಸುವಂತೆ ಸೂಚಿಸಿದರು. ಪ್ರಾಯೋಜಕತ್ವ ಕಾರ್ಯಕ್ರಮದಡಿ ಸಂಕಷ್ಟದಲ್ಲಿರುವ ಮಕ್ಕಳಾದ ಅನಾಥ, ಏಕಪೋಷಕ, ಸೆರೆಮನೆ ನಿವಾಸದ ಪೋಷಕರ ಮಕ್ಕಳು, ವಿಶೇಷ ಮಕ್ಕಳು(ಕುಷ್ಟರೋಗ, ಕ್ಯಾನ್ಸರ್ ಪೀಡಿತ) ಮತ್ತು ಬಾಲಮಂದಿರಗಳಿಂದ ಬಿಡುಗಡೆ ಹೊಂದಿದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಏಪ್ರಿಲ್‍ನಿಂದ ಇಲ್ಲಿಯವರೆಗೆ 50ಮಕ್ಕಳಿಗೆ 4.84ಲಕ್ಷ ರೂ. ಮಾಸಿಕ ತಲಾ 1 ಸಾವಿರಗಳಂತೆ ಬಿಡುಗಡೆ ಮಾಡಲಾಗಿದೆ ಎಂದರು.

41 ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳ ಪ್ರಕರಣ ದಾಖಲು:

ಬಳ್ಳಾರಿ ಜಿಲ್ಲೆಯಲ್ಲಿ ಏಪ್ರಿಲ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ 41 ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಅವರು ಸಭೆಯ ಗಮನಕ್ಕೆ ತಂದರು.
ಈವರೆಗೆ 175 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಂದು ಪ್ರಕರಣ ಖುಲಾಸೆಯಾಗಿದ್ದು, ಇನ್ನೂ 174 ಪ್ರಕರಣಗಳು ಬಾಕಿ ಇವೆ ಎಂದರು.
ಪೋಕ್ಸೊ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ಮಕ್ಕಳಿಗೆ ಪುನರ್‍ವಸತಿ ಕಲ್ಪಿಸಲಾಗುತ್ತಿದ್ದು, ಅವರ ತುರ್ತುಚಿಕಿತ್ಸೆ ಸಲುವಾಗಿ ಪರಿಹಾರ ಧನ ವಿತರಿಸಲಾಗುತ್ತಿದೆ. ಇದುವರೆಗೆ 35 ಫಲಾನುಭವಿಗಳು ಈ ಅಭಯ ನಿಧಿ ಅಡಿಯ 4.15ಲಕ್ಷ ರೂ. ಬಳಕೆ ಮಾಡಿಕೊಂಡಿದ್ದಾರೆ. ಇನ್ನೂ 1.79ಲಕ್ಷ ರೂ. ಅನುದಾನವಿದೆ ಎಂದು ಅವರು ಹೇಳಿದರು.
ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆಗಳು ನಡೆದವು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಅನೇಕ ಸಲಹೆ-ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here