ಬಳ್ಳಾರಿ : ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 26, 27, 28 ರಂದು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವುದು ಬಹಳ ಸಂತೋಷಕರವಾದ ವಿಷಯ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾಕ್ಟರ್ ದೊಡ್ಡರಂಗೇಗೌಡ ರವರು ಹಿಂದಿ ಭಾಷೆಯ ಪ್ರಸ್ತಾಪ ಮಾಡುತ್ತಾ, ಇಂಗ್ಲಿಷ್ ಭಾಷೆಗೆ ವ್ಯಾಮೋಹವನ್ನು ಇಟ್ಟುಕೊಂಡಿರುವ ಕನ್ನಡಿಗರು ಹಿಂದಿ ಭಾಷೆಯನ್ನು ಏಕೆ ವಿರೋಧಿಸಬೇಕು ಎಂಬುದಾಗಿ ಮತ್ತು ಭಾರತದ ರಾಷ್ಟ್ರ ಭಾಷೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಕನ್ನಡ ವಿರೋಧಿ ನೀತಿಯನ್ನು ತೋರಿಸುತ್ತದೆ. ಆದುದರಿಂದ ಕನ್ನಡದ ಪರವಾಗಿ ಬದ್ಧತೆ ಇಲ್ಲದಿರುವ ಅನ್ಯಭಾಷೆಗಳನ್ನು ಸಮ್ಮೇಳನದ ಅಧ್ಯಕ್ಷರಾಗಿರುವುದು ಉಚಿತವಲ್ಲ, ಅವರನ್ನು ಬದಲಾಯಿಸಬೇಕು ಎಂದ ಕರ್ನಾಟಕ ಜನಸೈನ್ಯ ಆಗ್ರಹಿಸಿದೆ.
ನಗರದಲ್ಲಿ ಇಂದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ನಿರ್ಲಕ್ಷ್ಯ ವಹಿಸಿದ ಸಂದರ್ಭದಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆಯ ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಸಮ್ಮೇಳನದ ದಿನದಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು, ಇದೆಲ್ಲದಕ್ಕೂ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ದೊಡ್ಡರಂಗೇಗೌಡರು ಸಾರ್ವಜನಿಕರಿಗೆ ಉತ್ತರ ನೀಡಲೇಬೇಕು ಎಂದಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ನಡೆಯುತ್ತಿರುವುದರಿಂದ ಸರ್ವಜ್ಞ, ಕನಕದಾಸ ಹಾಗೂ ಇತರೆ ಸಂತರ ಜನಿಸಿ ಜಿಲ್ಲೆಯಾಗಿರುವುದರಿಂದ ಅಲ್ಲದೇ ವಿಶೇಷವಾಗಿ ಫೆಬ್ರವರಿ 20ರಂದು ಸರ್ವಜ್ಞರ ಜನ್ಮದಿನ ಇರುವುದರಿಂದ ಕರ್ನಾಟಕದ ಹೆಸರಾಂತ ಜಾನಪದ ಸಂತ ಕವಿ ತ್ರಿಪದಿಬ್ರಹ್ಮ ಎಂದೇ ಹೆಸರಾಗಿರುವ ಸರ್ವಜ್ಞರ ಹೆಸರನ್ನು ಜಿಲ್ಲೆಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ದ್ವಾರ ಹಾಗೂ ವೇದಿಕೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಚೆಂಚಯ್ಯ ಉತ್ತರ ಕರ್ನಾಟಕ ಉಪಾಧ್ಯಕ್ಷ ಫಯಾಜ್ ಭಾಷಾ ಮೊದಲಾದವರು ಇದ್ದರು.